* ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೇ ಹುಷಾರ್: ಎಸ್ಪಿ
* ಎರಡು ಸಾವಿರಕ್ಕೂ ಅಧಿಕ ಜನರು ಜನಸಂಪರ್ಕ ಸಭೆಯಲ್ಲಿ ಭಾಗಿ
ಉಡುಪಿ: ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಕಾರಿಕೊಡ್ಲು ನಿವಾಸಿಯಾದ ಸುಚಿತ್ರಾ ನಾಯ್ಕ್ ಎಂಬ ೨೧ ವರ್ಷದ ಯುವತಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಆಕೆಯನ್ನು ಮಾನಭಂಗ ಮಾಡಿಅ ಬಳಿಕ ಕೊಲೆ ಮಾಡಿದ ಘಟನೆ ಅ.1 ರಂದು ಸಂಜೆ ನಡೆದಿತ್ತು. ಕೊಲೆಗೆ ಸಂಬಂಧಿಸಿ ಆರೋಪಿ ಸ್ಥಳೀಯ ನಿವಾಸಿ ಮಣಿಕಂಠ ಎಂಬಾತನ ಬಂಧನವಾಗಿತ್ತು.
ಗೋಳಿಯಂಗಡಿಯಲ್ಲಿ ನಡೆದ ಅತ್ಯಾಚಾರ ಹಾಗೂ ಭೀಕರ ಕೊಲೆ ಈ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ನಡೆಯಬಾರದ ಘಟನೆಯಿಂದ ಇಲ್ಲಿನ ಜನರು ಭಯಗೊಂಡಿದ್ದು ಇನ್ನೂ ಕೂಡ ಆತಂಕದಿಂದ ಹೊರಬಂದಿಲ್ಲ. ಜನರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಸೋಮವಾರ ಗೋಳಿಯಂಗಡಿಯಲ್ಲಿ ಪೊಲೀಸ್ ಜನಸಂಪರ್ಕ ಸಭೆ ನಡೆಸಲಾಗಿತ್ತು. ಎರಡು ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಸೇರಿದ್ದ ಈ ಸಭೆಯಲ್ಲಿ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಮಾತನಾಡಿ ಗೋಲಿಯಂಗಡಿಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ಬ್ರೇಕ್:
ಗೋಳಿಅಂಗಡಿ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟ ಹಾಗೂ ಕೋಳಿ ಅಂಕ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬರುತ್ತಿದ್ದು ಇತ್ತೀಚಿನ ಮೂರ್ನಾಲ್ಕು ದಿನಗಳಿಂದ ಇಂಥಹ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಅಲ್ಲಲ್ಲಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸುತ್ತಿದ್ದೇವೆ. ಮುಂದಿನ ಹದಿನೈದು ದಿನಗಳೊಳಗಾಗಿ ಇಲ್ಲಿನ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿ ಇಲ್ಲಿನ ಜನರು ನೆಮ್ಮದಿಯಿಂದ ಬದುಕುವ ಹಾಗೆ ಮಾಡಲು ಇಲಾಖೆ ಕಾರ್ಯಪ್ರವ್ರತ್ತವಾಗಿದೆ ಎಂದರು. ಅಲ್ಲದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸ್ಥಳೀಯ ಕೆಲವು ಪೋಕರಿಗಳ ಮೇಲೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು
ಕೆಲವು ದಿನಗಳಿಂದವೂ ಆರೋಪಿ ಮಣಿಕಂಠನಿಗೆ ಜಾಮೀನಾಗಿದೆ ಎನ್ನುವ ಕುರಿತು ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಅವರು, ಎಂದಿಗೂ ಸುಳ್ಳು ಸಂದೇಶಗಳನ್ನು ನಂಬಬೇಡಿ,ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ, ಆತ ನಡೆಸಿದ ಕ್ರತ್ಯದ ಕುರಿತು ಅನೇಕ ಸಾಕ್ಷಿ ಪುರಾವೆಗಳನ್ನು ಈಗಾಗಲೇ ಕಲೆ ಹಾಕಲಾಗಿದೆ. ಖುದ್ದು ನಾವು ಈ ಕೇಸನ್ನು ಮಾನಿಟರ್ ಮಾಡಿ ಆರೋಪಿಗೆ ಶಿಕ್ಷೆ ಕೊಡಿಸುವ ಬಗ್ಗೆ ಕಾನೂನಿನಡಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಈ ಬಗ್ಗೆ ಜನರಲ್ಲಿ ಆತಂಕ ಬೇಡ ಎಂದು ಭರವಸೆಯಿತ್ತರು.
ಮಾತಲ್ಲಿ ಹೇಳಲ್ಲ ಕೆಲಸ ಮಾಡಿ ತೋರಿಸ್ತೇವೆ:
ಮಾತಿನಲ್ಲಿ ನಾವು ಇನ್ನು ಹೇಳೊಲ್ಲ, ಉತ್ತಮವಾಗಿ ಕೆಲಸ ಮಾಡುವ ಮೂಲಕ ಇಲ್ಲಿನ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕೇವೆ. ಸಣ್ಣಪುಟ್ಟ ಅಪರಾಧಗಳೂ ನಡೆಯದಂತೆ ಕ್ರಮಕೈಗೊಳ್ಳುತ್ತೇವೆ. ಸ್ಥಳೀಯ ಪೊಲೀಸ್ ಠಾಣೆಯವರು ಇನ್ನಷ್ಟು ಈ ಭಾಗದಲ್ಲಿ ಇನ್ನಷ್ಟು ರೌಂಡ್ಸ್ ಮಾಡಲಿದ್ದಾರೆ. ಏನೇ ಸಮಸ್ಯೆಗಳಿದ್ದರೂ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಎಂದು ಎಸ್ಪಿ ಇದೇ ಸಂದರ್ಭ ಸಾರ್ವಜನಿಕರಿಗೆ ತಿಳಿಸಿದರು.
ಹಳ್ಳಿ ಪ್ರದೇಶಗಳಲ್ಲಿ ಇಂತಹ ಕೊಲೆಯಾಗುತ್ತಿದೆ. ಇಲಾಖೆ ಬಗ್ಗೆ ಭಯ ಕಮ್ಮಿಯಿರುವ ಇಂತಹ ಕೊಲೆಗಡುಕರ ವಿರುದ್ಧ ಕಠಿಅಣವಾದ ಕಾಯ್ದೆಗಳನ್ನು ಹಾಕಲಾಗುತ್ತದೆ. ಸಣ್ಣ ತಪ್ಪಿಗೆ ಆತನಿಗೆ ಶಿಕ್ಷೆ ನೀಡಿದಾಗ ಮುಂದೆ ದೊಡ್ಡ ತಪ್ಪನ್ನು ಆತ ಮಾಡಲು ಭಯಪಡುತ್ತಾನೆ ಈ ನಿಟ್ಟಿನಲ್ಲಿ ಇಂತವರ ವಿರುದ್ಧ ಕ್ರಮ ಕೈಗೊಳ್ತೇವೆ ಎಂದು ಖಡಕ್ ಆಗಿಯೇ ಉಡುಪಿ ಎಸ್ಪಿ ಹೇಳಿದರು.
ಸುಚಿತ್ರಾ ನಿವಾಸಕ್ಕೆ ಎಸ್ಪಿ ಭೇಟಿ:
ಅತ್ಯಾಚರ ಮತ್ತು ಕೊಲೆಗೀಡಾದ ಕಾರಿಕೊಡ್ಲುವಿನ ಸುಚಿತ್ರಾ ನಿವಾಸಕ್ಕೆ ಭೇಟಿ ನೀಡಿದ ಎಸ್ಪಿ ಅಣ್ಣಾಮಲೈ ಅವರು ಸುಚಿತ್ರಾ ತಂದೆ-ತಾಯಿ ಹಾಗೂ ಸೋದರಿಯರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿ ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಪಿ.ಎಂ. ಮೊದಲಾದವರಿದ್ದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ