ಮಂಗಳೂರು,ನ.22 : ದಕ್ಷಿಣ ಕನ್ನಡ ಜಿಲ್ಲಾ ಆಸಕ್ತ ಬೈಕ್ ಸವಾರರ ತಂಡ ಹಾಗೂ ಸಹ್ಯಾದ್ರಿ ಸಂಚಯ ವತಿಯಿಂದ ಪಶ್ಚಿಮ ಘಟ್ಟದ ನೇತ್ರಾವತಿ ನದಿಯ ಮೂಲ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅಪಾರ ಹಾನಿಯಾಗಲಿರವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮಂಗಳೂರಿನಿಂದ ಎತ್ತಿನ ಹೊಳೆವರೆಗೆ ನಡೆಲಿರುವ ಬೈಕ್ ಜಾಥಾಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಎತ್ತಿನಹೊಳೆ ದಕ್ಷಿಣ ಕನ್ನಡ ಜಿಲ್ಲೆಯನ್ನು ನಾಶ ಮಾಡಲು ಹೊರಟಿರುವ ಯೋಜನೆಯಾಗಿದೆ. ಇದು ಎರಡೂ ಭಾಗದ ಜನತೆಗೂ ಬೇಡವಾದ ಯೋಜನೆಯಾಗಿದ್ದು, ಯೋಜನೆಗೆ ತಡೆಯಾಜ್ಞೆ ನೀಡಿದೆ. ಈಗಾಗಲೇ ಯೋಜನೆಯ ಸಂಬಂಧ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನ ಮಂಗಳಾ ಸ್ಟೇಡಿಯಂನಿಂದ ಆರಂಭವಾದ ಜಾಥಾದಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿ ಬೈಕ್ ಸವಾರರು ಪಾಲ್ಗೊಂಡಿದ್ದರು. ಎತ್ತಿನ ಹೊಳೆ ಯೋಜನೆ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೈಕ್ ಸವಾರರು ಹೇಳಿದ್ದಾರೆ. ಈ ವೇಳೆಯಲ್ಲಿ ಸಹ್ಯಾದ್ರಿ ಸಂಚಯ ದಿನೇಶ್ ಹೊಳ್ಳ ಮತ್ತಿತರು ಉಪಸ್ಥಿತರಿದ್ದರು.