ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆಕೊಡಲಾದ ಭಾರತ್ ಬಂದ್ಗೆ ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ನ ಬಿಸಿಗೆ ಪ್ರಯಾಣಿಕರು ಮತ್ತು ವಾಹನ ಸವಾರರು ಹೈರಾಣಾಗುವ ಸ್ಥಿತಿ ಬುಧವಾರ ಕಂಡು ಬಂದಿತ್ತು.
ಬೆಳಿಗ್ಗೆನಿಂದಲೇ ಖಾಸಗಿ ಬಸ್ಸು, ಸರಕಾರಿ ಬಸ್ಸುಗಳು ರಸ್ತೆಗಿಳಿದಿರಲಿಲ್ಲ, ಅಲ್ಲದೇ ಆಟೋ ರಿಕ್ಷಾ ಸಂಚಾರವೂ ಇಲ್ಲದ ಕಾರಣ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿತ್ತು. ಲಾರಿಗಳು ಹಾಗೂ ಕೆಲವು ಗೂಡ್ಸ್ ವಾಹನಗಳು ರಸ್ತೆಗಿಳಿದರೂ ಕೂಡ ಅಲ್ಲಲ್ಲಿ ಸಂಘಟನೆಯ ಕಾರ್ಯಕರ್ತರು ಅವುಗಳನ್ನು ಅಡ್ಡಗಟ್ಟಿ ಸಂಚರಿಸದಂತೆ ಸೂಚನೆ ನೀಡಿದ ಘಟನೆಯೂ ನಡೆದಿತ್ತು. ಇನ್ನು ತಾಲೂಕಿನ ಹಲವೆಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಮುಚ್ಚಿದ್ದು ಬಂದ್ಗೆ ಬೆಂಬಲ ಸೂಚಿಸಿದ ಹಾಗಿತ್ತು.
ತಲ್ಲೂರಿನಲ್ಲಿ ಕಾರಿನ ಗಾಜು ಪುಡಿ: ಹೆಮ್ಮಾಡಿ ಹಾಗೂ ತಲೂರಿನಲ್ಲಿ ಕೆಲವು ಮಂದಿ ಹೆದ್ದಾರಿಯಲ್ಲಿ ಸಂಚರಿಸುವ ಕೆಲವು ವಾಹನಗಳನ್ನು ತಡೆಯುವ ಕಾರ್ಯ ನಡೆಸುತ್ತಿದ್ದ ವೇಳೆ ಮುರ್ಡೇಶ್ವರದಿಂದ ಉಡುಪಿಯತ್ತ ಸಾಗುತ್ತಿದ್ದ ಬೆಂಗಳೂರು ಮೂಲದ ಕಾರೊಂದನ್ನು ತಡೇದ ಗುಂಪಿನಲ್ಲಿದ್ದ ಕಿಡಿಗೇಡಿಯೋರ್ವ ಕಾರಿನ ಗಾಜನ್ನು ಪುಡಿಗೈಯುವ ಮೂಲಕ ಕೆಲ ಕಾಲ ಉದ್ವಿಗ್ನ ಸ್ಥಿತಿ ಸ್ಥಳದಲ್ಲಿ ನಿರ್ಮಾಣಗೊಂಡಿತ್ತು. ತಕ್ಷಣವೇ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೋಟೇಶ್ವರದಲ್ಲಿಯೂ ಒಳಪೇಟೆಯ ರಸ್ತೆಗೆ ಕಲ್ಲು ಅಡ್ಡಲಾಗಿ ಇಟ್ಟಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಕಲ್ಲನ್ನು ತೆರವುಗೊಳಿಸಿದರು.
ಕುಂದಾಪುರದಲ್ಲಿ ಬ್ರಹತ್ ರ್ಯಾಲಿ, ರಸ್ತೆತಡೆ: ಕುಂದಾಪುರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಒಗ್ಗೂಡಿ ಬ್ರಹತ್ ರ್ಯಾಲಿ ನಡೆಸಿದರು. ಕುಂದಾಪುರ ಶಾಸ್ತ್ರೀ ವೃತ್ತದಿಂದ ಕುಂದಾಪುರ ಪೇಟೆ ಸಂಚರಿಸಿದ ಬ್ರಹತ್ ಪ್ರತಿಭಟನಾ ಮೆರವಣಿಗೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಅಂತ್ಯಗೊಂಡಿತು. ಇದೇ ವೇಳೆ ಹಲವು ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟಿಸಿದರು. ಬೈಂದೂರಿನಲ್ಲಿಯೂ ಕೂಡ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಿವಿಧ ಸಂಘಟನೆ ನೇತ್ರತ್ವದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಯಿತು. ಬಸ್ಸು ಸಂಚಾರವೂ ಸ್ಥಗಿತಗೊಂಡಿದ್ದು ಅಂಗಡಿಮುಂಗಟ್ಟುಗಳು ಮುಚ್ಚಿದವು.
ಒಟಿನಲ್ಲಿ ಒಂದೆರಡು ಪ್ರಕರಣಗಳನ್ನು ಹೊರತುಪಡಿಸಿದರೇ ತಾಲೂಕಿನಾದ್ಯಂತ ಶಾಂತಿಯುತವಾಗಿ ಬಂದ್ ನಡೆಯುತ್ತಿದೆ. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ., ಠಾಣಾಧಿಕಾರಿ ನಾಸೀರ್ ಹುಸೇನ್, ಟ್ರಾಫಿಕ್ ಠಾಣೆಯ ಉಪನಿರೀಕ್ಷಕರಾದ ಜಯ ಹಾಗೂ ದೇವೇಂದ್ರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ