ಮಂಗಳೂರು,ನ.22: ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ಖಾಲಿ ಇರುವ ವೈದ್ಯಕೀಯ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಮಂಗಳೂರಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಆಯುಷ್ ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಆಯುಷ್ ಇಲಾಖೆ ಹಾಗೂ ಇತರ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಿಗದಿತ ದರವನ್ನು ನಮೂದಿಸಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದರ ನಮೂದಿಸದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಆಯುಷ್ ಸಂಘಟನೆಗಳ ಸಹಕಾರದೊಂದಿಗೆ ಡಿ.19ಮತ್ತು 20ರಂದು ಆಯುಷ್ ಹಬ್ಬವು ಡಾ. ಶಿವರಾಮ್ ಕಾರಂತ ಉದ್ಯಾವನ ಪಿಲಿಕುಳದಲ್ಲಿ ನಡೆಯಲಿದೆ ಎಂದು ಸಚಿವ ಖಾದರ್ ಈ ಸಂಧರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಯುಷ್ ಹಬ್ಬ ಮತ್ತು ಆಯುಷ್ ಫೌಂಡೇಶನ್ ಡಾ. ಆಶಾ ಜ್ಯೋತಿ ರೈ, ಡಿ ಎಚ್ ಓ ಡಾ.ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.