ಮಂಗಳೂರು/ಸುರತ್ಕಲ್.ಡಿ.05 ಮುತ್ತೂಟ್ಟು ಫೈನಾನ್ಸ್ ಸಂಸ್ಥೆಯ ಮೇಲೆ ಐವರು ದುಷ್ಕರ್ಮಿಗಳ ತಂಡ ದರೋಡೆ ನಡೆಸಲು ಯತ್ನಿಸಿ ಪರಾರಿಯಾದ ಘಟನೆ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಗಳೂರಲ್ಲಿ ನಡೆದಿದೆ.
ಮಂಗಳೂರಿನ ಕುಳಾಯಿ ಜಂಕ್ಷನ್ ಬಳಿಯ ಮುತ್ತೂಟ್ಟು ಫೈನಾನ್ಸ್ ಶಾಖೆಯಲ್ಲಿ ಈ ಕೃತ್ಯ ಸಂಭವಿಸಿದ್ದು, ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಹಣ ದೋಚಲು ಪ್ರಯತ್ನಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಏನಿದು ಘಟನೆ? ಸುಮಾರು ಆರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುತ್ತೂಟ್ಟು ಫೈನಾನ್ಸ್ ಗೆ 9 ಗಂಟೆ ಸುಮಾರಿನಲ್ಲಿ ಐವರು ಮುಸುಕುದಾರಿಗಳು ಓಮಿನಿ ಕಾರಿನಲ್ಲಿ ಬಂದಿದ್ದಾರೆ. ಬಳಿಕ ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಹಣ ಕದಿಯಲು ಪ್ರಯತ್ನಿಸಿದ್ದಾರೆ.
ಕಳ್ಳತನ ಮಾಡುವ ಸಂದರ್ಭದಲ್ಲಿ ಅಚಾನಕ್ಕಾಗಿ ಪೊಲೀಸ್ ವಾಹನದ ಸೈರನ್ ಶಬ್ದ ಕೇಳಿಸಿದೆ. ಈ ಶಬ್ದ ಆಲಿಸಿ ಭಯಭೀತರಾದ ದುಷ್ಕರ್ಮಿಗಳು ಪೊಲೀಸರು ಬಂದರೆಂದು ತಿಳಿದು ತಕ್ಷಣವೇ ಅಲ್ಲಿಂದ ಓಡಿ ಹೋಗಿದ್ದು, ಹಣ ಕದಿಯಲು ಸಾಧ್ಯವಾಗಿಲ್ಲ.
ಈ ವಿಚಾರ ತಿಳಿದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ವಿಚಾರಣೆಗೆ ಸಹಕಾರ ನೀಡುತ್ತಿದ್ದಾರೆ. ಸದ್ಯದಲ್ಲೇ ದರೋಡೆಕೋರರನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಮಾಲೀಕರಿಗೆ ಭರವಸೆ ನೀಡಿದ್ದಾರೆ.