ಉಡುಪಿ: ಮಂಗಳೂರಿನ ಟ್ರಾವೆಲಿಂಗ್ಸ್ ಸಂಸ್ಥೆಯೊಂದು ಉಮ್ರಾ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಹಣ ಪಡೆದು ಅನಂತರ ವಂಚಿಸಿದ ಬಗ್ಗೆ ಉಡುಪಿಯ ನ್ಯಾಯವಾದಿ ಮಹಮ್ಮದ್ ಇಕ್ಬಾಲ್ ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಮಹಮ್ಮದ್ ಇಕ್ಬಾಲ್ ಮತ್ತು ಪತ್ನಿ ಹಾಗೂ ಅತ್ತೆ ಸೌದಿ ಅರೇಬಿಯಾದ ಮೆಕ್ಕಾ-ಮದೀನಕ್ಕೆ ಉಮ್ರಾ ಪ್ರವಾಸ ಮಾಡುವುದಕ್ಕಾಗಿ ಮಂಗಳೂರಿನ ಅಲ್ ಇಕ್ಲಾಸ್ ಟೂರ್ಸ್ ಮತ್ತು ಟ್ರಾವೆಲ್ಸ್ಗೆ ಹೋಗಿ ಅದರ ಮಾಲಕ ಕೆ.ಅಬ್ದುಲ್ ಖಾದರ್ ಅವರನ್ನು ಭೇಟಿಯಾಗಿದ್ದು, ಉಮ್ರಾ ಪ್ರವಾಸಕ್ಕೆ 3.30 ಲಕ್ಷ ರೂ. ಅಗುತ್ತದೆ ಎಂದು ಮಾಲೀಕ ತಿಳಿಸಿದ್ದಾರೆ. ಅನಂತರ ಉಡುಪಿಯಲ್ಲಿ ಮಾತುಕತೆ ನಡೆದು 2015ರ ಫೆ.9ರಂದು 80,000 ರೂವನ್ನು ಇಕ್ಬಾಲ್ ಪಾವತಿಸಿದ್ದರು. 2015ರ ಮಾ.4ರಂದು 1 ಲಕ್ಷ ರೂ.ಗಳನ್ನು ಬಳಿಕ 2015ರ ಎ.25ರಂದು ಮತ್ತೆ 1.5 ಲಕ್ಷ ರೂ.ಗಳನ್ನು ನೀಡಿದ ಬಳಿಕ ಟ್ರಾವೆಲ್ಸ್ ಮಾಲೀಕರು ಮೇ ಮೊದಲ ವಾರದಲ್ಲಿ ಪ್ರವಾಸಕ್ಕೆ ಎಲ್ಲಾ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು.
ಆದರೇ ಪ್ರವಾಸಕ್ಕೂ ಕರೆದುಕೊಂಡು ಹೋಗದೆ ಹಣವನ್ನು ಕೂಡ ವಾಪಸು ನೀಡದೆ ವಂಚನೆ ಮಾಡಿದ್ದಾರೆ ಎಂದು ಮಹಮ್ಮದ್ ಇಕ್ಬಾಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.