ಮಂಗಳೂರು /ಪುತ್ತೂರು : ಕೊಲೆ ಯತ್ನ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಬಹುಭಾಷಾ ನಟ ವಿನೋದ್ ಆಳ್ವಾ ಅವರಿಗೆ ದಕ್ಷಿಣ ಕನ್ನಡದ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಾಜಿ ಕೆಲಸಗಾರನನ್ನು ಜೀಪ್ನ ಮೂಲಕ ಢಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಚಿತ್ರನಟ ವಿನೋದ್ ಆಳ್ವನಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಇತ್ತೀಚೆಗಷ್ಟೇ ವಿನೋದ್ ಆಳ್ವ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಎಂಬವರು (ಸಚ್ಚಿದಾನಂದ ಪವರ್ ಆಫ್ ಅಟಾರ್ನಿ ಹೊಂದಿದ್ದರು) ಆಳ್ವ ವಿರುದ್ದ ದೂರು ನೀಡಿದ್ದರು. ಆಳ್ವ ಅವರು ನನ್ನ ಕೊಲೆಗೆ ಯತ್ನಿಸಿರುವುದಾಗಿ ಸಂಪ್ಯಾ ಠಾಣೆಯಲ್ಲಿ ದೂರು ನೀಡಿದ್ದರು .ವಿನೋದ್ ಆಳ್ವನ ಹಸ್ತಕನಾಗಿದ್ದ ಸಚ್ಚಿದಾನಂದ ಪಾಟಾಳಿ ನೀಡಿದ ದೂರಿನ ಮೇರೆಗೆ ವಿನೋದ್ ಆಳ್ವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನ. 16ರಂದು ಮುಂಜಾನೆ ಚಿತ್ರನಟ ವಿನೋದ್ ಆಳ್ವನನ್ನು ಈಶ್ವರಮಂಗಲ ಕುತ್ಯಾಳ ಸಮೀಪದ ಮೂಡಾಯೂರಿನ ಆತನ ಮನೆಯಿಂದ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.
ನ. 17 ರಂದು ಪುತ್ತೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ನ. 18ರಂದು ಸುಳ್ಯ ತಾಲೂಕಿನ ದೇವರಗುಂಡದಲ್ಲಿ ಕೃತ್ಯಕ್ಕೆ ಬಳಸಲಾದ ವಿನೋದ್ ಆಳ್ವನ ಜೀಪ್ ಪತ್ತೆಯಾಗಿತ್ತು. ಅಲ್ಲದೇ ಜೀಪ್ನ್ನು ಚಲಾಯಿಸಿದ ವಿನೋದ್ ಆಳ್ವನ ಹಸ್ತಕ ಉದಯ ಚೆಕ್ಕಿತ್ತಾಯ ತಲೆಮರೆಸಿಕೊಂಡಿದ್ದಾನೆ. ಘಟನೆಯ ಬಳಿಕ ಜೀಪ್ ಸಹಿತ ಆರೋಪಿ ಪರಾರಿಯಾಗಿದ್ದನು.
ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಜಿಲ್ಲಾ ಐದನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ನ. 26ರಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಜಾಮೀನು ನೀಡದಂತೆ ಪ್ರಾಸಿಕ್ಯೂಶನ್ ಪರ ವಾದ ಮಂಡನೆಯಾಗಿತ್ತು.
ಡಿ. 1 ರಂದು ನ್ಯಾಯಾಲಯವು ವಿನೋದ್ ಆಳ್ವನಿಗೆ ಜಾಮೀನು ನೀಡಿ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ವಿನೋದ್ ಆಳ್ವ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.
ಇನ್ನೋರ್ವ ಆರೋಪಿ ಜೀಪ್ ಚಾಲಕ ಉದಯ ಚೆಕ್ಕಿತ್ತಾಯ ತಲೆಮರೆಸಿಕೊಂಡಿದ್ದಾನೆ.