ಮಂಗಳೂರು, ಅ.03 : ಯುವಜನರು ಬ್ಯಾರಿ ಭಾಷೆಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಇಂಗ್ಲಿಷ್ನತ್ತ ಮಾರು ಹೋಗುತ್ತಿದ್ದಾರೆ. ಈ ರೀತಿಯ ಮನೋಭಾವ ಬೇಡ ಎಂದು ಹಿರಿಯ ಸಂಶೋಧಕ ಪ್ರೊ.ಬಿ ಎಂ ಇಚ್ಲಂಗೋಡು ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಬಾವುಟಗುಡ್ಡೆ ಯಲ್ಲಿರುವ ಮುಸ್ಲಿಂ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಫೆಡರೇಶನ್ (ಮೀಫ್) ಕಚೇರಿಯಲ್ಲಿ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಶುಕ್ರವಾರ ನಡೆದ ‘ಬ್ಯಾರಿ ಭಾಷೆ ಓದುವ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬ್ಯಾರಿ ಸಮುದಾಯದ ಮಾತೃಭಾಷೆಯಾದ ಬ್ಯಾರಿ ಭಾಷೆಯನ್ನು ಉಳಿಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ. ಇಂದು ಬ್ಯಾರಿ ಭಾಷೆಯಲ್ಲಿ ಹಲವು ಕೃತಿಗಳು ಹೊರಬಂದಿವೆ. ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚಿಸಬಲ್ಲ ಹಲವರಿದ್ದಾರೆ. ಆದರೆ ಓದುಗರ ಕೊರತೆ ಇದೆ. ಬ್ಯಾರಿ ಭಾಷಿಗರಲ್ಲೂ ಬ್ಯಾರಿ ಭಾಷೆಯ ಕೃತಿಗಳನ್ನು ಓದುವ ಆಸಕ್ತಿ ಬೆಳೆಯಬೇಕು ಎಂದು ಇಚ್ಲಂ ಗೋಡು ನುಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ‘ಬ್ಯಾರಿ ಭಾಷೆ ಓದುವ ಸ್ಪರ್ಧೆ’ಗೆ ಚಾಲನೆ ನೀಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ ಎ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ಯಾರಿ-ಕನ್ನಡ- ಇಂಗ್ಲಿಷ್ ನಿಘಂಟು ಉಪ ಸಂಪಾದಕ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸದಸ್ಯರಾದ ರೊಹರಾ ಅಬ್ಬಾಸ್, ಅಬ್ದುಲ್ ಹಮೀದ್ ಗೋಳ್ತಮಜಲು, ಮುಹಮ್ಮದ್ ಶರೀಫ್ ನಿರ್ಮುಂಜೆ, ಯೂಸುಫ್ ವಕ್ತಾರ್, ಅಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು.