ಮಂಗಳೂರು, ಡಿ. 08 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಿವೇಶನರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪಾಲಿಕೆಯ ಕಚೇರಿ ಮುಂದೆ ಸೋಮವಾರ 24 ತಾಸುಗಳ ಧರಣಿ ಆರಂಭಗೊಂಡಿತು. ನೂರಾರು ನಿವೇಶನರಹಿತರು ಧರಣಿಯಲ್ಲಿ ಪಾಲ್ಗೊಂಡಿದ್ದು, 12 ಮಂದಿ ಅನ್ನ ಸತ್ಯಾಗ್ರಹ ಕೈಗೊಂಡಿ ದ್ದಾರೆ. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ ಕೋಣಿ ನಿವೇಶನರಹಿತರಿಗೆ ಭೂಮಿ ಪಡೆಯಲು ಸಂಘ ರ್ಷಾತ್ಮಕ ಹೋರಾಟವೊಂದೇ ಅಸ್ತ್ರ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಮಂಗಳೂರು ನಗರ ಪಾಲಿಕೆಗೆ ಈಗಾಗಲೇ 3,000ಕ್ಕೂ ಹೆಚ್ಚು ಮಂದಿ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 2010ರಲ್ಲಿ ಸಿದ್ಧಪಡಿಸಿದ್ದ ಪಟ್ಟಿಯನ್ನು ಇಟ್ಟುಕೊಂಡು ನಿವೇಶನ ಹಂಚಿಕೆಗೆ ಪಾಲಿಕೆ ಮುಂದಾಗಿದೆ. ಆದರೆ ಆ ಪಟ್ಟಿಯಲ್ಲಿ ಜನಪ್ರತಿನಿಧಿಗಳಿಗೆ ಸಮೀಪವರ್ತಿಗಳಾಗಿರುವ ಹಲವು ಬೋಗಸ್ ಅರ್ಜಿದಾರರ ಹೆಸರುಗಳಿದ್ದು, ಅವನ್ನು ಕಿತ್ತು ಹಾಕಬೇಕು. ಸಿಪಿಎಂ ನಿವೇಶನ ರಹಿತರ ಹೋರಾಟ ಸಮಿತಿಯ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಬೇಕೆಂದೂ ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಮುಖಂಡ ಕೆ.ಆರ್. ಶ್ರೀಯಾನ್, ಯು. ಬಿ. ಲೋಕಯ್ಯ, ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ವಿಚಾರವಾದಿ ನರೇಂದ್ರ ನಾಯಕ್ ಮಾತನಾಡಿದರು.
ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ, ಕಾರ್ಯದರ್ಶಿ ಸಂತೋಷ್ ಶಕ್ತಿನಗರ, ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಡಿವೈಎಫ್ಐ ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ನವೀನ್ ಬೊಲ್ಪುಗುಡ್ಡೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.