ಮಂಗಳೂರು: ಮುಸ್ಲಿಂ ಭಾಂದವರಿಗೆ ಇಂದು ಬಕ್ರಿದ್ ಹಬ್ಬದ ಸಂಭ್ರಮ, ಕರಾವಳಿ ಜಿಲ್ಲೆಯಾದ್ಯಂತ ಮುಸ್ಲಿಂ ಭಾಂದವರು ಬುಧವಾರ ಬಕ್ರೀದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಮುಸ್ಲಿಂ ಬಂಧುಗಳು ಇಂದು ಹೊಸಬಟ್ಟೆ ಧರಿಸಿ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಡವ ಬಲ್ಲಿದ ಎನ್ನುವ ಬೇಧವಿಲ್ಲದೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಿಂಗನದ ಮೂಲಕ ಬಕ್ರೀದ್ ಶುಭಾಷಯ ವಿನಿಯಮ ಮಾಡಿಕೊಂಡರು. ಸಿಹಿ ಹಂಚಿ ಖುಷಿಪಟ್ಟರು.
ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸುವ ಹಬ್ಬವಾಗಿದ್ದು ಮಹಿಳೆಯರೂ ಕೂಡಾ ತಮಗೆ ಅನುಕೂಲವಿದ್ದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಜಿಲಾಧಿಕಾರಿ ಎ.ಬಿ.ಇಬ್ರಾಹಿಂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು., ಇವರ ಜೊತೆ ವಿವಿಧ ಧರ್ಮದವರಾದ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೋ, ವಿ.ಎಚ್.ಪಿ. ಮುಖಂಡ ಪ್ರೋ.ಎಂ.ಬಿ ಪುರಾಣಿಕ್ ಸೇರಿದಂತೆ ಹಲವಾರು ಗಣ್ಯರು ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ರಾಜ್ಯದ ಹಲವು ಕಡೆಗಳಲ್ಲಿ ನಾಳೆ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು ಕರಾವಳಿಯಲ್ಲಿ ಇಂದು ಆಚರಿಸಲಾಯಿತು. ಬಕ್ರೀದ್ ಆಚರಣೆಯ ಹಿನ್ನೆಲೆಯಲ್ಲಿ ಸೆಪ್ಟಂಬರ್ 24ರಂದು ದ.ಕ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಕರ್ನಾಟಕ ಸರಕಾರ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ಸೆಪ್ಟಂಬರ್ 25ರಂದು ಸರಕಾರಿ ಕಚೇರಿಗಳಿಗೆ (ಶಾಲಾ-ಕಾಲೇಜುಗಳನ್ನು ಹೊರತುಪಡಿಸಿ) ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು.
ಉಳ್ಳಾಲದಲ್ಲಿ ಬಕ್ರಿದ್ ಆಚರಣೆ :
ಉಳ್ಳಾಲ: ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನನು ಪ್ರಾಣಿಬಲಿಯೊಂದಿಗೆ ಆಚರಿಸುವ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹಾಗೂ ದರ್ಗಾ ಅಧ್ಯಕ್ಷ ಯು.ಯಸ್.ಹಂಝ್ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಈ ವೇಳೆ ಹಬ್ಬದ ಶುಭಹಾರೈಸಿದ ಸಚಿವರು ಪವಿತ್ರವಾದ ಹಬ್ಬವನ್ನು ಸಂತೋಷದಿಂದ ಎಲ್ಲರೂ ಆಚರಿಸಿದ್ದಾರೆ. ತ್ಯಾಗ, ಬಲಿದಾನ, ಸಹೋದರತೆ, ಏಕತೆಯ ಸಂದೇಶವನ್ನು ಪಾಲಿಸುವ ಮೂಲಕ ಅಲ್ಲಹುವಿನ ಪ್ರೀತಿಗೆ ಎಲ್ಲರೂ ಪಾತ್ರರಾಗಬೇಕು. ತಮ್ಮ ವ್ಯಕ್ತಿತ್ವದಲ್ಲೂ ಅದನ್ನು ಮೈಗೂಡಿಸಿಕೊಳ್ಳಬೇಕು. ಶಾಂತಿಯುತ ಸಮಾಜ ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕಿದೆ.
ಹಿರಿಯರ ಮತ್ತು ಉಲೇಮಾಗಳ ತ್ಯಾಗಮಯ ಜೀವನದ ಆದರ್ಶಗಳನ್ನು ಪಾಲಿಸಿ ಜೀವನ ನಿರ್ವಹಿಸಬೇಕಿದೆ ಎಂದ ಅವರು ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಲ್ಲ, ಯಾರಲ್ಲೂ ವಿಶ್ವಾಸ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ವಿಶ್ವಾಸವನ್ನು ಬೆಳೆಸುವ ಕಾರ್ಯ ಹಬ್ಬದ ಆಚರಣೆಗಳಿಂದ ಆಗಬೇಕಿದೆ ಎಂದರು.
ಬಕ್ರೀದ್ ಹಬ್ಬದ ಹಿನ್ನೆಲೆ :
ನಾಲ್ಕು ಸಾವಿರ ವರ್ಷಗಳ ಹಿಂದಿನ ಸಂಬಂಧವಿರುವ ಹಬ್ಬಕ್ಕೆ ಇಸ್ಲಾಮಿನ ಪ್ರವಾದಿವರ್ಯರಲ್ಲೋರ್ವರಾದ ಇಬ್ರಾಹಿಂ(ಅ.ಸ) ರವರಿಗೆ ಒಂದು ದಿನ ಮಗನನ್ನು ಬಲಿ ಕೊಡುವಂತೆ ಕನಸು ಬೀಳುತ್ತದೆ. ಅಲ್ಲಾಹನ ಆಜ್ಞೆಯಂತೆ ತನ್ನ ಮಗನಾದ ಇಸ್ಮಾಯಿಲ್ ರನ್ನು ಬಲಿ ಅರ್ಪಿಸಲು ಮುಂದಾದಾಗ ಇಬ್ರಾಹಿಂರ ತ್ಯಾಗ ಸನ್ನದ್ಧತೆಯನ್ನು ಪರೀಕ್ಷಿಸಿದ ಸೃಷ್ಟಿಕರ್ತನು ಪುತ್ರನ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆದೇಶಿಸುತ್ತಾನೆ. ಅದರಂತೆ ಕುರಿಯನ್ನು ಬಲಿ ಅರ್ಪಿಸಲಾಗುತ್ತದೆ. ತ್ಯಾಗ ಸನ್ನದ್ಧತೆಯ ಪರೀಕ್ಷೆಯಲ್ಲಿ ಇಬ್ರಾಹಿಂ(ಅ.ಸ) ಗೆಲುವು ಸಾಧಿಸುತ್ತಾರೆ.
ಈ ಘಟನೆಯ ಸ್ಮರಣಾರ್ಥ ಇಂದು ಜಗತ್ತಿನಾದ್ಯಂತ ಮುಸಲ್ಮಾನರು ಆಡು, ಕುರಿ, ಕೋಣಗಳನ್ನು ಬಲಿಕೊಡುವ ಮೂಲಕ ತ್ಯಾಗ ಸನ್ನದ್ಧತೆಯನ್ನು ಪ್ರಕಟಿಸುತ್ತಾರೆ.
ಬಕ್ರೀದ್ ಹಬ್ಬ ಕೇವಲ ಸಂತೋಷಕ್ಕೆ ಮಾತ್ರ ಒತ್ತು ನೀಡದೆ, ಜೀವನ ಪರ್ಯಂತ ಸಂತೋಷದಿಂದ ಮತ್ತು ಸಮಾಜದ ಸಂತೋಷವನ್ನು ಕದಡದೆ ಕೃತಾರ್ಥ ಬದುಕನ್ನು ಸಾಗಿಸಲು ಬೇಕಾದಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ
ಸುಳ್ಯದಲ್ಲಿ ಬಕ್ರೀದ್ ಆಚರಣೆ :
ಸುಳ್ಯ: ಇಲ್ಲಿನ ಮೊಗರ್ಪಣೆ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ ನಡೆಯಿತು. ಮೊಗರ್ಪಣೆ ಮಸೀದಿ ಖತೀಬರಾದ ಸುಲೈಮಾನ್ ಪಾಳಿಲಿರವರು ಈದ್ ನಮಾಝ್ಗೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ನ.ಪಂ ಸದಸ್ಯ ಸಂಶುದ್ದೀನ್.ಎಸ್, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮೊಗರ್ಪಣೆ ಎಸ್.ಎಸ್.ಎಫ್ ಅದ್ಯಕ್ಷ ಸಂಶುದ್ದೀನ್, ಹಳೆ ವಿದ್ಯಾಥಿಧ ಸಂಘದ ಅಧ್ಯಕ್ಷ ತಾಜುದ್ದೀನ್, ಜಯನಗರ ಜನ್ನತ್ತುಲ್ ಉಲೂಂ ಮದರಸ ಅಧ್ಯಕ್ಷ ಅಶ್ರಫ್ ಸಂಗಂ, ಸೂರಝ್ ಇದ್ದರು.ಸುಳ್ಯ ದುಗ್ಗಲಡ್ಕ ಮಸೀದಿಯಲ್ಲಿ ಬಕ್ರೀದ್ ಆಚರಣೆ ನಡೆಯಿತು.
ಈದ್ ನಮಾಝ್ಗೆ ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ಬುಖಾರಿ ನೇತೃತ್ವ ವಹಿಸಿದ್ದರು.ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಹಸೈನಾರ್, ಕಾರ್ಯದರ್ಶಿ ಹಂಝ ದೊಡ್ಡತೋಟ, ಮತ್ತಿತರರು ಉಪಸ್ಥಿತರಿದ್ದರು.