ಮಂಗಳೂರು : ವಾರ್ತಾಭಾರತಿ ಪತ್ರಿಕೆಯ 13ನೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆಗೊಳಿಸಿದ್ದು, ಪ್ರಥಮ ಪ್ರತಿಯನ್ನು ಪತ್ರಿಕೆಯ ಓದುಗರ ಪರವಾಗಿ ರಮೇಶ್ ಕೆ.ಸಿ. ಮತ್ತು ಮಂಗಳಾ ಸ್ವೀಕರಿಸಿದರು. ವಿಶೇಷ ಸಂಚಿಕೆಯು ವಿಶೇಷ ಸಂದರ್ಶನಗಳು, ಲೇಖನಗಳು ಮತ್ತು ಅಂತಾರಾಷ್ಟ್ರೀಯ, ರಾಷ್ಟ್ರೀಯ ಖ್ಯಾತಿಯ ಬರಹಗಳು, ಸಚಿತ್ರ ವರದಿಗಳನ್ನು ಒಳಗೊಂಡಿದೆ.
ವಿದೇಶಗಳಲ್ಲಿ ಕನ್ನಡದ ಕಂಪು: ಸಿದ್ಧರಾಮಯ್ಯ
“ವಾರ್ತಾಭಾರತಿ ಪತ್ರಿಕೆಯು ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಕನ್ನಡಿಗರನ್ನು ತಲುಪುತ್ತಿರುವುದು ಮಾತ್ರವಲ್ಲದೆ, ಕನ್ನಡದ ಕಂಪು ಹಾಗೂ ಸಂಸ್ಕೃತಿಯ ವಿಶೇಷತೆಯನ್ನು ಹರಡುವ ಕಾರ್ಯ ನಡೆಸುತ್ತಿದೆ. ಪತ್ರಿಕೆಯ 13ನೆ ವಿಶೇಷಾಂಕ ಬಿಡುಗಡೆಯ ಈ ಶುಭ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯ ಬಳಗಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಸಂದರ್ಭದಲ್ಲಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂಲಭೂತ ಸೌಲಭ್ಯ, ವಾರ್ತಾ ಮತ್ತು ಹಜ್ ಖಾತೆ ಸಚಿವ ಆರ್. ರೋಶನ್ ಬೇಗ್ ಅವರು ಮಾತನಾಡಿ, “ಅಲ್ಪಸಂಖ್ಯಾತರು ಕಟ್ಟುನಿಟ್ಟಿನ ತತ್ವಗಳು, ಉದ್ದೇಶ ಭರಿತ ಹಾಗೂ ಅತ್ಯುನ್ನತ ಗುಣಮಟ್ಟದಿಂದ ಕೂಡಿದ ಕನ್ನಡ ದಿನಪತ್ರಿಕೆಯೊಂದನ್ನು ಅಲ್ಪಸಂಖ್ಯಾತರಿಂದಲೂ ನಿರ್ವಹಿಸಲು ಸಾಧ್ಯ ಎಂಬುದನ್ನು ವಾರ್ತಾಭಾರತಿ ಪತ್ರಿಕೆ ಸಾಬೀತುಪಡಿಸಿದೆ. ಇದು ಅತ್ಯುತ್ತಮ ಸಾಧನೆಯಾಗಿದೆ. ವಾರ್ತಾಭಾರತಿ ಬಳವನ್ನು ಈ ಸಂದರ್ಭದಲ್ಲಿ ನಾನು ಅಭಿನಂದಿಸುತ್ತೇನೆ ಮತ್ತು ಉಜ್ವಲ ಭವಿಷ್ಯವನ್ನು ಆಶಿಸುತ್ತೇನೆ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ, ಡಾ.ಎಲ್. ಹನುಮಂತಯ್ಯ ಶುಭಕೋರಿದರು.
ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಬಿ.ಎ. ಮೊಯ್ದಿನ್, ಎಸ್ತರ್ ಅನಂತಮೂರ್ತಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಬ್ಯಾರೀಸ್ ಗ್ರೂಪ್ನ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ, ಮಾಧ್ಯಮ ಕಮ್ಯುನಿಕೇಶನ್ ಲಿಮಿಟೆಡ್ನ ನಿರ್ದೇಶಕ ಎಚ್.ಎಂ. ಅಫ್ರೋರ್ರು ಅಸ್ಸಾದಿ, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಡಿ.ಪಿ. ಮುರಳೀಧರ್, ವಾರ್ತಾಭಾರತಿ ಪತ್ರಿಕೆಯ ಪ್ರದಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಬೆಂಗಳೂರು ಬ್ಯೂರೋ ಮುಖ್ಯಸ್ಥ ಬಸವರಾಜ್, ಹಿರಿಯ ವರದಿಗಾರ ಪ್ರಕಾಶ ಸಿ. ಉಪಸ್ಥಿತರಿದ್ದರು.




