ಮಂಗಳೂರು,ಡಿ.1: ಐದು ವರ್ಷದ ಹಿಂದೆ ಶಾಫಿ ಎಂಬವರಿಗೆ ಹಲ್ಲೆಗೈದು ಜೀವಬೆದರಿಕೆಯೊಡ್ಡಿದ ಪ್ರಕರಣದ ಆರೋಪಿ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮುನೀರ್ ಬಿ.ಎಂ. (26) ಎಂಬಾತನನ್ನು ಸೋಮವಾರ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಎ.14ರಂದು ಆರೋಪಿ ಈ ಕೃತ್ಯ ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಘಟನೆಗೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅಜ್ಜಾವರ ಗ್ರಾಮದ ಶರೀಫ್ ಪಿ.ಎಂ. ಎಂಬಾತನನ್ನು ಅ.10ರಂದು ಕೊಚ್ಚಿ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಎಸ್.ಡಿ. ಅವರು ಸೋಮವಾರ ಸಂಜೆ ನಗರದ ಪೊಲೀಸ್ ಅಧೀಕ್ಷಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟನೆಗೆ ಸಂಬಂಧಿಸಿ 9 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇವರಲ್ಲಿ ಶರೀಫ್ ಮತ್ತು ಮುನೀರ್ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಈ ಆರೋಪಿಗಳ ವಿರುದ್ಧ ಲುಕ್ಔಟ್ ನೋಟಿಸನ್ನು ಹೊರಡಿಸಲಾಗಿದ್ದು, ಅದರಂತೆ ಆರೋಪಿಗಳು ವಿದೇಶದಿಂದ ಊರಿಗೆ ಬರುವ ಸಂದರ್ಭದಲ್ಲಿ ಬಂಧಿಸಲಾಗಿದೆ.
ಘಟನೆಯ ವಿವರ: ಎ.14ರಂದು ಶಾಫಿ ಎಂಬವರು ಕೆ.ಎಚ್. ನೌಷಿರ್ ಎಂಬವರ ಜೊತೆ ಬೈಕಿನಲ್ಲಿ ಮನೆಯಿಂದ ಐವರ್ನಾಡು ಕಡೆಗೆ ಹೋಗುತ್ತಿರುವಾಗ ಬೇಂಗಮಲೆ ಎಂಬಲ್ಲಿ ಹಿಂದುಗಡೆಯಿಂದ ನಾಲ್ಕು ಮೋಟಾರು ಸೈಕಲುಗಳು ಮತ್ತು ಒಂದು ಆಲ್ಟೋ ಕಾರಿನಲ್ಲಿ 15 ಮಂದಿ ಹಿಂಬಾಲಿಸಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆಸಿ ಮಾರಕಾಸ್ತ್ರಗಳಿಂದ ಹೊಡೆದು ಜೀವಬೆದರಿಕೆಯೊಡ್ಡಿದ್ದರು.