ಮಂಗಳೂರು, ಅ.13 : ಕರ್ನಾಟಕ ಪಿಸಿಯೋತೆರಪಿ ಟೀಚರ್ಸ್ ಅಸೋಸಿಯೇಶನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಫಿಸಿಯೋತೆರಪಿ ವಿದ್ಯಾರ್ಥಿ ಸಂಘ ಹಾಗೂ ಜಿಲ್ಲೆಯ ಆಲ್ ಕಾಲೇಜು ಹೆಲ್ತ್ ವಿವಿ ಸ್ಟೂಡೆಂಟ್ಸ್ ಆಸೋಸಿಯೇಶನ್ ಆಶ್ರಯದಲ್ಲಿ ಖಾದರ್ರ 46ನೆ ಹುಟ್ಟುಹಬ್ಬದ ಪ್ರಯುಕ್ತ ನಗರದ ಪ್ರಾದೇಶಿಕ ಮಕ್ಕಳ ಅತ್ಯಾಧುನಿಕ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಲಾದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ದೇಶಿಸಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳ ಬ್ಲಡ್ ಬ್ಯಾಂಕ್ಗಳು ಹಾಗೂ ತಾಲೂಕು ಮಟ್ಟದ ರಕ್ತ ಸಂಗ್ರಹಣಾ ವ್ಯವಸ್ಥೆಯನ್ನು ಸುಸಜ್ಜಿತವಾಗಿಡುವುದಲ್ಲದೆ, ಕ್ರಮಬದ್ಧಗೊಳಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ತಾಲೂಕು ಕೇಂದ್ರಗಳಲ್ಲಿ ರಕ್ತ ಸಂಗ್ರಹದ ವ್ಯವಸ್ಥೆ ಚಿಂತಾಜನಕ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕರು, ರಾಜ್ಯ ಔಷಧ ನಿಯಂತ್ರಕರು ಹಾಗೂ ಏಡ್ಸ್ ನಿಯಂತ್ರಣ ಸೊಸೈಟಿಯ ಅಧಿಕಾರಿಗಳ ಸಭೆಯನ್ನು ಕರೆದು ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. ರಕ್ತದಾನ ಇಂದು ಅನ್ನದಾನ, ಶಿಕ್ಷಣಕ್ಕಿಂತಲೂ ಮಹತ್ವವನ್ನು ಪಡೆದಿದೆ. ರಕ್ತಕ್ಕೆ ಪರ್ಯಾಯವನ್ನು ಇನ್ನೂ ಯಾವುದೇ ಕೈಗಾರಿಕೆ, ವಿಜ್ಞಾನದಿಂದಲೂ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಕ್ತದಾನದ ಮಹತ್ವವನ್ನು ಅರಿತು ಇನ್ನೊಬ್ಬರ ಪ್ರಾಣವನ್ನು ಉಳಿಸುವಲ್ಲಿ ಸಹಕರಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಪ್ರಾರ್ಥನೆ ನಡೆಸಿದ ತೆಲ್ಸೇಮಿಯಾ ಮಕ್ಕಳು ಸಚಿವರಿಗೆ ಶುಭಾಶಯ ಸಲ್ಲಿಸಿದರು. ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿ.ಶಂಕರ್ ಶ್ಯಾಮಿಲಿ ಟ್ರಸ್ಟ್ ನ ಶ್ಯಾಮಿಲಿ ಶಂಕರ್ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಮತ್ತು ಕಿಡ್ನಿ ರೋಗಿಗಳ ಡಯಾಲಿಸಿಸ್ ಘಟಕಕ್ಕಾಗಿ 1 ಕೋ.ರೂ. ನೆರವನ್ನು ಒದಗಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ 1.80 ಲಕ್ಷ ರೂ.ಗಳನ್ನು ಡಯಾಲಿಸಿಸ್ ರೋಗಿಗಳಿಗೆ ಹಸ್ತಾಂತರಿಸಲಾಯಿತು. ಡಾ.ಎಂ.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ವತಿಯಿಂದ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್. ಶೆಟ್ಟಿಯವರು ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಶಾಲೆಗೆ ನ್ಯಾಪ್ಕಿನ್ ಬರ್ನರ್ ಯಂತ್ರ ಖರೀದಿಗಾಗಿ ನೀಡಿದ ಸಹಾಯಧನದ ಚೆಕನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಶ್ಯಾಮಿಲಿ ಶಂಕರ್ರನ್ನು ಸನ್ಮಾನಿಸಲಾಯಿತು.
ಎಂ.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್. ಶೆಟ್ಟಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ. ವಾಮದೇವ್, ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಮೈನಾ ಶೆಟ್ಟಿ, ಕಾರ್ಪೊರೇಟರ್ ವಿನಯರಾಜ್, ವೆನ್ಲಾಕ್ ಬ್ಲಡ್ ಬ್ಯಾಂಕ್ ಅಧಿಕಾರಿ ಯು.ಟಿ. ಝುಲ್ಫಿಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.
ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ರಾಜೇಶ್ವರಿದೇವಿ ಸ್ವಾಗತಿಸಿದರು. ರಕ್ತನಿಧಿ ಅಧಿಕಾರಿ ಡಾ.ಶರತ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಡಾ. ಮುಹಮ್ಮದ್ ಸುಹೈಲ್ ವಂದಿಸಿದರು.