ಬಂಟ್ವಾಳ, ಸೆ.3: ಕನ್ಯಾನದಲ್ಲಿ ರವಿವಾರ ನಡೆದ ಯುವಕನೋರ್ವನ ಹತ್ಯೆ ಹಾಗೂ ಇಬ್ಬರಿಗೆ ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಿಕ್ಷಾ ಚಾಲಕನನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಮುಹಮ್ಮದ್ ಇಕ್ಬಾಲ್ ಯಾನೆ ಇಕ್ಕು(24) ಬಂಧಿತ ಆರೋಪಿ. ಕನ್ಯಾನದಲ್ಲಿ ರವಿವಾರ ಕೇರಳದ ನಪ್ಪಟೆ ರಫೀಕ್ ಹಾಗೂ ಆತನ ತಂಡವು ಪೈವಳಿಕೆ ನಿವಾಸಿ ಆಸಿಫ್ ಎಂಬಾತನನ್ನು ಮಾರಕಾಯುಧದಿಂದ ಇರಿದು ಹತ್ಯೆ ಮಾಡಿ, ಹಕೀಂ ಹಾಗೂ ರಿಯಾಝ್ ಎಂಬವರಿಗೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿತ್ತು. ಬಳಿಕ ತಂಡ ಇಕ್ಬಾಲ್ನ ರಿಕ್ಷಾದಲ್ಲಿ ಪರಾರಿಯಾಗಿತ್ತು ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರಲಾಗಿತ್ತು.
ತಂಡಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಇಕ್ಬಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಇಕ್ಬಾಲ್ ಕನ್ಯಾನದ ಶಾಲೆಯೊಂದರ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ್ದ ಪ್ರಕರಣ ಮಾರ್ಚ್ನಲ್ಲಿ ನಡೆದಿದ್ದು, ವಿಟ್ಲ ಪೊಲೀಸರು ಆತನನ್ನು ಬಂಧಿಸಿದ್ದರು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಬಟ್ಟೆ ಮಳಿಗೆ ಬೆಂಕಿಗಾಹುತಿ :
ಮಂಗಳೂರು : ನಗರದ ಸೆಂಟ್ರಲ್ ಮಾರುಕಟ್ಟೆ ಬಳಿಯ ಬಟ್ಟೆ ಅಂಗಡಿ ಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ.
ಸೆಂಟ್ರಲ್ ಮಾರುಕಟ್ಟೆ ರಸ್ತೆಯಲ್ಲಿರುವ ಭಾರತ್ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯಲ್ಲಿ ಇಂದು ಸಂಜೆ 5 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿತ್ತಾದರೂ ಅದಾಗಲೇ ಅಂಗಡಿಯಲ್ಲಿ ಬೆಲೆಬಾಳುವ ಬಟ್ಟೆಗಳು, ಇತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ / ಓರ್ವ ಪರಾರಿ
ಪುತ್ತೂರು : ಲಾರಿಯೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬುಧವಾರ ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭ ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಬುಧವಾರ ನಸುಕಿನ ಜಾವ 34ನೆ ನೆಕ್ಕಿಲಾಡಿ ಜಂಕ್ಷನ್ನಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರ ತಂಡ ಈಚರ್ ಲಾರಿಯೊಂದನ್ನು ತಡೆದು ತಪಾಸಣೆ ನಡೆಸಿ ದಾಖಲೆಗಳಿಲ್ಲದೆ ಅಕ್ರಮ ವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಬಸವನ ಸರ್ಕಲ್ ಬಾಂಬೆ ಬಝಾರ್ ನಿವಾಸಿ ಇಮ್ರಾನ್ ಹಾಗೂ ಹಳೆಬೀಡಿನ ಹೊಸೂರು ನಿವಾಸಿ ಅಝೀಝ್ಬಂಧಿತರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ನವಾಝ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು,ಜಾನುವಾರುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ್ಪಿನಂ ಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ, ಸಿಬ್ಬಂದಿಗಳಾದ ದೇವದಾಸ್, ಮನೋಹರ ಮೂಲ್ಯ, ಶ್ರೀಧರ್, ಸಚಿನ್ ಹಾಗೂ ಜೀಪು ಚಾಲಕ ರಘುರಾಮ ಪಾಲ್ಗೊಂಡಿದ್ದರು.
ದೇವಸ್ಥಾನದ ಸೊತ್ತು ಕಳವು
ಉಳ್ಳಾಲ : ಕೊಣಾಜೆ ಠಾಣೆ ವ್ಯಾಪ್ತಿಯ ಇನೋಳಿಯ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಮಂಗಳವಾರ ನಡೆದಿದೆ.
ಇನೋಳಿ ಸೋಮನಾಥ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ಉತ್ಸವದ ಮೂರ್ತಿ ಹಾಗೂ ಸಿಸಿ ಕ್ಯಾಮರದ ರೆಕಾರ್ಡಿಂಗ್ ಯುನಿಟನ್ನು ಕಳವುಗೈದಿದ್ದಾರೆ ಎಂದು ದೂರಲಾಗಿದೆ. ಬುಧವಾರ ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕಳವಾದ ಸೊತ್ತಿನ ವೌಲ್ಯ ಒಂದೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಅಪಹರಿಸಿ,ಕೊಲೆಗೆ ಯತ್ನ: ಇಬ್ಬರ ಬಂಧನ
ಮಂಗಳೂರು: ಬಜ್ಪೆ ಸಮೀಪದ ಅದ್ಯಪಾಡಿ ನಿವಾಸಿ ಮನ್ಸೂರು ಎಂಬುವರನ್ನು ಮನೆಯಿಂದ ಅಪಹರಿಸಿ ಹಲ್ಲೆ, ಕೊಲೆಗೆ ಯತ್ನಿಸಿದ ಆರೋಪಿಗಳು ಬಳಿಕ ಅಡ್ಡೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಡಗ ಎಡಪದವಿನ ಬೆಳ್ಳಿಚ್ಚಾರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತೋಡಾರು ನಿವಾಸಿಗಳಾದ ಅರ್ಗ ಬಶೀರ್ (38) ಹಾಗೂ ರಜಾಕ್ (35) ರಜಾಕ್. ಇವರಿಂದ 2 ಝೈಲೋ ಕಾರ್ ಹಾಗೂ ತಲವಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರು ಮಾರ್ಚ್ನಲ್ಲಿ ಅದ್ಯಪಾಡಿಯ ಮನ್ಸೂರು ಎಂಬುವರನ್ನು ಅವರ ಮನೆಯಿಂದ ಅಪಹರಿಸಿದ್ದರು. ಅಲ್ಲದೆ ಇತ್ತೀಚೆಗೆ ಕೈಕಂಬದಲ್ಲಿ ನಡೆದ ಹಲವಾರು ದನಕಳ್ಳತನ ಕೃತ್ಯದಲ್ಲಿ ಇವರು ಪ್ರಮುಖರು. ಇವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




















