ಕೊಣಾಜೆ, ಡಿ.02: ಇಂದು ಜನಸಂಖ್ಯೆಯೊಂದಿಗೆ ಆಧುನಿಕ ಸೌಲಭ್ಯಗಳು ಅಧಿಕಗೊಂಡಿವೆ. ಆದರೆ ಮಾನವೀಯ ವೌಲ್ಯಗಳು ಕಡಿಮೆಯಾಗುತ್ತಿವೆ. ಜ್ಞಾನದ ಮೂಲಕ ನಮ್ಮ ಸಂಸ್ಕೃತಿ ಮತ್ತು ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ‘ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದ ನೂರೈವತ್ತರ ಸಂಭ್ರಮ ಮತ್ತು ಪ್ರಚಾರೋಪನ್ಯಾಸದ ಉದ್ಘಾಟನೆಯನ್ನು ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಸೋಮವಾರ ನೆರವೇರಿಸಿ ಬಳಿಕ ‘ಆಹಾರ-ಲೋಕ ಸಂಚಾರ’ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.
ಭತ್ತ, ಕಬ್ಬು, ಅರಿಶಿನ, ಶುಂಠಿ, ಏಲಕ್ಕಿ, ಕರಿಮೆಣಸು, ಕಿರುಧಾನ್ಯಗಳು ಇತ್ಯಾದಿ ಭಾರತ ಮೂಲದ ಆಹಾರ ಸಸ್ಯಗಳಾಗಿವೆ. ಭಾರತದ ಮಸಾಲ ಪದಾರ್ಥಗಳಿಗೆ ಪೋರ್ಚುಗೀಸರ ಕಾಲದಲ್ಲೇ ಬಹಳಷ್ಟು ಬೇಡಿಕೆಯಿತ್ತು. ಇದಕ್ಕಾಗಿ ಬೇರೆ ಬೇರೆ ದೇಶಗಳ ನಡುವೆ ಆಗ ಗುದ್ದಾಟಗಳೂ ನಡೆದಿದ್ದವು. ಅದೇ ರೀತಿ ಶತಮಾನಗಳ ಹಿಂದೆಯೇ ವಿವಿಧ ಆಹಾರ ಪದಾರ್ಥಗಳು ಹಲವು ಬದಲಾವಣೆಯನ್ನು ನಾವು ಗಮನಿಸಬಹುದು ಎಂದರು.
ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಸರಸ್ವತಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ. ಕೆ.ಭೈರಪ್ಪ ವಹಿಸಿ ದ್ದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಟಿ.ಡಿ. ಕೆಂಪರಾಜು ಉಪಸ್ಥಿತರಿದ್ದರು
ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ಬಿ.ಶಿವರಾಮ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ಸಹಾಯಕ ನಿತಿನ್ ವಂದಿಸಿದರು. ವಿದ್ಯಾರ್ಥಿನಿ ಸಾಯಿಸುಮಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿ ನಂದಿನಿ ಎಸ್. ಕನಕದಾಸರ ಪದ ಹಾಡಿದರು.