ಕುಂದಾಪುರ: ಗಂಡನನ್ನು ತ್ಯಜಿಸಿ ಇನ್ನೊಬ್ಬಾತನೊಂದಿಗೆ ಸಂಸಾರ ಮಾಡಿಕೊಂಡಿದ್ದ ಸೋ ಕಾಲ್ಡ್ ಗಂಡಹೆಂಡಿರಿಬ್ಬರು ಕುಡಿದ ಮತ್ತಿನಲ್ಲಿ ತಡರಾತ್ರಿಯಾದರೂ ಜಗಳವಾಡುತ್ತಿದ್ದು ಬೆಳಿಗ್ಗೆ ಮನೆ ಸಮೀಪದ ಕೊಟ್ಟಿಗೆಯಲ್ಲಿ ಹೆಂಡತಿ ಶವವಾಗಿ ಬಿದ್ದಿರುವುದನ್ನು ಕಂಡು ಅಕ್ಕಪಕ್ಕದವರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದು ಮೇಲ್ನೋಟಕ್ಕೆ ಪತಿಯೇ ಪತ್ನಿಯನ್ನು ಹೊಡೆದು ಕೊಂದಿರುವ ಕುರಿತು ಮಾತುಗಳು ಕೇಳಿಬರುತ್ತಿದೆ. ಇವರಿಬ್ಬರು ಲಿವಿಂಗ್ ಟುಗೆದರ್ ರೀತಿಯಲ್ಲಿ ಸಂಸಾರ ಮಾಡಿಕೊಂಡಿದ್ದರು.
ಕುಂದಾಪುರ ತಾಲೂಕಿನ ಕುಂಭಾಸಿ ಕೊರಗ ಕಾಲನಿಯಲ್ಲಿ ಈ ಘಟನೆ ಭಾನುವರ ತಡರಾತ್ರಿ ಸಂಭವಿಸಿದ್ದು ಮುಂಜಾನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಜಯಮಾಲ (38) ಎಂಬಾಕೆಯೇ ನಿಗೂಢವಾಗಿ ಮ್ರತಪಟ್ಟವಳು. ಈಕೆಯ ಸೋ ಕಾಲ್ಡ್ ಪತಿರಾಯನಾದ ಪಾಪಣ್ಣ ಎಂಬಾತನ ವಿರುದ್ಧ ಸದ್ಯ ಕೊಲೆ ಆರೋಪ ಕೇಳಿಬಂದಿದೆ. ಜಯಮಾಲ ಕಳೆದ ಅವಧಿಯಲ್ಲಿ ಬೀಜಾಡಿ-ಗೋಪಾಡಿ ಗ್ರಾ.ಪಂ. ಸದಸ್ಯೆಯಾಗಿದ್ದರು.
ಮೂಲತಃ ಬೀಜಾಡಿ ರೋಶನಿಧಾಮದವಳಾಗಿರುವ ಈಕೆ ರಮೇಶ್ ಎಂಬಾತನೊಂದಿಗೆ ವಿವಾಹವಾಗಿ ಮೂರು ಮಕ್ಕಳಿದ್ದಾರೆ. ಆದರೇ ಮೂರು ವರ್ಷಗಳ ಹಿಂದೆ ರಮೇಶನನ್ನು ಬಿಟ್ಟು ಈಕೆ ಕುಂಭಾಸಿಯ ಪಾಪಣ್ಣ ಎಂಬಾತನೊಂದಿಗೆ ಕುಂಭಾಸಿಯಲ್ಲಿ ವಾಸವಿದ್ದಳು. ಕೂಲಿ ಕೆಲಸ ಮಾಡುತ್ತಿದ್ದ ಪಾಪಣ್ಣ ನಿತ್ಯ ಕುಡಿದು ಬರುತ್ತಿದ್ದ ಎನ್ನಲಾಗಿದ್ದು ಈಕೆಯೂ ಮದ್ಯಪಾನ ಮಾಡುತ್ತಿದ್ದಳೆನ್ನಲಾಗಿದೆ. ಹಿಗೆಯೇ ಭಾನುವಾರವೂ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡಿದ್ದು ತಡರಾತ್ರಿಯವರೆಗೂ ಇದು ಮುಂದುವರಿದಿತ್ತು ಎನ್ನಲಾಗಿದೆ. ಬೆಳಿಗ್ಗೆನ ಜಾವ ಆಸುಪಾಸಿನ ಮನೆಯವರು ನೋಡುವಾಗ ಜಯಮಾಲ ಕೊಟ್ಟಿಗೆಯಲ್ಲಿ ಶವವಾಗಿ ಬಿದ್ದಿದ್ದು ಅವರ ಸಮುದಾಯದ ಮುಖಂಡರ ಮೂಲಕ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ತನಿಖೆ ನಡೆಸುವಾಗ ಮೇಲ್ನೋಟಕ್ಕೆ ಮೈಮೇಲೆ ಯಾವುದೇ ಗಾಯದ ಗುರುತುಗಳು ಗೋಚರವಾಗಿಲ್ಲ. ಆದರೇ ಮನೆಯ ಸಮೀಪದವರ ಮಾಹಿತಿಯಂತೆ ಗಲಾಟೆ ನಡೆದಿರುವುದನ್ನು ಖಚಿತಪಡಿಸಿಕೊಂಡಿರುವ ಪೊಲಿಸರು ಆರೋಪಿ ಪಾಪಣ್ಣ ಈಕೆಗೆ ಹಿಗ್ಗಾಮುಗ್ಗ ಥಳಿಸಿರಬಹುದೆಂದು ಅದೇ ಏಟಿಗೆ ಈಕೆ ಸಾವನ್ನಪಿರಬಹುದೆಂದು ಅಂದಾಜಿಸಿದ್ದಾರೆ. ಕೊಲೆಯೆಂಬ ಅನುಮಾನದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಣಿಪಾಲ ಕೆ.ಎಂ.ಸಿ.ಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಆರೋಪಿ ಪರಾರಿ: ಸದ್ಯ ಆಕೆಯ ಪತಿಯೆನ್ನಲಾದ ಆರೋಪಿ ಪಾಪಣ್ಣ ಪರಾರಿಯಾಗಿದ್ದು ಆತನನ್ನು ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಸ್ಥಳಕ್ಕೆ ಶ್ವಾನದಳವೂ ಭೇಟಿ ನೀಡಿದೆ.
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ