ಕುಂದಾಪುರ: ಕಳೆದ ವರ್ಷ ಸರಕಾರದ ಆದೇಶದಂತೆ ನಡೆಯದ ಕುಂದಾಪುರದ ಮೂಡ್ಲಕಟ್ಟೆ ದೊಡ್ಮನೆ ಕಂಬಳ ಈ ಬಾರಿ ಅದ್ದೂರಿಯಾಗಿ ರವಿವಾರ ಜರುಗಿತು. ಗ್ರಾಮೀಣ ಕ್ರೀಡೆಯಾದ ಈ ಕಂಬಳದಲ್ಲಿ ಸ್ಥಳೀಯ ಹಾಗೂ ತಾಲೂಕಿನ 30 ಜೊತೆ ಕೋಣಗಳನ್ನು ಕಂಬಳ ಗದ್ದೆಯಲ್ಲಿ ಓಡಿಸಲಾಯಿತು. ವಿವಿಧ ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದು ಕೋಣಗಳ ಓಟ ಜನರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಕೆಸರು ಗದ್ದೆ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಸಲಾಗಿತ್ತು.
ಮೂಡ್ಲಕಟ್ಟೆ ಕಂಬಳ: ಸುಮಾರೂ 150ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಮೂಡ್ಲಕಟ್ಟೆ ದೊಡ್ಮನೆ ಕಂಬಳವು ದೊಡ್ಮನೆ ಮನೆತನದವರು ಮತ್ತು ಊರಿನ ಸಮಸ್ತ ನಾಗರೀಕರ ಸಹಕಾರದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ಕಂಬಳ ಗದ್ದೆ ಮನೆಯವರಾದ ಜಿ. ಶೆಟ್ಟಿ, ಡಾ| ಜಿ.ಪಿ. ಶೆಟ್ಟಿ, ಡಾ| ದಿನೇಶ್ ಜಿ. ಶೆಟ್ಟಿ, ಮಹೇಶ್ ಮೂಡ್ಲಕಟ್ಟೆ ಬಿ.ಎಂ. ಸಂಜೀವ ಶೆಟ್ಟಿ, ಐ.ಎಂ. ರಾಜಾರಾಮ್ ಶೆಟ್ಟಿ ಕಂಬಳವನ್ನು ಏರ್ಪಡಿಸಿದ್ದರು. ಸಂಪ್ರದಾಯ ಹಾಗೂ ಜಾನಪದ ಕ್ರೀಡೆಯಾಗಿ ಹಿಂದಿನಿಂದಲೂ ಬಂದಂತಹ ಕಂಬಳ ಕ್ರೀಡೆಯನ್ನು ವರ್ಷಂಪ್ರತಿ ನಡೆಸಲಾಗುತ್ತಿದ್ದು, ಪ್ರೋತ್ಸಾಹದ ನಿಟ್ಟಿನಲ್ಲಿ ಕಂಬಳದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯ್ತು. ವಾಧ್ಯ-ಘೋಷಗಳು ಹಾಗೂ ಕೊರಗರ ಡೋಲು ವಾದನ ಕಂಬಳದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು.
ರವಿವಾರ ನಡೆದ ಕಂಬಳದ ವೀಕ್ಷಣೆಗೆ ಸಾವಿರಕ್ಕೂ ಅಧಿಕ ಜನರು ನೆರೆದಿದ್ದು ಹಬ್ಬದ ಸಂಭ್ರಮವಿತ್ತು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಉದಯಕುಮಾರ್ ಶೆಟ್ಟಿ ಹಾಗೂ ರಾಧಾಕೃಷ್ಣ ಶೆಟ್ಟಿ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.
ಕಂಬಳದ ಪಲಿಂತಾಶ:
ಹಲಗೆ ವಿಭಾಗ: ಪ್ರಥಮ- ಶಾಂತರಾಮ ಶೆಟ್ಟಿ ಮಾಲೀಕತ್ವದ ನೀರಜ್-ಆತ್ಮಜ್ ಬಾರ್ಕೂರು.
ದ್ವಿತೀಯ- ಶೀನ ಪೂಜಾರಿ ಮಣೂರು
ಹಗ್ಗದ ವಿಭಾಗ (ಹಿರಿಯ): ಪ್ರಥಮ- ಸದಾಶಿವ ಪೂಜಾರಿ
ದ್ವಿತೀಯ: ಶೇಖರ್ ದೇವಾಡಿಗ
ಹಗ್ಗದ ವಿಭಾಗ (ಕಿರಿಯ): ಪ್ರಥಮ- ದುರ್ಗಾ ಫ್ರೇಂಡ್ಸ್ ಬಿಜೂರು
ದ್ವಿತೀಯ- ಗೋಪಾಲಕೃಷ್ಣ ನಾಯ್ಕ್ ಶಿರೂರು
ಕೆಸರುಗದ್ದೆ ಓಟ: ಪ್ರಥಮ- ರಾಘವೆಂದ್ರ ಗಿಳಿಯಾರು
ದ್ವಿತೀಯ- ಅರುಣ ಕಟ್ಕೆರೆ
ಹಗ್ಗಜಗ್ಗಾಟ ಸ್ಪರ್ಧೆ; ಪ್ರಥಮ- ಮುಖ್ಯಪ್ರಾಣ ಫ್ರೆಂಡ್ಸ್ ಬ್ರಹ್ಮಾವರ
ದ್ವಿತೀಯ- ಶ್ರೀ ವಿಘ್ನೇಶ್ವರ ಯುವಕಮಂಡಲ ಬ್ರಹ್ಮಾವರ