* ಗುಡಿಗಾರರದ್ದು ದಶಕಗಳಿಂದಲೂ ಇದೇ ವೃತ್ತಿ
* ಉತ್ಪಾದನಾ ವೆಚ್ಚ ಜಾಸ್ಥಿ, ಬರುವ ಆದಾಯ ಕಡಿಮೆ
ಕುಂದಾಪುರ: ಗಣೇಶ ಚತುರ್ಥಿಗೆ ದಿನವೊಂದೇ ಉಳಿದಿದೆ, ಪ್ರಥಮ ಪೂಜಿತ ಗಣಪನ ಹಬ್ಬದ ಗೌಜಿ ಹೆಚ್ಚುತ್ತಿದೆ. ಹಬ್ಬಕ್ಕೆ ಪ್ರತಿಷ್ಠಾಪಿಸುವ ನಾನಾ ಬಗೆಯ ಆವೆ ಮಣ್ಣಿನ ವಿಗ್ರಹಗಳು ಶಿಲ್ಪಿಗಳ ವರ್ಕ್ ಶಾಪ್ನಲ್ಲಿ ನಿರ್ಮಾಣಗೊಂಡು ಅಂತಿಮ ಸ್ಪರ್ಶ ಪಡೆಯುತ್ತಿದೆ.
ಹೀಗೆ ಗಣಪತಿ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡೋದ್ರಲ್ಲಿ ಫುಲ್ ಬ್ಯುಸಿಯಾಗಿರುವ ಇವರೇ ಕುಂದಾಪುರದ ವಸಂತ ಗುಡಿಗಾರ. ಕಳೆದ ಮೂವತ್ತು ವರ್ಷಗಳಿಂದ ಮಣ್ಣಿನ ಗಣಪತಿಯ ತರಹೇವಾರಿ ವಿಗ್ರಹಗಳನ್ನು ತಾಲೂಕಿನ ಹಲವಾರು ಕಡೆಗಳ ಗಣೇಶೋತ್ಸವಕ್ಕೆ ನಿರ್ಮಿಸಿ ಕೊಡುತ್ತಿರುವವರಲ್ಲಿ ಇವರು ಪ್ರಮುಖರು.
ವಸಂತ ಗುಡಿಗಾರರು ಶಿಲ್ಪ ಕಲೆಯನ್ನು ಕಸುಬನ್ನಾಗಿಸಿಕೊಂಡಿದ್ದು ಚೌತಿ ಸಮಯದ ನಂತರ ಮರ ಹಾಗೂ ಕಲ್ಲಿನ ಶಿಲ್ಪಗಳ ಕೆತ್ತನೆ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ನಾಲ್ವರು ಕೆಲಸಗಾರರನ್ನು ಹೊಂದಿರುವ ಇವರು ಗಣೇಶ ವಿಗ್ರಹ ತಯಾರಿಕೆಯಲ್ಲಿ ಪ್ರವೀಣರೆಂದರೂ ತಪ್ಪಾಗಲಾರದು. ತಮ್ಮ 17 ನೇ ವಯಸ್ಸಿನಿಂದಲೇ ಶ್ರದ್ಧೆ ಭಕ್ತಿಯಿಂದ ಈ ಕಲೆಯನ್ನು ಕರಗತವನ್ನಾಗಿಸಿಕೊಂಡ ವಸಂತ ಗುಡಿಗಾರರು ಕುಂದಾಪುರ ಹಳೆ ಬಸ್ಸು ನಿಲ್ದಾಣದ ಕರ್ಣಾಟಕ ಬ್ಯಾಂಕ್ ಸಮೀಪದ ತಮ್ಮ ವರ್ಕ್ಶಾಪ್ನಲ್ಲಿ ವರ್ಷಂಪ್ರತಿ 80 ಕ್ಕೂ ಹೆಚ್ಚು ವಿಗ್ರಹಗಳನ್ನು ಬೇಡಿಕೆಗನುಸಾರವಾಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ.
ಮೂರ್ತಿ ನಿರ್ಮಾಣದ ಆರಂಭ: ನಾಗರಪಂಚಮಿಯಂದು ಆನೆಗುಡ್ಡೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಚೌತಿ ವಿಗ್ರಹಗಳ ತಯಾರಿಕೆಗೆ ಅಧಿಕೃತವಾಗಿ ತೊಡಗಿಸಿಕೊಳ್ಳುತ್ತಾರೆ. ನಾಗರ ಪಂಚಮಿಯಂದು ಆಗಮಿಸುವ ಗ್ರಾಹಕರು ತೆಂಗಿನ ಕಾಯಿ, ಅಕ್ಕಿ, ಕಾಣಿಕೆ ಹಾಗೂ ಗಣಪತಿ ಪೀಠವನ್ನು ಗುಡಿಗಾರರಿಗೆ ನೀಡಿ ಮೂರ್ತಿ ನಿರ್ಮಿಸಿಕೊಡುವ ಬಗ್ಗೆ ಬೇಡಿಕೆಯಿಡುತ್ತಾರೆ. ಅಂದಿನಿಂದ ಆರಂಭಗೊಳ್ಳುವ ಮೂರ್ತಿ ತಯಾರಿಕೆಯ ಕೆಲಸದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಪ್ರಮಾಣಕ್ಕೆ ತಕ್ಕಂತೆ ಮೂರ್ತಿ ನಿರ್ಮಾಣಗೊಳ್ಳುತ್ತದೆ. ನಂಬಿಕೆ ಪ್ರಕಾರ ಮೂರ್ತಿ ನಿರ್ಮಿಸುವಾಗ ವರ್ಷ ವರ್ಷವೂ ಒಂದೊಂದು ಇಂಚು ಹೆಚ್ಚಿಸುತ್ತಾರೆ. ಇನ್ನು ಕಡಿಮೆ ಅವಧಿಯಲ್ಲಿ ಮೂರ್ತಿಯನ್ನು ನಿರ್ಮಿಸಿ ಗ್ರಾಹಕರಿಗೆ ನೀಡಬೇಕಾದ ಸವಾಲು ಇವರಿಗಿದೆ.
ಉತ್ಪಾದನಾ ವೆಚ್ಚ ಜಾಸ್ಥಿ: ವಸಂತ ಗುಡಿಗಾರರು ದಶಕಗಳ ಹಿಂದೆ ಕೆಲಸ ಆರಂಭಿಸುವ ಸಮಯದಲ್ಲಿ ಗದ್ದೆ ಮಣ್ಣು ತಂದು ಕುಟ್ಟಿ ಪುಡಿ ಮಾಡಿ ಕಷ್ಟಪಟ್ಟು ಮೂರ್ತಿ ನಿರ್ಮಿಸುತ್ತಿದ್ದರು. ಕ್ರಮೇಣ ಅದು ಬದಲಾಗಿ ಆವೆ ಮಣ್ಣಿನಿಂದ ಮೂರ್ತಿ ನಿರ್ಮಾಣದ ದಾರಿ ಕಂಡುಕೊಂಡರು. ಸಮರ್ಪಕ ಆವೆ ಮಣ್ಣಿನ ಪೂರೈಕೆ ಇಲ್ಲದಿರುವುದು ಮತ್ತು ಈಗ ಆಯಿಲ್ ಪೇಂಟ್ನ್ನು ಸರ್ಕಾರ ನಿಷೇದಿಸಿರುವುದರಿಂದ ಜಲವರ್ಣ(ವಾಟರ್ ಪೇಂಟ್)ವನ್ನೇ ಬಳಸಬೇಕಾಗುತ್ತಿರುವುದು ಮೂರ್ತಿ ಬೆಲೆಯೆರಿಕೆಗೊಂದು ಕಾರಣವಾಗಿದೆ.
12 ಇಂಚಿನಿಂದ ಆರಂಭಗೊಂಡು ಐದು ಅಡಿವರೆಗೂ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಇವರು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆಗನುಸಾರವಾಗಿ ಮೂರ್ತಿ ನಿರ್ಮಿಸುತ್ತಾರೆ. ಹಲವು ಬಾರಿ ವಿವಿಧ ವಿನ್ಯಾಸದಲ್ಲಿ ಮೂರ್ತಿ ನಿರ್ಮಿಸಿಕೊಡುವ ಬಗ್ಗೆ ಬೇಡಿಕೆ ಬಂದರೂ ಕೂಡ ಸಮಯದ ಅಭಾವದಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವಸಂತ.
ತಿಂಗಳುಗಳ ಮೊದಲಿನಿಂದಲೇ ಬೇಡಿಕೆಗನುಸಾರವಾಗಿ ನಿರ್ಮಾಣುಗೊಳ್ಳುವ ಮೂರ್ತಿಗಳಿಗೆ ಹಬ್ಬಕ್ಕೆ ಮೊದಲ ಒಂದು ವಾರದ ಮುಂಚೆ ಬಣ್ಣ ನೀಡುತ್ತಾರೆ. ಅಲ್ಲದೇ ಗಣೇಶ ಚತುರ್ಥಿ ದಿನ ಮೂರ್ತಿಗೊಂದು ಕಲೆ ಕೊಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಗ್ರಾಹಕರಿಗೆ ನೀಡುತ್ತಾರೆ.
“ಇತ್ತೀಚೆಗೆ ಮಣ್ಣಿನ ದರ ದುಬಾರಿಯಾಗಿದೆ ಅಲ್ಲದೇ ವಾಟರ್ ಪೇಂಟ್(ಜಲವರ್ಣ)ದ ಬೆಲೆ ದುಬಾರಿಯಾದ ಪರಿಣಾಮ ಮೂರ್ತಿಯ ಬೆಲೆಯಲ್ಲೂ ಕೊಂಚ ಬದಲಾವಣೆ ವರ್ಷ ವರ್ಷ ಆಗುತ್ತಿದೆ. ಇದಕ್ಕೆ ಗ್ರಾಹಕರು ಸ್ಪಂಧಿಸುತ್ತಾರೆ.
– ವಸಂತ ಗುಡಿಗಾರ (ಮಣ್ಣಿನ ಮೂರ್ತಿ ತಯಾರಕ).
ಚಿತ್ರ, ವರದಿ: ಯೋಗೀಶ್ ಕುಂಭಾಸಿ