ಕುಂದಾಪುರ: ಇನ್ನೇನು ಸಮೀಪಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್ಚಂದ್ರ ಶೆಟ್ಟಿಯವರು ಸ್ಪರ್ಧಿಸುವುದಿಲ್ಲ ಎಂದು ಎಂದು ಪತ್ರ ಬರೆದಿರುವ ನಿಲುವಿಗೆ ಅಸಮಧಾನ ವ್ಯಕ್ತಪಡಿಸಿದ ಪ್ರತಾಪ್ ಅವರ ಸಾವಿರಾರು ಅಭಿಮಾನಿಗಳು ಶನಿವಾರ ಬೆಳಿಗ್ಗೆ ಹೈಕಾಡಿಯಲ್ಲಿರುವ ನಿವಾಸಕ್ಕೆ ಆಗಮಿಸಿ ನಿಲುವನ್ನು ಬದಲಾಯಿಸಿ ಮುನ್ನೆಡೆಯುವಂತೆ ಕೋರಿದರು.
ಈ ಬಾರೀ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ಹೊರಹಾಕಿದ ಬಗ್ಗೆ ಈಗಾಗಲೇ ಅವರ ಅಭಿಮಾನಿಗಳು ನಿಲುವು ಬದಲಾಯಿಸುವಂತೆ ಒತ್ತಡ ಹಾಕಿದ್ದು ಮಾತ್ರವಲ್ಲದೇ ಅವರ ಮನೆ ಮುಂದೆ ಕುಳಿತು ನಿಲುವು ಸಡಲಿಕೆಗೆ ಪ್ರಯತ್ನ ನಡೆಸುವ ತೀರ್ಮಾನ ಕೈಗೊಂಡಿದ್ದರು. ಕಾರ್ಕಳ, ಬೈಂದೂರು, ಉಡುಪಿ, ಬ್ರಹ್ಮಾವರ, ಕುಂದಾಪುರ ಸೇರಿದಂತೆ ಸಾವಿರಾರು ಜನರು ಶನಿವಾರ ಬೆಳಿಗ್ಗೆನಿಂದಲೇ ಹೈಕಾಡಿಯ ಅವರ ಮನೆ ಮುಂದೆ ಸೇರಿದ್ದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ರಾಜು ಪೂಜಾರಿ ಈ ಸಂದರ್ಭ ಮಾತನಾಡಿ, ಪ್ರತಾಪ್ಚಂದ್ರ ಶೆಟ್ಟಿಯವರು ರಾಜಕೀಯ ಕ್ಷೇತ್ರದಲ್ಲಿ ನಿಷ್ಕಳಂಕ ಚಾರಿತ್ರ್ಯವನ್ನು ಉಳಿಸಿಕೊಂಡು ಬಂದವರಾಗಿದ್ದಾರೆ. 4 ಬಾರಿ ಎಂ.ಎಲ್.ಎ ಹಾಗೂ 2 ಬಾರಿ ಎಂ.ಎಲ್.ಸಿ ಆಗಿ ಹಿರಿತನವಿದ್ದರೂ ಅಧಿಕಾರದ ಗದ್ದುಗೆಗಾಗಿ ಎಂದೂ ಲಾಭಿ ನಡೆಸಲಿಲ್ಲ. ಸಾಮಾನ್ಯ ಕಾರ್ಯಕರ್ತರ ಹಾಗೂ ಜನರ ಧ್ವನಿಯಾಗಿ ವಿಧಾನ ಮಂಡಲಗಳಲ್ಲಿ ಅವರು ಪ್ರತಿನಿಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಅವರು ಸ್ಪರ್ಧಿಸದೇ ಇರುವ ನಿಲುವನ್ನು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ, ಹಲವರು ತಮ್ಮ ರಾಜಕೀಯ ಪಡಸಾಲೆಯಿಂದ ನಿವೃತ್ತಿ ಪಡೆದುಕೊಳ್ಳುವ ಅನೀವಾರ್ಯತೆಯ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.
ಮೀನುಗಾರ ಮುಖಂಡ ಮದನ್ಕುಮಾರ ಉಪ್ಪುಂದ, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸದಾನಂದ ಶೆಟ್ಟಿ ಕೆದೂರು, ಮಾಜಿ ಪುರಸಭಾಧ್ಯಕ್ಷೆ ದೇವಕಿ ಪಿ.ಸಣ್ಣಯ್ಯ, ಹಿರಿಯ ಸಹಕಾರಿ ವಾಸುದೇವ ಯಡಿಯಾಳ ಮುಂತಾದವರು ಪ್ರತಾಪ್ಚಂದ್ರ ಶೆಟ್ಟಿ ಅವರ ರಾಜಕೀಯ ಕಾರ್ಯವೈಖರಿ ಬಗ್ಗೆ ಅನುಭವ ಹಂಚಿಕೊಂಡಿದ್ದಲ್ಲದೇ ನಿಲುವು ಬದಲಾಯಿಸಲು ವಿನಂತಿಸಿದರು.
ಇದೇ ಸಂದರ್ಭ ಅಭಿಮಾನಿಗಳ ಕೋರಿಕೆ ಮೇರೆಗೆ ಮನೆಯಿಂದ ಹೊರ ಬಂದು ಅವರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪ್ರತಾಪ್ಚಂದ್ರ ಶೆಟ್ಟಿಯವರು ಕಳೆದ ಬಾರಿ ಅವಿರೋಧವಾಗಿ ಆಯ್ಕೆ ಆದಾಗಲೇ ತಾನು ಮುಂದಿನ ಚುನಾವಣೆಗೆ ಆಕಾಂಕ್ಷಿ ಅಲ್ಲ ಎನ್ನುವ ಮಾತುಗಳನ್ನು ಹೇಳಿದ್ದೆ. ಸಾವು ಅಥವಾ ಸೋಲು ಬಂದಾಗ ಮಾತ್ರ ರಾಜಕೀಯ ಕ್ಷೇತ್ರದಿಂದ ನಿವೃತ್ತಿ ಎನ್ನುವ ಜನಜನಿತಕ್ಕೆ ವ್ಯತಿರಿಕ್ತವಾಗಿ ನಿಲ್ಲಬೇಕು ಎನ್ನುವ ನನ್ನ ಮನಸಾಕ್ಷಿಗೆ ಅನುಗುಣವಾಗಿ ನಾನು ತೀರ್ಮಾನ ತೆಗೆದುಕೊಂಡಿದ್ದೇನೆ.
ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ಗೆ ಆಯ್ಕೆಯಾದಾಗಲೂ ಎರಡು ಜಿಲ್ಲೆಯ ಜನ ಪಕ್ಷಾತೀತವಾಗಿ ಅಭೂತಪೂರ್ವವಾದ ಬೆಂಬಲ ಹಾಗೂ ಸಹಕಾರವನ್ನು ನೀಡಿದ್ದರು. ರೈತ ಸಂಘವನ್ನು ಕಟ್ಟಿದಾಗಲೂ ಅದೇ ರೀತಿಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಈ ಎರಡು ಜಿಲ್ಲೆಯ ಜನರ ಋಣ ತೀರಿಸಬೇಕಾದ ಹೊಣೆ ನನ್ನ ಮೇಲಿದೆ. ರಾಜಕೀಯ ಕಾರಣಕ್ಕಾಗಿ ನಿಲೋದಿಲ್ಲ ಎಂದು ಪ್ರಚಾರ ನೀಡುವುದು, ಆ ಬಳಿಕ ಮತ್ತೆ ಎಲ್ಲರೂ ಒತ್ತಾಯ ಮಾಡಿದ್ದಾರಲ್ಲ ಅದಕ್ಕಾಗಿ ನಿಲ್ಲುತ್ತಿದ್ದೇನೆ ಎನ್ನುವ ರಾಜಕಾರಣದ ಮನಸ್ಥಿತಿಯ ವ್ಯಕ್ತಿ ನಾನಲ್ಲ ಎಂದು ಸ್ವಷ್ಟ ಪಡಿಸಿದರು.
ಪ್ರತಾಪ್ಚಂದ್ರ ಶೆಟ್ಟಿಯವರ ಯಾವುದೇ ಸಮರ್ಥನೆಗಳಿಗೂ ಒಪ್ಪದ ಅಭಿಮಾನಿಗಳು ನಿಮಗಲ್ಲದೆ ಇದ್ದರೂ ನಮಗೋಸ್ಕರವಾಗಿ ನಿಲುವು ಬದಲಾಯಿಸಿಕೊಳ್ಳುವಂತೆ ಪರಿ ಪರಿಯಾಗಿ ವಿನಂತಿಸಿದರು. ನೀವು ತೆಗೆದುಕೊಂಡ ನಿಲುವನ್ನು ಬದಲಾಯಿಸಿದ್ದೇನೆ ಎಂದು ಹೇಳುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಹಠಕ್ಕೆ ಕುಳಿತರು.
ಅಮಾನಿಗಳ ಸ್ಪಂದಿಸಿದ ಪ್ರತಾಪ್ಚಂದ್ರ ಶೆಟ್ಟಿಯವರು ನಾನು ನೀವು ಎರಡು ಕಡೆಯವರು ನಮ್ಮ ನಮ್ಮ ತೀರ್ಮಾನಗಳ ಬಗ್ಗೆ ಪುನರ್ ಚಿಂತನೆಯನ್ನು ಮಾಡಿಕೊಂಡು ನಂತರ ಒಂದು ಶಾಶ್ವತ ತೀರ್ಮಾನಕ್ಕೆ ಬರೋಣ. ಎಂದು ವಿನಂತಿಸಿದ ಬಳಿಕ ಪರಿಸ್ಥಿತಿ ತಾತ್ಕಾಲಿಕವಾಗಿ ತಿಳಿಯಾಯಿತು.
ಹೆಬ್ರಿಯ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಇಂಟಕ್ ಜಿಲ್ಲಾಧ್ಯಕ್ಷ ಇಂದ್ರಾಳಿ ಮುರಳೀಧರ ಶೆಟ್ಟಿ, ತಾ.ಪಂ ಸದಸ್ಯರುಗಳಾದ ರಮೇಶ್ ಗಾಣಿಗ ಕೊಲ್ಲೂರು, ರಾಮ ಶೇರುಗಾರ, ಅಲೂರು ಮಂಜಯ್ಯ ಶೆಟ್ಟಿ, ಪ್ರದೀಪ್ ಶೆಟ್ಟಿ ಕಾವ್ರಾಡಿ, ದೀಕಪ್ಕುಮಾರ ಶೆಟ್ಟಿ ಕಾಳಾವರ, ಸಾವಿತ್ರಿ ಅಳಿವೆಗದ್ದೆ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಸಂಪಿಗೇಡಿ ಸಂಜೀವ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಅಡ್ಕಿಕೊಡ್ಲು ಉದಯ್ಕುಮಾರ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೇಕಬ್ ಡಿಸೋಜಾ, ಪ್ರಭು ಕೆನಡಿ ಪಿರೇರಾ, ಸತೀಶ್ ಕಿಣಿ ಬೆಳ್ವೆ, ಜ್ಯೋತಿ ಪುತ್ರನ್, ಗೀತಾ ಶಂಭು ಪೂಜಾರಿ, ನ್ಯಾಯವಾದಿ ಕೆರಾಡಿ ಪ್ರಸನ್ನಕುಮಾರ ಶೆಟ್ಟಿ, ವಿದ್ಯಾರ್ಥಿ ಮುಖಂಡ ಸಂಪಿಗೇಡಿ ಶೃವಣ್ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.