ಕುಂದಾಪುರ: ಅಕ್ರಮವಾಗಿ ಹಾಗೂ ಯಾವುದೇ ಪರವಾನಿಗೆಯಿಲ್ಲದೇ ಗೋವುಗಳನ್ನು ಕೊಂದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಕುಂದಾಪುರ ಪೊಲೀಸರು ದಿಡೀರ್ ದಾಳಿ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಜಂಕ್ಷನ್ ಸಮೀಪ ನಡೆದಿದೆ.
ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗಳೆನ್ನಲಾದ ರಾಶೀದ್ ಹಾಗೂ ಇತರ ಇಬ್ಬರು ಪರಾರಿಯಾಗಿದ್ದು, ಘಟನಾ ಸ್ಥಳದಲ್ಲಿದ್ದ ಕ್ವಿಂಟಾಲಿಗೂ ಅಧಿಕ ಗೋ ಮಾಂಸ, ಒಂದು ಜೀವಂತ ಕರು ಹಾಗೂ 1 ಮೊಬೈಲ್, 2 ಚೂರಿಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ.
ಕುಂದಾಪುರದ ಪೊಲೀಸರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಬರುವ ಸುದ್ಧಿ ತಿಳಿಯುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು ಆ ಪ್ರದೇಶದಲ್ಲಿ ಮಾಂಸ ಮಾಡಿದ ಒಂದು ಜಾನುವಾರು, ಕೊಂದಿರುವ ಒಂದು ಜಾನುವಾರು ಹಾಗೂ ಕೊಲ್ಲಲು ಕಟ್ಟಿಹಾಕಿದ್ದ ಒಂದು ಕರುವನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಮೊಬೈಲ್ ಸೇರಿದಂತೆ ಕೆಲವು ಪರಿಕರಗಳು ಪೊಲೀಸರಿಗೆ ಸಿಕ್ಕಿದೆ.
ಇನ್ನು ಈ ಪ್ರದೇಶ ಕಸಾಯಿಖಾನೆ ಆಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದು ಹಬ್ಬದ ಸಲುವಾಗಿ ಇಂದು ಗೋವಧೆ ಮಾಡಲಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.