ಮಂಗಳೂರು, ಸೆ.20: ಎತ್ತಿನಹೊಳೆ ಯೋಜನೆ ವಿರುದ್ಧ ದ.ಕ. ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿರುವಂತೆಯೇ ಇಂದು ಜಿಲ್ಲಾಡಳಿತದ ನೇತೃತ್ವದಲ್ಲಿ ಆಯೋಜಿಸಲಾದ ಸಭೆಯಲ್ಲಿ ಪರಿಸರ ತಜ್ಞರನ್ನು ಒಳಗೊಂಡ ಸಾರ್ವಜನಿಕರ ಹಲವಾರು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಜನಪ್ರತಿನಿಧಿಗಳನ್ನು ಒಳಗೊಂಡ ರಾಜ್ಯ ಸರಕಾರದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ವಿಫಲರಾದರು.
ಈ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶೀಘ್ರದಲ್ಲೇ ಹೋರಾಟಗಾರ ಸಂಘ ಟನೆಗಳ ತಜ್ಞರು ಹಾಗೂ ಸರಕಾರದ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳುವ ಮೂಲಕ ಸುಮಾರು ಎರಡೂವರೆ ಗಂಟೆಗಳ ಸಭೆಯನ್ನು ಬರ್ಕಾಸ್ತುಗೊಳಿಸಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ 10 ಪ್ರಶ್ನೆಗಳಿಗೆ ಉತ್ತರಿಸುವಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸಹ್ಯಾದ್ರಿ ಸಂಚಯದ ನೇತೃತ್ವದಲ್ಲಿ ಇಂದು ನಗರದಲ್ಲಿ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು.
ಈ ನಡುವೆ ಸರಕಾರದ ವತಿಯಿಂದ ದ.ಕ. ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನೀರಾವರಿ ನಿಗಮ ಮತ್ತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ಹೋರಾಟಗಾರ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಕರಾವಳಿ ಜೀವನದಿ-ನೇತ್ರಾವತಿ ರಕ್ಷಣಾ ಸಮಿ ತಿಯ ಮುಖಂಡ ಹಾಗೂ ಎನ್ಐಟಿಕೆಯ ನಿವೃತ್ತ ಪ್ರೊ.ಎಸ್.ಜಿ.ಮಯ್ಯ ಸೇರಿದಂತೆ ಹಲವು ಹೋರಾಟಗಾರರು ಯೋಜನೆಯ ಸಾಧಕ-ಬಾಧಕಗಳ ಕುರಿತಂತೆ ಪ್ರಶ್ನಿಸಿದರು.
ಸಭೆಯ ಆರಂಭದಲ್ಲಿ ಯೋಜನೆಯ ಕುರಿತಂತೆ ನಿಗಮದಿಂದ ಮಾಹಿತಿ ನೀಡಲಾಗುವುದು ಎಂದು ಹೇಳಿದಾಗ, ಮೊದಲು ಜಿಲ್ಲೆಯ ಜನರ ಪ್ರಶ್ನೆಗಳಿಗೆ ಉತ್ತರಿಸಿ, ನಮ್ಮ ಆತಂಕ, ಸವಾಲುಗಳನ್ನು ಕೇಳಿ ಎಂದು ಸಭೆಯಲ್ಲಿದ್ದವರು ಒಕ್ಕೊ ರಳಿನಿಂದ ಆಗ್ರಹಿಸಿದರು. ಈ ಸಂದರ್ಭ ಜನರ ಪ್ರಶ್ನೆಗಳಿಗೆ ಉತ್ತ ರಿಸುವಂತೆ ನಿಗಮದ ಅಧಿಕಾರಿಗಳಿಗೆ ಸಚಿವ ರಮಾನಾಥ ರೈ ಸೂಚಿಸಿದರು.
ಯೋಜನೆಗೆ ಸಂಬಂಧಿಸಿ ಕಾಮಗಾರಿ ಆರಂಭವಾದ ಬಳಿಕ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಕಾರಣವೇನು ಎಂದು ಹೋರಾಟಗಾರರಾದ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ಡಾ.ನಿರಂಜನ್ ರೈ, ವಿಜಯ ಹೆಗ್ಡೆ ಪ್ರಶ್ನಿಸಿದರು. ಸರಕಾರದ ಆದೇಶದ ಮೇರೆಗೆ ಈ ಸಭೆಯನ್ನು ನಿಗದಿಪಡಿಸಲಾಗಿದ್ದು, ಮುಂದೆಯೂ ಚರ್ಚೆ ನಡೆಯಲಿದೆ ಎಂಬ ಉತ್ತರ ನಿಗಮದ ಆಡಳಿತ ನಿರ್ದೇಶಕ ರುದ್ರಯ್ಯ ನೀಡಿದರು.
ಎನ್ಐಟಿಕೆಯ ನಿವೃತ್ತ ಉಪನ್ಯಾಸಕ ಡಾ.ಎಸ್.ಜಿ.ಮಯ್ಯ ಮಾತನಾಡಿ, ಎತ್ತಿನಹೊಳೆ ಪ್ರದೇಶದಲ್ಲಿ 4,880 ಮಿ.ಮೀ. ಮಳೆ ಬೀಳುತ್ತಿರುವುದಾಗಿ ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ (ಎನ್ಐಎಚ್) ಹೇಳಿದ್ದರೂ ಎತ್ತಿನಹೊಳೆ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯಲ್ಲಿ ಈ ಅಂಕಿ ಅಂಶವನ್ನು 6280 ಮಿ.ಮೀ. ಎಂದು ಹೇಳಲಾಗಿದೆ. ಈ ಹಂತದಲ್ಲಿ ಈ ಡಿಪಿ ಆರ್ ತಿರಸ್ಕೃತ ಮಾಡುವಂತಹದ್ದು ಎಂದು ಸವಾಲೆಸೆದರು.
ಎಲ್ಲಾ ತಜ್ಞರ ಜೊತೆ ಚರ್ಚಿಸಿಯೇ ಡಿಪಿಆರ್ ಮಾಡಲಾಗಿದೆ ಎಂದು ನಿಗಮದ ಮುಖ್ಯ ಎಂಜಿನಿಯರ್ ಚೆಲುವರಾಜ್ ಸಮರ್ಥನೆ ನೀಡಲೆತ್ನಿಸಿದರು. ಆದರೆ ಅದಕ್ಕೊಪ್ಪದ ಪ್ರೊ.ಮಯ್ಯ, ಜನಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಡಿಪಿ ಆರ್ ಸಿದ್ಧಪಡಿಸಲಾಗಿದೆ. ಇದು ಸರಕಾರವನ್ನು ದಾರಿ ತಪ್ಪಿಸುವ ಯತ್ನ ಎಂದು ಮರು ಸವಾಲು ಹಾಕಿದರು.
ಅದಕ್ಕೆ ಉತ್ತರಿಸಿದ ಚೆಲುವರಾಜು, ಬಂಟ್ವಾಳದಲ್ಲಿ ನದಿ ನೀರಿನ ಹರಿ ವನ್ನು ಗಮನಿಸಿಕೊಂಡು ಈ ಅಂದಾಜು ಮಾಡಲಾಗಿದೆ ಎಂದು ಹೇಳಿದಾಗ, ಹಾಗಿದ್ದಲ್ಲಿ ಅಂದಾಜಿನ ಮೇಲೆ ತಯಾರಾದ ವರದಿ ಹಾಗೂ ಯೋಜನೆಯನ್ನು ತಕ್ಷಣವೇ ಕೈಬಿಡಿ ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಎತ್ತಿನಹೊಳೆ ಮತ್ತು ಕಾಡುಮನೆ ಪ್ರದೇಶದಲ್ಲಿ ಬೀಳುವ ಮಳೆ ಪ್ರಮಾ ಣವನ್ನು ದಾಖಲಿಸದೆ ಕೇವಲ ಬಂಟ್ವಾಳದಲ್ಲಿನ ನದಿ ಹರಿವಿನ ಲೆಕ್ಕಾಚಾರದಲ್ಲಿ ತಯಾರಾದ ಡಿಪಿಆರ್ನ್ನು ಯಾವ ಕಾರಣಕ್ಕೂ ಒಪ್ಪಲಾಗದು. ನೇತ್ರಾವತಿ ನದಿ ರಾಜ್ಯದಲ್ಲಿ ಹರಿಯು ವುದರಿಂದ ಅದನ್ನು ಬಳಸುವ ಸರ್ವಾಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ನೀರಾವರಿ ನಿಗಮ ಹಸಿರು ಪೀಠದೆದೆರು ವಾದ ಮಂಡಿಸಿದೆ. ಆದರೆ ನದಿ ಪಾತ್ರದ ಜನರು ಸರಕಾರದ ಯೋಜನೆಗಳನ್ನು ಪ್ರಶ್ನಿಸುವಂತಿಲ್ಲ ಎಂಬ ವಾದ ಎದುರಾಗಬಹುದು. ಹಾಗೆ ಆಗುವುದಿಲ್ಲ ಎಂದು ಲಿಖಿತವಾಗಿ ಜಿಲ್ಲೆಯ ಜನರಿಗೆ ನೀಡುವಿರಾ ಎಂದು ಮಯ್ಯ ಪ್ರಶ್ನಿಸಿದರು.
ಇದಕ್ಕೆ ವೇದಿಕೆಯಲ್ಲಿದ್ದ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ ಮಾತನಾಡಿ, ರಾಜ್ಯ ಸರಕಾರ ನಿಮ್ಮೆಲ್ಲರ ಸರಕಾರ. ಅಧಿಕಾರಿಗಳಿಂದ ತಪ್ಪು ಮಾಹಿತಿ ನೀಡಲಾಗಿದ್ದರೆ ಸರಕಾರಕ್ಕೆ ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ಸಮಜಾಯಿಷಿ ನೀಡಿದರು.
ಸಭೆಯಲ್ಲಿ ಹೊಯ್ಕೈ..
ಈ ನಡುವೆ ಎಂ.ಜಿ. ಹೆಗಡೆ ಮಾತ ನಾಡುತ್ತಾ, ಹಸಿರು ಪೀಠಕ್ಕೆ ಈ ವರದಿ ನೀಡಿರುವುದು ಸಿದ್ದರಾಮಯ್ಯ ಸರಕಾರ ಎಂದು ಹೇಳಿದಾಗ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸಭೆಯಲ್ಲಿ ಕಾಂಗ್ರೆಸ್ ನಾಯಕರನೇಕರು ಎಂ.ಜಿ.ಹೆಗಡೆ ವಿರುದ್ಧ ವಾಗ್ದಾಳಿಯ ಜೊತೆಗೆ ಅವರ ಮೇಲೆರಗಲು ಮುಂದಾದರು. ಈ ಸಂದರ್ಭ ಹೋರಾಟಗಾರರು ಅವ ರನ್ನು ತಡೆದು, ಇದು ರಾಜಕೀಯ ರಹಿತವಾದ ಹೋರಾಟ, ಇದು ದ.ಕ. ಜಿಲ್ಲೆಯ ಜನರ ಪ್ರಶ್ನೆ ಎಂದು ಹೇಳುವ ಜತೆಗೆ ಸಭೆಯಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಮಾತನಾಡಿ, ಹೋರಾಟದಲ್ಲಿ ನಿರತವಾಗಿರುವ ವಿವಿಧ ಸಂಘಟನೆ ಗಳಿಂದ ತಲಾ ಇಬ್ಬರಂತೆ ತಜ್ಞರನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗೆ ಅವರ ಹೆಸರನ್ನು ನೀಡಿದ್ದಲ್ಲಿ ಅವರಿಂದ ಆಯ್ದ ಮಂದಿಯ ಜತೆ ಉನ್ನತ ಮಟ್ಟದಲ್ಲಿ ಸಭೆಗೆ ಅವಕಾಶವಾಗಲಿದೆ ಎಂದು ಸಲಹೆ ನೀಡಿದರು.
ಸಚಿವ ರೈ ಮಾತನಾಡಿ, ವೈಜ್ಞಾನಿಕ ವಾಗಿ ಮಾಹಿತಿ ಇರುವ ಹೋರಾಟ ಗಾರರು ಹಾಗೂ ನೀರಾವರಿ ತಜ್ಞರ ಜೊತೆ ಚರ್ಚೆಯ ಮೂಲಕ ನಿಖರ ವಾದ ತೀರ್ಮಾನಕ್ಕೆ ಬರಲು ಸಾಧ್ಯವಾ ಗಲಿದೆ ಎಂದು ಹೇಳುತ್ತಾ ಸಭೆಯನ್ನು ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಸಚಿವ ಯು.ಟಿ.ಖಾದರ್, ಶಾಸಕರಾದ ಶಕುಂತಳಾ ಶೆಟ್ಟಿ, ಅಂಗಾರ, ಮೊಯ್ದಿನ್ ಬಾವ, ಐವನ್ ಡಿಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ., ಡಿಸಿಪಿ ಶಾಂತರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉಪಸ್ಥಿತರಿದ್ದರು.
ಯೋಜನೆ ಪರಿಷ್ಕೃತಗೊಳಿಸಿ ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಕೋಲಾರಕ್ಕೆ ನೀರು ಕೊಡುವಂತದ್ದು, ಕೋಲಾರಕ್ಕೆ 2014ರ ಅವಧಿಗೆ 5 ಟಿಎಂಸಿ ನೀರಿನ ಅಗತ್ಯವಿದೆ. ಅಷ್ಟಕ್ಕಾಗಿ ಈ ಯೋಜನೆ ಮಾಡಿ ಪಶ್ಚಿಮ ಘಟ್ಟದ ವಿನಾಶಕ್ಕೆ ಕಾರಣವಾಗುವ ಬದಲು ಬರಪೀಡಿತ, ಕುಡಿಯುವ ನೀರಿನ ಅಗತ್ಯವಿರುವ ಜಿಲ್ಲೆಗಳಿಗೆ ಇತರ ಯೋಜನೆಗಳಿಂದ ನೀರು ಕೊಡುವ ಬಗ್ಗೆ ಸರಕಾರ ಆಲೋಚಿಸಬಹುದು.
ಪೂರ್ವಕ್ಕೆ ಹರಿಯುವ ಎಲ್ಲಾ ನದಿ ಗಳ ಉಗಮ ಸ್ಥಾನ ಪಶ್ಚಿಮ ಘಟ್ಟ ವಾಗಿರುವುದನ್ನು ಪಶ್ಚಿಮ ಘಟ್ಟ ನಾಶವಾದರೆ ಕರಾವಳಿ ಮಾತ್ರವಲ್ಲ, ರಾಜ್ಯವೇ ಸಂಕಷ್ಟಕ್ಕೊಳಗಾಗಲಿದೆ. ಒತ್ತಡಕ್ಕೆ ಮಣಿದು ಯಾರೂ ಯೋಜನೆಗೆ ಪ್ರೋತ್ಸಾಹಿಸಬಾರದು. ಯೋಜನೆಯನ್ನು ಪರಿಷ್ಕೃತಗೊಳಿಸಿ ಯೋಜನೆಗೆ ಮುಂದಾದಲ್ಲಿ ಆಕ್ಷೇಪ ಇರದು. ಈ ಬಗ್ಗೆ ಗಮನಹರಿಸಿ ಎಂದು ಜನಪ್ರತಿನಿಧಿಗಳನ್ನು ಪ್ರೊ.ಮಯ್ಯ ಒತ್ತಾಯಿಸಿದರು.
ವರದಿ ಕೃಪೆ : ವಾಭಾ