ಉಳ್ಳಾಲ. ಡಿ,2: ತೊಕ್ಕೊಟ್ಟು ಸಮೀಪದ ಖಾಸಗಿ ಶಾಲೆಯೊಂದರ ಎಲ್ಕೆಜಿ ವಿದ್ಯಾರ್ಥಿನಿಯನ್ನು ಕೆಲವು ತಿಂಗಳ ಹಿಂದೆ ಶಾಲಾ ವಾಹನ ಚಾಲಕ ಬಾಲಕಿಗೆ ಲೈಂಗಿಕಕಿರುಕುಳ ನೀಡಿದ್ದನ್ನು ವಿರೋಧಿಸಿ ಉದ್ರಿಕ್ತಗೊಂಡ ವಿದ್ಯಾರ್ಥಿ ಕಡೆಯವರು ಆರೋಪಿ ಮಧುಕರ್ ಶೆಟ್ಟಿಗೆ ಹಲ್ಲೆ ನಡೆಸಿ ಬಸ್ಸುಗಳಿಗೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣಾ ಅಧಿಕಾರಿ ಇಬ್ಬರು ಅಮಾಯಕ ವ್ಯಕ್ತಿಗಳನ್ನು ಬಂಧಿಸಿದ್ದಾರೆಂದು ಆರೋಪಿಸಿ ಬಂಧನಕ್ಕೊಳಗಾದ ಯುವಕರ ಆಪ್ತರು ಮಂಗಳವಾರ ಧರಣಿ ನಡೆಸಿದರಲ್ಲದೆ ಅಮಾಯಕರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಕೋಟೆಕಾರು ಮಾಡೂರಿನ ಕೆಲವು ಮನೆಗಳಿಗೆ ಸೋಮವಾರ ತಡರಾತ್ರಿ ಉಳ್ಳಾಲ ಪಿಎಸ್ಐ ಭಾರತಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಇಮ್ತಿಯಾಝ್ (23), ಮುಈನ್ (21), ಸೈಯದ್ ಉಮರ್ ಕೋಯ (21), ಆಸೀಫ್(25) ಎಂಬ ನಾಲ್ಕು ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರಲ್ಲಿ ಇಮ್ತಿಯಾಝ್ ಎಂಬಾತ ಚೆಂಬುಗುಡ್ಡೆ ಶಾಲಾ ಬಾಲೆಯ ಅತ್ಯಾಚಾರ ಘಟನೆ ನಡೆದ ಸಂಧರ್ಭ ಊರಲ್ಲಿ ಇರಲಿಲ್ಲ ಎನ್ನಲಾಗಿದೆ. ಮತ್ತೊಬ್ಬ ಯುವಕ ಮುಈನ್ ವಿದೇಶದಲ್ಲಿದ್ದು ಕೆಲ ದಿನಗಳ ಹಿಂದಷ್ಟೆ ಊರಿಗೆ ಬಂದಿದ್ದರು ಎನ್ನಲಾಗಿದೆ.
ಠಾಣಾಕಾರಿಯವರು ಅನುಮಾನದ ಮೇರೆಗೆ ಏಕಾಏಕಿ ಇವರಿಬ್ಬರನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಬಂಧಿತ ಯುವಕರ ಕಡೆಯ ಸುಮಾರು ನೂರಕ್ಕೂ ಹೆಚ್ಚು ಜನರು ಮಂಗಳವಾರ ಮಧ್ಯಾಹ್ನ ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಎಸಿಪಿ ಕಲ್ಯಾಣಿ ಶೆಟ್ಟಿ ಉದ್ರಿಕ್ತರೊಂದಿಗೆ ಮಾತುಕತೆ ನಡೆಸಿ ಅಮಾಯಕರಾದ ಇಮ್ತಿಯಾಝ್ ಮತ್ತು ಮುಈನ್ರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದಾಗ ಉದ್ರಿಕ್ತರು ಪ್ರತಿಭಟನೆ ಹಿಂದೆಗೆದರು.
ಸೈಯದ್ ಉಮರ್ ಕೋಯ ಮತ್ತು ಆಸೀಫ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.