ಮೂಡುಬಿದಿರೆ: ಮೂಡಬಿದ್ರೆಯಲ್ಲಿ ಇತ್ತೀಚಿಗೆ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಇನ್ನು ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ, ಇಂದು ಸಂಜೆ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ತೋಡರ್ ನಿವಾಸಿ ಮೊಹಮ್ಮದ್ ಶರೀಫ್ (42), ಕಾವೂರು ನಿವಾಸಿ ಮುಸ್ತಾಫ ( 25) ಕೈಕಂಬ ನಿವಾಸಿ ಕಬೀರ್ ಕಂದಾವರ ( 28) ಹಾಗೂ ಬಜ್ಪೆ ಕಿನ್ನಿಪದವು ನಿವಾಸಿ ಮೊಹಮ್ಮದ್ ಮುಸ್ತಾಫ (28) ಎಂದು ಗುರುತಿಸಲಾಗಿದ್ದು, ಈ ನಾಲ್ವರು ಪ್ರಮುಖ ಆರೋಪಿ ಹನೀಫ್ ಆದ್ಯಪಾಡಿ ಜೊತೆ ಪ್ರಶಾಂತ್ ಕೊಲೆಯಲ್ಲಿ ನೇರವಾಗಿ ಭಾಗಿಯಾದವರೆಂದು ಕಮಿಷನರ್ ತಿಳಿಸಿದರು.
ಈ ಮೂಲಕ ಈ ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.ಈಗಾಗಲೇ ಬಂಧಿತರಾಗಿರುವ ಇನ್ನುಳಿದ ಮೂವರು ಆರೋಪಿಗಳು ಈ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾದವರೆಂದು ಅವರು ಹೇಳಿದರು.
ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಾಲ್ಕು ಮಂದಿಯಲ್ಲಿ ಪ್ರಮುಖ ಆರೋಪಿ ಹನೀಫ್ ಆದ್ಯಪಾಡಿ ಒಬ್ಬನನ್ನು ಬಿಟ್ಟು ಉಳಿದವರನ್ನು ನ್ಯಾಯಾಂಗ ಬಂಧನ ವಿಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ಅ.26ರವರೆಗೆ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿಲಾಗಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇನ್ನೂ ಕೆಲವರ ಶೋಧ ಕಾರ್ಯ ಮುಂದುವರೆದಿದೆ ಎಂದು ಅಯುಕ್ತರು ತಿಳಿಸಿದರು.

