ಮಂಗಳೂರು, ಸೆ.29: ದ.ಕ. ಜಿಲ್ಲೆಯಲ್ಲಿ ವ್ಯಾಪಾಕವಾಗಿ ಅನೈತಿಕ ಗೂಂಡಾಗಿರಿ ನಡೆಯುತ್ತಿದೆ. ಇದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತ್ರತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಯಿತು.
ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ನಗರದ ಲಾಲ್ ಬಾಗ್ನ ಗಾಂಧಿ ಪ್ರತಿಮೆ ಬಳಿಯಿಂದ ಆರಂಭಗೊಂಡ ಈ ಪಾದಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗಾಂಧಿ ಪ್ರತಿಮೆಗೆ ಹಾರ ತೊಡಿಸುವ ಮೂಲಕ ಚಾಲನೆ ನೀಡಿದರು. ಪಾದಯಾತ್ರೆ ಕಂಕನಾಡಿ ಮಾರುಕಟ್ಟೆ ಬಳಿಯ ಮೈದಾನದಲ್ಲಿ ಸಮಾರೋಪಗೊಂಡಿತ್ತು.
.
ಸಮಾರೋಪ ಸಭೆಯನ್ನುದ್ದೇಶಿಸಿ ಹೊಸಮಾರು ಮಠದ ಶ್ರೀ ವಿಖ್ಯಾತಾನಂದ ಸ್ವಾಮಿ ಮಾತನಾಡಿ, ಭಾರತೀಯ ಸಂವಿಧಾನ ಶ್ರೇಷ್ಠವಾದದ್ದು. ಶಾಂತಿ, ಸೌರ್ಹಾದತೆ ನಮ್ಮ ಆಚರಣೆಯ ಮೂಲಕ ವ್ಯಕ್ತವಾಗಬೇಕು ಎಂದು ಹೇಳಿದರು.
ಅನೈತಿಕ ಪೊಲೀಸ್ಗಿರಿಯ ಹೆಸರಿನಲ್ಲಿ ಜಿಲ್ಲೆಯಲ್ಲಿ ಯುವಕ-ಯುವತಿಯರನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಗೂಂಡಾಗಿರಿಯನ್ನು ವಿರೋಧಿಸದಿದ್ದರೆ ಭವಿಷ್ಯದಲ್ಲಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ಐವನ್ ಡಿಸೋಜ ತಿಳಿಸಿದರು.
ಶಾಸಕ ಮೊಯ್ದಿನ್ ಬಾವ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯನ್ನು ತಡೆಯಲು ಯುವ ಕಾಂಗ್ರೆಸ್ ಪಡೆ ಸಜ್ಜಾಗಿದೆ ಎನ್ನುವುದನ್ನು ಪಾದಯಾತ್ರೆ ತೋರಿಸಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ನೈತಿಕ ಪೊಲೀಸ್ಗಿರಿಯ ಹೆಸರಿನಲ್ಲಿ ಯುವಕರ ಮೇಲೆ ನಡೆಯುತ್ತಿರುವ ಗೂಂಡಾಗಿರಿಯನ್ನು ಈ ಪಾದಯಾತ್ರೆಯ ಮೂಲಕ ಖಂಡಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ವ್ಯಾಪಾಕವಾಗಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿ ವಿರುದ್ಧ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಮೊದಲ ಹೆಜ್ಜೆಯಾಗಿಯಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭ ಕ್ರೈಸ್ತ ಧರ್ಮಗುರು ವಂ.ರಿಚರ್ಡ್ ಕುವೆಲ್ಲೊ, ಮೇಯರ್ ಜೆಸಿಂತ ವಿಜಯ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಉಸ್ತುವಾರಿ ಪ್ರತಿನಿಧಿ ಅಝೀಝ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.