ಮಂಗಳೂರು,ಸೆ.04 : ನೇತ್ರಾವತಿ ನದಿ ತಿರುವು – ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜ್ ಮುಂಭಾಗದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ ಅವರು ಮಾತನಾಡಿ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಜನರು ನೀರಿನ ಅಭಾವನ್ನು ಅನುಭವಿಸುತ್ತಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇಂಥ ಸಂದರ್ಭದಲ್ಲಿ ಇಲ್ಲಿ ಸಿಗುವ ನೀರನ್ನು ಕೋಲಾರ ಮತ್ತು ಇತರೆಡೆಗಳಿಗೆ ಸಾಗಿಸುವುದರಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಳುಕಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಎಲ್ಲರಿಗೂ ತಿಳಿದಂತೆ ಈ ಎತ್ತಿನ ಹೊಳೆ ಯೋಜನೆಯು ಹಣಕ್ಕೋಸ್ಕರ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಲು ರಾಜಕಾರಣಿಗಳು ತೆಗೆದುಕೊಂಡಿರುವ ನಿರ್ಧಾರವಾಗಿದೆ. ಈ ಯೋಜನೆಯಿಂದ ಸುಮಾರು 12000 ಕೋಟಿ ರುಪಾಯಿ ರಾಜಕಾರಣಿಗಳ ಜೇಬು ತುಂಬಲಿದೆ. ಇದು ನಮ್ಮ ಸಂಸದರು, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ನಮಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ನಾಡಿನ ಜನರು ಜಾತಿ ಭೇದ ಮರೆತು ಈ ಯೋಜನೆ ವಿರುದ್ಧ ಉಗ್ರಾವಾದ ಹೋರಾಟನಡೆಸ ಬೇಕು. ವಿದ್ಯಾರ್ಥಿಗಳ ಜೊತೆ ಪ್ರತಿಯೊಬ್ಬರೂ ಕೈಜೋಡಿಸಿಕೊಂಡು ಈ ಹೋರಾಟದಲ್ಲಿ ಭಾಗಿಯಾದರೆ ವಿದ್ಯಾರ್ಥಿಗಳ ಶಕ್ತಿಯ ಜೊತೆ ಸರ್ವರ ಶಕ್ತಿಯೂ ಸೇರಿ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ನಮ್ಮ ಜೀವನವನ್ನು ಮುಡುಪಾಗಿಟ್ಟು ನಾವು ನೇತ್ರಾವತಿಯನ್ನು ರಕ್ಷಿಸುವ ಪಣ ತೊಡಬೇಕಿದೆ ಎಂದು ದಿನಕರ್ ಶೆಟ್ಟಿ ಹೇಳಿದರು.