ಮಂಗಳೂರು, ಸೆ.17: ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂಜರಿಯಬಾರದು. ಜಿಲ್ಲೆಯಲ್ಲಿ ಯಾವುದೇ ಬೆರಳೆಣಿಕೆಯ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಅವರನ್ನು ಜಿಲ್ಲೆಯಿಂದಲೇ ಹೊರಗಿಡುವ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಹಬ್ಬಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಬುಧವಾರ ನಡೆದ ಶಾಂತಿಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಚೌತಿ, ಬಕ್ರೀದ್ ಹಾಗೂ ಇತರ ಹಬ್ಬಗಳು ಬರಲಿವೆ. ಈ ಸಂದರ್ಭದಲ್ಲಿ ಪ್ರಚೋ ದನಕಾರಿ ಬ್ಯಾನರ್ ಅಳವಡಿಸುವುದು, ಪ್ರಚೋ ದನಕಾರಿ ಘೋಷಣೆ ಹಾಗೂ ಜನರಲ್ಲಿ ಭೀತಿಯ ವಾತಾವರಣ ಮೂಡಿ ಸುವವರ ವಿರುದ್ಧ ಆಯಾ ಪೊಲೀಸ್ ಠಾಣಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ನಡೆದ ಪ್ರದೇಶದಲ್ಲಿ ಆಯಾ ಪೊಲೀಸ್ ಠಾಣಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಮೆರವಣಿಗೆಯ ಸಂದರ್ಭದಲ್ಲಿ ಜನ ಸಂಚಾರಕ್ಕೆ ಅಡ ಚಣೆಯಾಗುವಂತೆ ಪೊಲೀಸರು ಮಾರ್ಗ ಬದಲಾವಣೆ ಮಾಡುವುದಕ್ಕೆ ಆಕ್ಷೇಪಿಸಿದ ಸಚಿವ ರೈ, ನಗರದಲ್ಲಿ ಬಹುತೇಕ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರೂ, ಅಗತ್ಯ ಸಂದರ್ಭಗಳಲ್ಲಿ ಕ್ಯಾಮರಾ ಸರಿಯಿಲ್ಲ ಎನ್ನುವ ಉತ್ತರ ದೊರೆತಿದೆ. ಆದರೆ ಇನ್ನು ಅಂತಹ ಯಾವುದೇ ಸಬೂಬು ಹೇಳ ಬಾರದು. ಹಬ್ಬದ ಸಂದರ್ಭದಲ್ಲಿ ನಗರ ದಲ್ಲಿ ಅಳವಡಿಸಿರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರಬೇಕು ಎಂದು ರಮಾನಾಥ ರೈ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಜಿಲ್ಲೆಯಲ್ಲಿ ಶಾಂತಿ ಕಾಪಾ ಡಲು ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಪ್ರತಿಜ್ಞಾವಿಧಿ ಬೋಧಿಸಿದರು.
ಮಂಗಳೂರು ಪೊಲೀಸ್ ಕಮಿಶನರ್ ಎಸ್.ಮುರುಗನ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಜನರು ಶಾಂತಿಯುತ ವಾಗಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮಪ್ರದೇಶಗಳಲ್ಲಿ ಚೆಕ್ಪೋಸ್ಟ್ ರಚಿಸಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸಮಾಜದ ಶಾಂತಿ ಕದಡುವ ಕೃತ್ಯದಲ್ಲಿ ತೊಡಗುವ ಸಾಧ್ಯತೆ ಇರುವವರ ಬಗ್ಗೆ ನಿಗಾ ವಹಿ ಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಜಿಲ್ಲೆಯ ಜನತೆ ಶಾಂತ ವಾತಾವರಣದಲ್ಲಿ ಹಬ್ಬ ಆಚರಿಸುವ ಮೂಲಕ ಮಾದರಿಯಾಗಬೇಕು ಎಂದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಮೇಯರ್ ಜೆಸಿಂತ ಆಲ್ಫ್ರೆಡ್, ಜಿಪಂ ಸಿಇಒ ಶ್ರೀವಿದ್ಯಾ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಂಡ ಹನೀಫ್ ಹಾಜಿ, ಗೋರಕ್ಷಕ್ ಸಮಿತಿ ಮುಖಂಡ ಕಟೀಲ್ ದಿನೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ನಾಯಕರ ಅಭಿಪ್ರಾಯ :
ಸಾಮರಸ್ಯದ ಕೊರತೆಯಿಂದ ಮಂಗಳೂರಿನ ಬಗ್ಗೆ ಹೊರಗೆ ಕೆಟ್ಟ ಭಾವನೆ ಬಂದಿದೆ.ಅದನ್ನು ಹೋಗಲಾ ಡಿಸಬೇಕು.-ಜೆ.ಆರ್.ಲೋಬೊ, ಶಾಸಕ.
ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡುವವರಿಗೆ ಅವಕಾಶ ನೀಡದೆ ಅಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ – ಬಿ.ಎ.ಮೊಯ್ದಿನ್ ಬಾವ, ಶಾಸಕ.
ಜಿಲ್ಲೆಯ ಅಭಿವೃದ್ಧಿಗೆ ಶಾಂತಿ ಸಾಮರಸ್ಯ ಅಗತ್ಯ. ಶಾಂತಿ ಕದಡುವ ಸಂದರ್ಭಗಳಾದ ಮೆರವಣಿಗೆ ಟ್ಯಾಬ್ಲೋ ನಡೆಸುವವರು, ಡ್ರಗ್ಸ್-ಮದ್ಯ ಸೇವನೆ ಮಾಡಿ ಶಾಂತಿ ಕದಡುವವರನ್ನು ಕಾನೂನು ಕ್ರಮದ ಮೂಲಕ ನಿಯಂತ್ರಿಸಬೇಕು.-ಯೋಗೀಶ್ ಭಟ್, ಮಾಜಿ ಶಾಸಕ.
ವಾರ್ಡ್ ಮಟ್ಟದಲ್ಲಿ ಶಾಂತಿ ಸಭೆ ನಡೆಸಬೇಕು. ಹಬ್ಬದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರು ಜೊತೆಯಾಗಿ ಆಚರಿಸುವ ಕ್ರಮ ಈಗಲೂ ಇದ್ದು, ಅದನ್ನು ಉಳಿಸಬೇಕು. -ಪದ್ಮನಾಭ ಉಳ್ಳಾಲ.
ಎಲ್ಲ ಸಮುದಾಯದ ಜನರು ಪರಸ್ಪರ ಸಂಪರ್ಕ ಹಾಗೂ ಪಾಲ್ಗೊಳ್ಳುವಿಕೆಯಿಂದ ಸೌಹಾರ್ದ ಸಾಧ್ಯ. -ಪ್ರೊ.ಹಿಲ್ಡಾರಾಯಪ್ಪನ್, ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ.