ಉಡುಪಿ: ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎಂದು ಶನಿವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಮಣಿಪಾಲ ವಿ.ವಿ. ಸಹಯೋಗದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು, ಉಡುಪಿ ಜಿಲ್ಲೆಯನ್ನು ರಾಜ್ಯದ ಮೊದಲ ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಲು ಡಾ| ಶಂಕರ್ ಕಾರಣರು ಎಂದರು. ಇದೇ ಸಂದರ್ಭ ಅವರು 25,000 ಆರೋಗ್ಯ ಸುರಕ್ಷಾ ಕಾರ್ಡು ವಿತರಣೆಗೆ ಚಾಲನೆ ನೀಡಿದರು.
ಬಿಪಿಎಲ್ ಕಾರ್ಡುದಾರರಿಗೆ ಪೂರ್ಣ ರಿಯಾಯಿತಿ, ಎಪಿಎಲ್ನವರಿಗೆ ಶೇ. 70 ರಿಯಾಯಿತಿ ಆರೋಗ್ಯ ಯೋಜನೆಗಳಿವೆ. ಸರಕಾರದ ಇಂತಹ ಎಲ್ಲ ಯೋಜನೆಗಳನ್ನು ಮಣಿಪಾಲ ಆಸ್ಪತ್ರೆಯಲ್ಲಿ ಜಾರಿಗೊಳಿಸು ವಂತಾಗಬೇಕು. ಚಿಕಿತ್ಸೆ ಪಡೆದ ಒಂದು ತಿಂಗಳೊಳಗೆ ಬಿಲ್ ಪಾವತಿಸಲು, ಬಳಿಕ ಒಂದು ವಾರದಲ್ಲಿ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ಸಚಿವರು ತಿಳಿಸಿದರು. “ವಾತ್ಸಲ್ಯವಾಣಿ’ ಯೋಜನೆಯನ್ನು ಸೆ. 21ರಂದು ಮುಖ್ಯಮಂತ್ರಿಗಳು ಉದ್ಘಾಟಿಸುವರು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಸಚಿವ ವಿನಯಕುಮಾರ ಸೊರಕೆ ಉದ್ಘಾಟಿಸಿದರು. ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗೋಪಾಲ ಪೂಜಾರಿ, ಜಿ.ಪಂ. ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ನಗರಸಭಾಧ್ಯಕ್ಷ ಪಿ. ಯುವರಾಜ್ ಮುಖ್ಯ ಅತಿಥಿಗಳಾಗಿ ಡಾ| ಶಂಕರ್ ಅವರ ಮಾದರಿ ಯೋಜನೆಗಳಿಗೆ ಶುಭ ಕೋರಿದರು. ಮಣಿಪಾಲ ವಿ.ವಿ. ಪರವಾಗಿ ಕುಲಸಚಿವ ಡಾ| ಜಿ.ಕೆ. ಪ್ರಭು ಅವರನ್ನು ಸಮ್ಮಾನಿಸಲಾಯಿತು.
ಈಗಾಗಲೇ 60,000 ಯೂನಿಟ್ ರಕ್ತ ಸಂಗ್ರಹಿಸಿ ಶೇ. 30 ಜಿಲ್ಲಾಸ್ಪತ್ರೆಗಳಿಗೆ ನೀಡಲಾಗಿದೆ. ಮಣಿಪಾಲ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಪೈ ಅವರ 80ನೇ ಹುಟ್ಟುಹಬ್ಬದ ಪ್ರಯುಕ್ತ ಕಾರ್ಡ್ ಫಲಾನುಭವಿಗಳಿಗೆ ಇದ್ದ 30,000 ರೂ. ಸೌಲಭ್ಯವನ್ನು 50,000 ರೂ.ಗೆ ಏರಿಸಿ ಸಹಕರಿಸಿದ್ದಾರೆ ಎಂದರು.
ಕುಂದಾಪುರದ ಪುರಸಭಾ ಸದಸ್ಯ ವಿಜಯ ಪೂಜಾರಿ, ಹೆಚ್ಚು ಬಾರೀ ರಕ್ತದಾನ ಮಾಡಿದ ಮಣಿಪಾಲದ ಸತೀಶ ಸಾಲ್ಯಾನ್, ಸಂಘಟನೆ ಅಧ್ಯಕ್ಷ ದಯಾನಂದ ಬಳ್ಕೂರು, ಮಾಜಿ ಅಧ್ಯಕ್ಷ ಜಯ ಕೋಟ್ಯಾನ್, ರವೀಂದ್ರ ಶ್ರೀಯಾನ್, ಮಣಿಪಾಲ ಆಸ್ಪತ್ರೆಯ ಶ್ರೀಪತಿ ಅವರನ್ನು ಗೌರವಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು ಸ್ವಾಗತಿಸಿ, ಉಪಾಧ್ಯಕ್ಷ ಗಣೇಶ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಸಾಲ್ಯಾನ್ ವಂದಿಸಿದರು. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಉದ್ಯಮಿ ಆನಂದ ಸಿ. ಕುಂದರ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.