ಕುಂದಾಪುರ: ಕುಂಭಾಸಿ ಕೊರಗ ಕಾಲನಿಯಲ್ಲಿ ಪಾಪಣ್ಣ ಎಂಬ ವ್ಯಕ್ತಿಯೊಂದಿಗೆ ವಾಸವಿದ್ದ ಬೀಜಾಡಿ-ಗೋಪಾಡಿ ಗ್ರಾ.ಪಂ. ಮಾಜಿ ಸದಸ್ಯೆ ಜಯಮಾಲ (35) ನಿಗೂಢವಾಗಿ ಸಾವನ್ನಪ್ಪಿದ್ದು ಮನೆ ಸಮೀಪದ ಕೊಟ್ಟಿಗೆಯಲ್ಲಿ ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಕೊಲೆಯೆಂದು ತನಿಖೆ ಕೈಗೊಂದ ಪೊಲೀಸರು ಆರೋಪಿ ಪಾಪಣ್ಣ ಎಂಬಾತನನ್ನು ಬಂಧಿಸಿದ್ದಾರೆ.
ನಡೆದಿದ್ದೇನು?: ಕಳೆದ ಮೂರು ವರ್ಷಗಳಿಂದ ಪತಿಯನ್ನು ತ್ಯಜಿಸಿ ಪಾಪಣ್ಣ ಎಂಬ ವ್ಯಕ್ತಿಯೊಂದಿಗೆ ಕುಂಭಾಸಿಯ ಕೊರಗ ಕಾಲನಿಯ ಮನೆಯಲ್ಲಿ ಸಂಸಾರ ಹೂಡಿದ್ದ ಜಯಮಾಲ ಹಾಗೂ ಪಾಪಣ್ಣ ನಡುವೆ ಕುಡಿದ ಮತ್ತಿನಲ್ಲಿ ನಡೆದ ರಂಪಾಟವೇ ಕೊಲೆಯಲ್ಲಿ ಅಂತ್ಯವಾಗಿತ್ತು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಲಿವಿಂಗ ಟುಗೆದರ್ ರೀತಿಯಲ್ಲಿ ಸಂಸಾರ ಮಾಡಿಕೊಂಡಿದ್ದರು. ಮೂರು ವರ್ಷಗಳಿಂದಲೂ ಇವರಿಬ್ಬರ ಸಂಸಾರದಲ್ಲಿ ನಿತ್ಯ ರಾತ್ರಿಯಾದರೇ ಜಗಳ ನಡೆಯುತ್ತಿತ್ತು. ಗಂಡ ಹೆಂಡತಿ ಇಬ್ಬರೂ ಮದ್ಯ ಸೇವನೆ ಚಟವುಳ್ಳವರಾಗಿದ್ದು ನಿತ್ಯ ಮದ್ಯ ಸೇವಿಸಿ ಪರಸ್ಪರ ಕಿತ್ತಾಟ ನಡೆಸುತ್ತಿದ್ದರು. ಭಾನುವಾರವೂ ಇಬ್ಬರು ವಿಪರೀತ ಮದ್ಯ ಸೇವಿಸಿದ್ದು ಪರಸ್ಪರ ನಡೆಯುತ್ತಿದ್ದ ಇವರ ರಂಪಾಟ ತಡರಾತ್ರಿಯವರೆಗೂ ಮುಂದುವರಿದಿತ್ತು. ನಿತ್ಯ ಗಲಾಟೆ ನಡೆಯುತ್ತಿದ್ದ ಕಾರಣ ಕಾಲನಿಯ ಬೇರ್ಯಾವ ಮನೆಯವರೂ ಇವರ ಗಲಾಟೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗೆ ಗಲಾಟೆ ನಡೆಯುತ್ತಿರುವಾಗ ಮಾತಿಗೆ ಮಾತು ಬೆಳೆದು ಪಾಪಣ್ಣ ತನ್ನ ಕೈಯಲ್ಲಿದ್ದ ದೊಣ್ಣೆಯೊಂದರಿಂದ ಜಯಮಾಲ ತಲೆಗೆ ಹೊಡೆದಿದ್ದಾನೆ. ಆ ಏಟು ಹಣೆಗೆ ತಗುಲಿ ಒಳಭಾಗದಲ್ಲಿ ರಕ್ತಹೆಪ್ಪುಗಟ್ಟಿ ಆಕೆ ಸಾವನ್ನಪ್ಪಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಪಾಪಣ್ಣನಿಗೆ ಹೆಂಡತಿ ಸತ್ತಿರುವ ಬಗ್ಗೆಯೂ ತಿಳಿದಿರಲಿಲ್ಲ.
ಊರಲ್ಲೇ ಇದ್ದ ಪಾಪಣ್ಣ: ಬೆಳಿಗ್ಗೆ ಎಂದಿನಂತೆ ಎದ್ದ ಆತ ೬.೩೦ಕ್ಕೆ ಮನೆಯಿಂದ ತೆರಳುತ್ತಾನೆ. ಅಲ್ಲದೇ ದಾರಿಯಲ್ಲಿ ಸಿಕ್ಕ ಓರ್ವರೊಂದಿಗೆ ಮನೆಯಲ್ಲಿ ಗಲಾಟೆ ನಡೆದ ವಿಚಾರವನ್ನು ಮಾತ್ರ ತಿಳಿಸಿ ತನ್ನ ಕೂಲಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾನೆ, ಇತ್ತ ಬೆಳಿಗ್ಗೆನ ಜಾವ ಆಸುಪಾಸಿನ ಮನೆಯವರು ನೋಡುವಾಗ ಜಯಮಾಲ ಕೊಟ್ಟಿಗೆಯಲ್ಲಿ ಶವವಾಗಿ ಬಿದ್ದಿದ್ದು ಅವರ ಸಮುದಾಯದ ಮುಖಂಡರ ಮೂಲಕ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ತನಿಖೆ ನಡೆಸುವಾಗ ಇದೊಂದು ಕೊಲೆ ಎಂಬುದಾಗಿ ತಿಳೀದುಬರುತ್ತದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಪಾಪಣ್ಣನ ಹುಡುಕಾಟದಲ್ಲಿ ತೊಡಗುತ್ತಾರೆ. ಸೋಮಾವಾರ ಬೆಳಿಗ್ಗೆನಿಂದಲೇ ಕುಂಭಾಸಿಯ ಮನೆಯೊಂದರಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ಪಾಪಣ್ಣ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಟೇಶ್ವರದ ಮದ್ಯದಂಗಡಿಗೆ ತೆರಳಿ ಮದ್ಯ ಸೇವಿಸಿದ ಈತ ಮತ್ತೆ ಕೆಲಸ ಮಾಡಿ ಸಂಜೆ ಬಳಿಕ ಇನ್ನೊಂದಷ್ಟು ಕುಡಿದು ಮನೆಗೆ ಬಾರದೇ ಎಲ್ಲೋ ಹೋಗಿ ಮಲಗಿಬಿಡುತ್ತಾನೆ. ಮಂಗಳವಾರ ಬೆಳಿಗ್ಗೆ ಕೆಲಸ ಅರಸುತ್ತಾ ಸಾಲಿಗ್ರಾಮದಲ್ಲಿರುವಾಗ ಸ್ಥಳೀಯರು ನೀಡಿದ ಖಚಿತ ಮಾಹಿತಿಯಂತೆ ಕುಂದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಪಾಪಣ್ಣನನ್ನು ಬಂಧಿಸುತ್ತಾರೆ.
ಪಾಪಣ್ಣನಿಗೂ ಇದು ಎರಡನೇ ಮದುವೆ..!
ಆರೋಪಿ ಪಾಪಣ್ಣನೂ ಈ ಹಿಂದೆ ಲಲಿತಾ ಎಂಬಾಕೆಯೊಂದಿಗೆ ಮದುವೆಯಾಗಿದ್ದು ಎರಡು ಮಕ್ಕಳಿದ್ದರು. ಆದರೇ ಇಬ್ಬರು ಮಕ್ಕಳು ಅನಾರೋಗ್ಯದಿಂದ ಸತ್ತರೇ ಆತನ ಮೊದಲನೇ ಪತ್ನಿ ಲಲಿತಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಇದರ ತರುವಾಯ ಬೀಜಾಡಿ ರೋಶನಿಧಾಮದ ರಮೇಶ್ ಎಂಬಾತನ ಪತ್ನಿ ಜಯಮಾಲ ರಮೇಶನನ್ನು ಬಿಟ್ಟು ಈತನೊಂದಿಗೆ ಕುಂಭಾಸಿಯ ಕೊರಗ ಕಾಲನಿಯಲ್ಲಿ ವಾಸವಿದ್ದಳು.
ಎಸ್ಪಿ ಭೇಟಿ: ಕೊಲೆ ಪ್ರಕರಣವಾದ ಹಿನೆಲೆಯಲ್ಲಿ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ಕೊಲೆ ನಡೆದ ಕುಂಭಾಸಿಯ ಕೊರಗ ಕಾಲನಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕುಂದಾಪುರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣದ ಬಗ್ಗೆ ವಿವರ ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಮೊದಲಾದವರು ಉಪಸ್ಥಿತರಿದ್ದರು.