ಮಂಗಳೂರು, ಅ.21: ಮಲ್ಲಿಕಟ್ಟೆಗೆ ಹೊಸ ರಸ್ತೆಯನ್ನು ಆಗ್ರಹಿಸಿ ಹಾಗೂ ಮಂಗಳೂರು ನಗರದ ಇತರ ಪ್ರಮುಖ ರಸ್ತೆಗಳ ಅವೈಜ್ಞಾನಿಕ ಕಾಂಕ್ರಿಟ್ ಕಾಮಗಾರಿ, ರಸ್ತೆಗಳ ವಿಭಜಕಗಳ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಮಲ್ಲಿಕಟ್ಟೆಯಲ್ಲಿ ವಿನೂತನ ಮಾದರಿಯಲ್ಲಿ ಧರಣಿ ನಡೆಯಿತು.
ಅಪಾಯಕಾರಿ ರಸ್ತೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿಯ ಆಸ್ಥಿಪಂಜರ ಕಿರುಚಿಕೊಂಡು ಆಳುವ ರೀತಿ ನಟಿಸಿ ಕದ್ರಿ ಮಲ್ಲಿಕಟ್ಟೆಯ ಸುತ್ತಮುತ್ತ ಈ ವಿಶೇಷ ಪ್ರತಿಭಟನೆ ನಡೆಸಲಾಯಿತು. ನಗರದ ಸುತ್ತಮುತ್ತಲಿನ ಅನಧಿಕೃತ ತಿರುವು, ರೋಡ್ ಕಟ್ಟಿಂಗ್, ಚರಂಡಿ ಹಾಗೂ ಒಳಚರಂಡಿ ನಿರ್ವಹಣೆ ಅವ್ಯವಸ್ಥೆ ವಿರೋಧಿಸಿ ಇಂತಹ ವಿಲಕ್ಷಣ ಪ್ರತಿಭಟನೆ ಮೂಲಕ ಗಮನ ಸೆಳೆದರು.
ಪ್ರತಿಭಟನಾ ನಂತರ ಮಾದ್ಯಮದೊಂದಿಗೆ ಮಾತನಾಡಿದ ವೇದಿಕೆಯ ಜೆರಾಲ್ಡ್ ಟವರ್, ಕದ್ರಿ ಮಾರ್ಕೆಟ್ನಿಂದ ಕದ್ರಿ ಮೆಸ್ಕಾಂ ಮುಂದುಗಡೆಯ ರಸ್ತೆ, ಕದ್ರಿ ಪಂಪ್ನಿಂದ ನಂತೂರು ರಸ್ತೆ, ಕದ್ರಿ ಆಭರಣ ಜುವೆಲ್ಲರ್ಸ್ನಿಂದ ಕೆನರಾ ಕ್ಲಬ್ವರೆಗಿನ ರಸ್ತೆ, ಬೆಂದೂರು ಆ್ಯಗ್ನೆಸ್ನಿಂದ ಚರ್ಚ್ ರಸ್ತೆ, ಕಂಕನಾಡಿ ಮ್ಯಾಕ್ಮಾಲ್ನಿಂದ ಕಂಕನಾಡಿ ಮೈದಾನ ಮುಂದುಗಡೆಯ ರಸ್ತೆ, ಫಾದರ್ ಮುಲ್ಲರ್ ಗೇಟ್ನಿಂದ ವೆಲೆನ್ಸಿಯಾ ವೃತ್ತದವರೆಗೆ, ಬಂಟ್ಸ್ ಹಾಸ್ಟೆಲ್ ವೃತ್ತರಿಂದ ಪಿವಿಎಸ್ ವೃತ್ತದವರೆಗಿನ ರಸ್ತೆಗಳು ಹಾಗೂ ವಿಭಜಕಗಳು ಅವೈಜ್ಞಾನಿಕದಿಂದ ಕೂಡಿವೆ ಎಂದು ದೂರಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರು ನಗರದ ರಸ್ತೆ ಅಭಿವೃದ್ಧಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿದಾಗ ಸಂತೋಷಪಟ್ಟಿದ್ದೆ. ಆದರೆ ಪಾಲಿಕೆ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸಲು ಸಂಕಟಪಡುತ್ತಿದ್ದಾರೆ ಎಂಬುದು ಬೇಸರ ತಂದಿದೆ ಎಂದು ಅವರು ಹೇಳಿದರು.
ನಗರದ ಹಲವು ಭಾಗಗಳಲ್ಲಿ ಕಳೆದ 6 ತಿಂಗಳಿಂದ 50ಕ್ಕೂ ಅಧಿಕ ಜನ ಜೀವ ಕಳೆದುಕೊಂಡಿದ್ದರೆ. ಪಾಲಿಕೆಯ ಇಂಜಿನಿಯರ್ಗಳ ಮಾರ್ಗದರ್ಶನದಲ್ಲಿ ನಡೆದ ಅಸಮರ್ಪಕ ರಸ್ತೆ ಅಭಿವೃದ್ಧಿ ನಗರದೆಲ್ಲೆಡೆ ರಸ್ತೆ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಿದ ಜೆರಾಲ್ಡ್ ಟವರ್, ತತ್ಕ್ಷಣ ಈ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು.









