ಉಡುಪಿ: ಇಬ್ಬರು ಅಯ್ಯಪ್ಪ ಮಾಲಾ ವ್ರತಧಾರಿಗಳು ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಶಿವಳ್ಳಿ ಗ್ರಾಮ ಪಡುಸಗ್ರಿಯ ಕೀರ್ತಿನಗರದ ಗೋಪಾಲ ಮೂಲ್ಯ ಅವರ ಮಗ ಅಶೋಕ್ (30) ಮತ್ತು ದಿ| ಕೃಷ್ಣ ಮೂಲ್ಯ ಅವರ ಮಗ ಉದಯ (29) ಮೃತಪಟ್ಟವರು. ಇವರಿಬ್ಬರೂ ಸಂಬಂಧಿಗಳಾಗಿದ್ದರು. ಅಶೋಕ್ ಅವರು ಕಡಿಯಾಳಿಯಲ್ಲಿ ಗಾಡಿ ಕ್ಯಾಂಟೀನ್ ನಡೆಸುತ್ತಿದ್ದು, ಉದಯ ಅವರು ಮಣಿಪಾಲ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದರು.
ಮೂವರು ಸ್ವಾಮಿಗಳು ಸ್ನಾನಕ್ಕೆಂದು ಮಧ್ಯಾಹ್ನದ ಸುಮಾರಿಗೆ ತೆರಳಿದ್ದರು. ಕೆರೆಯ ನೀರಲ್ಲಿ ದ್ದಾಗ ಅಶೋಕ್ ಅವರು ಕಾಲು ಜಾರಿ ಆಳಕ್ಕೆ ಬಿದ್ದರು.ಅವರ ರಕ್ಷಣೆಗೆಂದು ಉದಯ ಅವರು ಮುಂದಕ್ಕೆ ಧಾವಿಸಿದ್ದು, ಇಬ್ಬರೂ ಮುಳುಗಿದರು. ಅಗ್ನಿಶಾಮಕ ದಳದವರು ಆಗಮಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಇಬ್ಬರೂ ಕನ್ನಿ ಸ್ವಾಮಿಗಳು (ಮೊದಲ ಬಾರೀ ಮಾಲೆ ಹಾಕಿದವರು) ಎನ್ನಲಾಗಿದೆ.
ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ, ಶಾಸಕ ಪ್ರಮೋದ್ ಮಧ್ವರಾಜ್ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತದೇಹವನ್ನು ವೀಕ್ಷಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.