ಮಂಗಳೂರು, ಸೆ.20: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗಿಂತಲೂ ಹೆಚ್ಚು ಪ್ರಾಯೋಗಿಕ ಜ್ಞಾನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಗಮನಹರಿಸಬೇಕಾಗಿದೆ ಎಂದು ಮಣಿಪಾಲ ವಿವಿ ವಿಶ್ರಾಂತ ಉಪಕುಲಪತಿ ಡಾ.ಬಿ.ಎಂ.ಹೆಗ್ಡೆ ತಿಳಿಸಿದರು.
ಅವರು ಇಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಅರ್ಬನ್ ಹಾಥ್ ಸಂಕೀರ್ಣದಲ್ಲಿ ಎರಡು ದಿನಗಳ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪರಿಸರದೊಂದಿಗೆ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಂಡಾಗ ಹೊಸ ವಿಚಾರಗಳನ್ನು ಪಡೆದುಕೊಳ್ಳಲು ಸಾಧ್ಯ. ಕೇವಲ ತರಗತಿಯ ಒಳಗೆ ಕುಳಿತು ಅಧ್ಯಯನ ನಡೆಸುವ ವಿದ್ಯಾರ್ಥಿಗಳಲ್ಲಿ ತಮ್ಮ ಸುತ್ತಮುತ್ತಲ ಪರಿಸರದ ಆಗುಹೋಗುಗಳ ಬಗೆಗಿನ ಸಾಮಾನ್ಯ ಜ್ಞಾನದ ಕೊರತೆ ಕಂಡು ಬರುತ್ತದೆ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ಸಮಾರಂಭದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಶಾಂತರಾಮಶೆಟ್ಟಿ, ಕಂಪ್ಯೂಟರ್ ತಂತ್ರಜ್ಞ ಕೆ.ಪಿ.ರಾವ್, ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ, ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ಹಾಗೂ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಉಪಸ್ಥಿತರಿದ್ದರು.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿ ಯರಿಂಗ್, ಪಾಲಿಟೆಕ್ನಿಕ್ ಸಂಸ್ಥೆಗಳು, ವಿಜ್ಞಾನ ಕಾಲೇಜುಗಳು, ಅಗಸ್ತ್ಯ ಫೌಂಡೇಶನ್ ಐಇಇಇ, ವಿಐಟಿಎಂ ಮುಂತಾದ ಸಂಸ್ಥೆಗಳ ಸಹಕಾರದಲ್ಲಿ ಮೇಳ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗೆ ವಿಜ್ಞಾನದ ಪರಿಚಯ, ವಿಜ್ಞಾನ ತಂತ್ರಜ್ಞಾನದ ಅರಿವು, ವೈದ್ಯ ಕೀಯ ಕ್ಷೇತ್ರದ ಬೆಳವಣಿಗೆ, ಎಂಜಿನಿಯರಿಂಗ್ ಕ್ಷೇತ್ರದ ಪ್ರಾತ್ಯಕ್ಷಿಕೆಗಳು, ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಮೇಳದ ವಿಶೇಷ ಆಕರ್ಷಣೆ: ವಿಜ್ಞಾನ ಕೇಂದ್ರದ ಲ್ಲಿರುವ ಥಿಯೇಟರ್ನಲ್ಲಿ 3ಡಿ ತಂತ್ರಜ್ಞಾನದ ಮೂಲಕ ಮಾನವ ದೇಹದ ಮಾಹಿತಿ ನೀಡುವ ಕಿರು ಚಿತ್ರ ಪ್ರದರ್ಶನ, ಇದೇ ಕೇಂದ್ರದ ಸಭಾಂಗಣದಲ್ಲಿ ನೈಟ್ರೋಜನ್ ಅನಿಲದ ಮೂಲಕ ವಿವಿಧ ವಸ್ತುಗಳ ಮೇಲೆ ಉಷ್ಣತೆಯಲ್ಲಾಗುವ ಬದಲಾವಣೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ವಸ್ತುಪ್ರದರ್ಶನ ಮೇಳದಲ್ಲಿ ಮಕ್ಕಳಿಗಾಗಿ ವಿಜ್ಞಾನ ರಸಪ್ರಶ್ನೆ, ಪವಾಡ ರಹಸ್ಯ ಬಯಲು ಕಾರ್ಯಕ್ರಮ ಪಿಲಿಕುಳ ಆವರಣದಲ್ಲಿ ನಿರ್ಮಿಸಲಾದ ಬಯಲು ಸಭಾಂಗಣದಲ್ಲಿ ನಡೆಯಿತು.
ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗ ಹರಡುವ ವಿಧಾನ, ಅದರ ನಿಯಂತ್ರಣಕ್ಕಿರುವ ಮಾರ್ಗೋಪಾಯಗಳ ಬಗ್ಗೆ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ತಯಾರಿಸಿದ ತ್ಯಾಜ್ಯವಸ್ತುಗಳಿಂದ ವಿದ್ಯುತ್ ಉತ್ಪಾದನೆ, ದನದ ಸೆಗಣಿಯಿಂದ ವಿದ್ಯುತ್ ವಾಹಕದ ಪ್ರಯೋಗ, ಮೊಬೈಲ್ ಮೂಲಕ ಎಚ್ಚರಿಕೆಯ ಅಲಾರಾಂ, ರಿಮೋಟ್ ಮೂಲಕ ಬಾಗಿಲು ತೆಗೆಯುವ ಮತ್ತು ಮುಚ್ಚುವ ತಂತ್ರಜ್ಞಾನ, ಸೆನ್ಸಾರ್ ಮೂಲಕ ವಾಹನ ಬಂದಾಗ ಶೆಡ್ನ ಬಾಗಿಲು ತೆರೆದುಕೊಳ್ಳುವ ಮತ್ತು ಸ್ವಯಂಚಾಲಿತವಾಗಿ ಮುಚ್ಚುವ ಮಾದರಿ, ಹಾಳಾದ ಸಿಎಫ್ಎಲ್ ಬಲ್ಬನ್ನು ಬಳಸಿ ಟ್ಯೂಬ್ಲೈಟ್ನ್ನು ಉರಿಸುವ ತಂತ್ರಜ್ಞಾನದ ಮಾದರಿಗಳು ವಿಶೇಷ ಆಕರ್ಷಣೆಯಾಗಿದ್ದು, ಎಲ್ಲರ ಗಮನಸೆಳೆಯಿತು.