ಮೂಡುಬಿದಿರೆ,ನ.26: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕೃತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2015’ ವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಿ, ನಮಗೆ ಇಂದು ವಿವಿಧ ಮೂಲಗಳಿಂದ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತದೆ. ತಂತ್ರಜ್ಞಾನದ ಬಳಕೆಯೂ ಸುಲಭವಾಗಿದೆ. ಈ ತಂತ್ರಜ್ಞಾನಗಳ ಮೂಲಕ ಸಿಗುವ ಮಾಹಿತಿಯೇ ಇಂದು ನಮ್ಮ ದಾರಿ ತಪ್ಪಿಸುತ್ತಿದೆ. ತಂತ್ರಜ್ಞಾನವನ್ನು ಎಚ್ಚರಿಕೆಯೊಂದಿಗೆ ಬಳಸಬೇಕಾಗಿದೆ. ಸ್ವಾರಸ್ಯಕರ ಜೀವನಕ್ಕೆ ಸಂಶೋಧನಾತ್ಮಕ ಅಚ್ಚರಿಯೂ ಅಗತ್ಯ ಎಂದು ಹೇಳಿದರು.
ಭವಿಷ್ಯದ ಕವಿ, ಸಾಹಿತಿ, ಬರಹಗಾರರಾಗಿ ಅವರಿಗೆ ಚಾಲನೆ ನೀಡುವ ಇಲ್ಲಿನ ಚಟುವಟಿಕೆಗಳು ಅನನ್ಯವಾದುದು. ಕನ್ನಡ ಭಾಷೆ ಸಂಸ್ಕೃತಿ-ಸಾಹಿತ್ಯದ ಓದು-ಅಧ್ಯಯನಗಳಿಂದ ವಿದ್ಯಾರ್ಥಿಗಳು ವಿಮುಖರಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಸಮ್ಮೇಳನವು ಅವರನ್ನು ಮತ್ತೆ ಕನ್ನಡ ಸಾಹಿತ್ಯದ ಕಡೆ ಕರೆಯುವ ಸಂಜೀವಿನಿಯಾಗಿದೆ ಎಂದು ವಿಧ್ಯಾಸಿರಿಯ ಸಮ್ಮೇಳನಾಧ್ಯಕ್ಷೆ ಕು.ಶಾಲಿಕಾ ಎಕ್ಕಾರು ಹೇಳಿದರು.
ವಿದ್ಯಾರ್ಥಿಸಿರಿಯ ಉದ್ಘಾಟನೆಗಿಂತ ಮೊದಲು ನಾಡೋಜ ಹಂಪ ನಾಗರಾಜಯ್ಯ ಮತ್ತು ಡಾ.ಕಮಲಾ ಹಂಪನಾ ಇವರು ಆಳ್ವಾಸ್ ನುಡಿಸಿರಿ ಧ್ವಜಾರೋಹಣವನ್ನು ಮಾಡಿದ್ದರು.
ಸಾಗರದ ಕಿನ್ನರಿ ಮೇಳ ತುಮರಿ ತಂಡಕ್ಕೆ ನೀಡಲಾದ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಅದರ ನಿರ್ದೇಶಕ ಕೆ.ಜಿ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ತಿಪಟೂರು, ಗಾಯಕ ಗಗನ್ ಜಿ.ಗಾಂವ್ಕರ್ ಅವರಿಗೆ ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕತ ಬಾಲ ಪ್ರತಿಭೆ ಪಂಚಮಿ ಮಾರೂರು ಅವರಿಗೆ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಗಗನ್ `ಮುಚ್ಚಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಅಂತರಾತ್ಮ’ ಎಂಬ ಗೀತೆಯನ್ನು ಹಾಡಿದರು.
ಸಮ್ಮೇಳನದಲ್ಲಿ ವಿದ್ಯಾರ್ಥಿ ವಿಶೇಷೋಪನ್ಯಾಸದಲ್ಲಿ ಶ್ರದ್ಧಾ ಎನ್ ಪೈವಳಿಕೆ ‘ಕನ್ನಡ ಹಾಡುಗಬ್ಬ’ ಎಂಬ ವಿಷಯದಲ್ಲಿ, ಸೌಮ್ಯ ಸರಗಣಾಚಾರಿ ಗುಲ್ಬರ್ಗಾ ಇವರು ‘ಯುವಜನತೆ ಮತ್ತು ಭಾರತ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಕೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ ವಿದ್ಯಾರ್ಥಿ ಕವಿಗಳು ಈ ಸಮ್ಮೇಳನದ್ದಲ್ಲಿ ಭಾಗವಹಿಸಿದ್ದರು.