ಉಡುಪಿ: ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಕನಿಷ್ಠ ತಾಲೂಕಿಗೊಂದರಂತೆ ಎಪಿಎಂಸಿ ಯಾರ್ಡ್ನಲ್ಲಿ ಖರೀದಿ ಕೇಂದ್ರವನ್ನು ಶೀಘ್ರ ಆರಂಭಿಸಲು ಕರ್ನಾಟಕ ಆಹಾರ ನಿಗಮದವರಿಗೆ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು, ಭತ್ತದ ಬೆಳೆಗಾರರಿಗೆ ತೊಂದರೆಯಾಗದಂತೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲು ನಿರ್ಧರಿಸಿಸ್ದು, ರೈತರು 50 ಕೆ ಜಿ ಬ್ಯಾಗ್ಗಳಲ್ಲಿ ಭತ್ತವನ್ನು ತರುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಭತ್ತದ ಕಟಾವು ಬೇಗನೆ ಮುಗಿಯುವುದರಿಂದ ಹಾಗೂ ಭತ್ತಕ್ಕೆ ಬೇಡಿಕೆಯಿರುವ ಸಂದರ್ಭದಲ್ಲಿ ಬೆಳೆದವರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1410 ರೂ. ಮತ್ತು ಗ್ರೇಡ್ ಭತ್ತಕ್ಕೆ 1450 ರೂ. ದರ ನಿಗಧಿಪಡಿಸಿದೆ. ರಾಜ್ಯ ಸರ್ಕಾರವು ಈ ದರಕ್ಕೆ ಹೆಚ್ಚುವರಿ ಬೆಂಬಲ ಬೆಲೆಯಾಗಿ 100 ರೂ ನೀಡಲಿದೆ.
ಕೆಎಫ್ ಸಿ ಎಸ್ ಸಿ (ಕರ್ನಾಟಕ ಫುಡ್ ಅಂಡ್ ಸಿವಿಲ್ ಸಪ್ಲೈಸ್ ಕಾರ್ಪೋರೇಷನ್ ) ವ್ಯವಸ್ಥಾಪಕರಿಗೆ ಈ ಸಂಬಂಧ ಖರೀದಿ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕ, ಖರೀದಿ ಕೇಂದ್ರದ ಬಗ್ಗೆ ಪ್ರಚಾರ, ಭತ್ತ ಖರೀದಿಸಿದ ಮೂರು ದಿನಗಳೊಳಗೆ ಆರ್ ಟಿ ಜಿ ಎಸ್ ಮೂಲಕ ರೈತರಿಗೆ ಹಣ ಪಾವತಿ, ಅಧಿಕೃತ ಗ್ರೇಡರ್ಗಳಿಂದ ಪಾಸ್ ಮಾಡಿಸಿದ ಭತ್ತ ಖರೀದಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಎಪಿಎಂಸಿ ಕಾರ್ಯದರ್ಶಿಗಳು ತಮ್ಮಲ್ಲಿ ಲಭ್ಯವಿರುವ ಗೋದಾಮುಗಳನ್ನು ಕೆಎಫ್ಸಿಎಸ್ಸಿ ವ್ಯವಸ್ಥಾಪಕರಿಗೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಂಟಿ ಕೃಷಿ ನಿರ್ದೇಶಕರು ಗ್ರೇಡರ್ ಗಳನ್ನು ನೇಮಿಸಿಕೊಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಡುಪಿ ಎಪಿಎಂಸಿ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನವನ್ನು ಗೈಡ್ ಲೈನ್ ಪ್ರಕಾರ ಬಳಸಿ ಲಿಂಕ್ ರಸ್ತೆ ಅಥವಾ ಎಪಿಎಂಸಿ ಅಭಿವೃದ್ಧಿಪಡಿಸುವ ಸಂಬಂದ ಸವಿವರ ವರದಿ ನೀಡಲು ಜಿಲ್ಲಾಧಿಕಾರಿಗಳು ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗೇಶ್ವರ್, ಜಂಟಿ ಕೃಷಿ ನಿರ್ದೇಶಕ ಆಂಟನಿ ಮರಿಯಾ ಇಮ್ಯಾನ್ಯುಯಲ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರ ಸಿದ್ದರಾಮಯ್ಯ, ಎಪಿಎಂಸಿ ಕಾರ್ಯದರ್ಶಿ, ಕೆಎಫ್ ಸಿ ಎಸ್ ಸಿ ವ್ಯವಸ್ಥಾಪಕರು, ಕೃಷಿಕ ಸಮಾಜದವರು ಉಪಸ್ಥಿತರಿದ್ದರು.