ಬೆಂಗಳೂರು: ಕಳೆದ ವಾರ ಹುಚ್ಚ ವೆಂಕಟ್ ಮನೆಯಿಂದ ಹೊರಬಿದ್ದಿದ್ದರಿಂದ ಎಲಿಮಿನೇಷನ್ ಪ್ರಕ್ರಿಯೆಯಿಂದ ರವಿ ಮತ್ತು ನೇಹಾ ಸುರಕ್ಷಿತವಾಗಿದ್ದರು. ಆದರೆ ಈ ವಾರದ ಎಲಿಮಿನೇಷನ್ನಲ್ಲಿ ಗಾಯಕ ರವಿ ಮುರೂರ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಅರಂಭದಲ್ಲಿ ತುಂಬಾ ಮೌನವಗಿರುತ್ತಿದ್ದ ರವಿ ಆಗಾಗ ತಮ್ಮ ಗಾಯನದ ಮೂಲಕ ಮನೆಯವರಿಗೆ ಮನೋರಂಜನೆ ನೀಡಿದ್ದರು. ಡಾನ್ಸ್ ಟಾಸ್ಕ್ನಲ್ಲಂತೂ ರವಿಯವರ ಹಾಸ್ಯಮಯ ನೃತ್ಯ ಮತ್ತು ಅಭಿನಯ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತ್ತು. ಆದರೆ ಈ ವಾರ ರವಿ ತುಂಬಾ ಮೂಡಿಯಾಗಿರುತ್ತಿದ್ದರು. ಬಿಗ್ಬಾಸ್ನಿಂದ ಹೊರಬರಬೇಕು ಎಂದು ಚಡಪಡಿಸುತ್ತಿದ್ದ ರವಿ ಇದೀಗ ಅವರ ಇಚ್ಛೆಯಂತೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಹಚ್ಚಾ ವೆಂಕಟ್ರಿಂದ ಏಟು ತಿಂದಿದ್ದ ರವಿಗೆ ಹೊರಗಡೆ ಏನೇನು ಬೆಳವಣಿಗೆಗಳು ಆಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ . ಆದರೆ ಹೊರಗಡೆ ಬಾ ನೋಡ್ಕೋತೀನಿ ಎಂದಿದ್ದ ಹುಚ್ಚ ವೆಂಕಟ್ ವಿವಾದಾದ್ಮಕ ಹೇಳಿಕೆಗಳಿಂದ ಈಗ ಅಂದರ್ ಆಗಿದ್ದಾರೆ. ಹುಚ್ಚ ವೆಂಕಟ್ನಿಂದ ತಮ್ಮ ಮಗನಿಗೆ ಏನಾದರೂ ಅನಾಹುತವಾಗಬಹುದು ಎಂದು ಹೆದರಿದ್ದ ರವಿ ತಾಯಿಗೆ ಸದ್ಯಕ್ಕಂತೂ ನಿರಾಳ ಸಿಕ್ಕಿರಬಹುದು. ಆದರೆ ಮತ್ತೆ ಜೈಲಿನಿಂದ ಹೊರಬಂದು ಹುಚ್ಚ ವೆಂಕಟ್ ರವಿ ವಿರುದ್ಧ ಸಿಡಿದೇಳುತ್ತಾರಾ? ಅಥವಾ ಆಗಿದ್ದೆಲ್ಲಾ ಮರೆತು ರವಿಯವರ ಜೊತೆ ಒಂದಾಗುತ್ತಾರಾ? ಇದಕ್ಕೆ ಕಾಲವೇ ಉತ್ತರ ನೀಡಲಿದೆ.