ಮಂಗಳೂರು, ಅ. 19: ದನ ಹಾಗೂ ಕುರಿಯ ಚರ್ಮಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ರವಿವಾರ ಮಂಗಳಾದೇವಿ ಬಳಿ ವಶಕ್ಕೆ ಪಡೆದಿರುವ ಪಾಂಡೇಶ್ವರ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ವಳಚ್ಚಿಲ್ ನಿವಾಸಿ ಉಮರಬ್ಬ (40) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಅಬ್ಬಾಸ್ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮಂಗಳಾದೇವಿ ಕಡೆಯಿಂದ ದನ ಹಾಗೂ ಕುರಿಯ ಚರ್ಮಗಳನ್ನು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕುದ್ರೋಳಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಬಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಚರಣೆ ನಡೆಸಿ ಸುಮಾರು 50 ಕೆ.ಜಿ. ದನದ ಚರ್ಮ ಮತ್ತು 3 ಕೆ.ಜಿ. ಕುರಿಯ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲ, ತೊಕ್ಕೊಟ್ಟು, ಕೊಣಾಜೆ ಹಾಗೂ ಕೇರಳದ ಗಡಿಭಾಗದಲ್ಲಿ ಅಕ್ರಮವಾಗಿ ದನ ಮತ್ತು ಕುರಿಯನ್ನು ಕಡಿದು ಅವುಗಳ ಚರ್ಮವನ್ನು ಈ ರೀತಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಉಮರಬ್ಬ ಪಿಕಪ್ ವಾಹನದಲ್ಲಿ ದನದ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದು ಬಂಧಿತನಾಗಿದ್ದ. ಇದೀಗ ಮತ್ತೆ ಅದೇ ಕೃತ್ಯದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾನೆ.





