ಮಂಗಳೂರು,ಆಗಸ್ಟ್. 31 : ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ ಪಿ.ಸಿ.ಮಹಾಲನೋಬಿಸ್ ಇವರ 122ನೇ ಜನ್ಮ ದಿನಾಚರಣೆಯನ್ನು ಸರಕಾರದ ನಿರ್ದೇಶನದಂತೆ ಸಾಂಖ್ಯಿಕ ದಿನ” ವನ್ನಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯಲ್ಲಿ ಆಚರಿಸಲಾಯಿತು.
ಸಂಖ್ಯಾ ಶಾಸ್ತ್ರದಲ್ಲಿ ಸಾಧನೆಗೈದ ಸಂಖ್ಯಾ ಶಾಸ್ತ್ರಜ್ಞ ಪ್ರೊ ಪಿ.ಸಿ.ಮಹಾಲನೋಬಿಸ್ ಇವರ ಬಗ್ಗೆ ಶ್ಲಾಘಿಸುತ್ತಾ ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವಲ್ಲಿ ಅಂಕಿ ಅಂಶಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಂಕಿ ಅಂಶಗಳು ನಿಖರವಾಗಿರಬೇಕು, ಅಂಕಿ ಅಂಶದ ಪಾತ್ರವನ್ನು ನಗಣ್ಯ ಮಾಡದೆ ಪರಿಣಾಮಕಾರಿ ಯಾಗಿ ಬಳಸಬೇಕೆಂಬುದಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ಶ್ರೀ ಮೊಹಮ್ಮದ್ ನಝೀರ್ರವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದರು. ಪ್ರೊ ಪಿ.ಸಿ.ಮಹಾಲನೋಬಿಸ್ರವರ ಸಂಸ್ಮರಣೆ ಪ್ರಯುಕ್ತ ಅತಿಥಿ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಪ್ರೊ ಪಿ.ಸಿ.ಮಹಾಲನೋಬಿಸ್ರವರು ಸಂಖ್ಯಾ ಶಾಸ್ತ್ರಕ್ಕೆ ನೀಡಿದ ಕೊಡುಗೆ ಹಾಗೂ ಸಾಮಾಜಿಕ ಅಂಕಿ ಅಂಶಗಳ ಕುರಿತು ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಯಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|ಅರುಣ್ ಕುಮಾರ್ ಇವರು ಅಂಕಿ ಅಂಶದ ಜೊತೆಗೆ ರಾಜಕೀಯ ಪ್ರೇರಣೆ ಅಗತ್ಯ ವೆಂಬುದಾಗಿ ತಿಳಿಸಿದರು.
ಅಭಿವೃದ್ಧಿಗಾಗಿ ಅಂಕಿ ಅಂಶದ ಮಹತ್ವದ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲೂ ನಡೆಸಿದರೆ ಸಾರ್ವಜನಿಕರಿಗೆ ಅರಿವಾಗಿ ಮಾಹಿತಿ ಸಂಗ್ರಹಣೆಗೆ ಸಹಕಾರಿಯಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಛೇರಿ ಮುಖ್ಯಸ್ಥರಾದ ಶ್ರೀ ಪಿ.ಆನಂದರವರು ತಿಳಿಸಿದರು.
ಶ್ರೀ ಪ್ರದೀಪ್ ಡಿ’ಸೋಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಂಬಲರ್ಹವಾದ ಪರಿಪೂರ್ಣ ವಾದ ಅಂಕಿ ಅಂಶಗಳನ್ನು ಸಂಗ್ರಹಿಸಿದಲ್ಲಿ ಪ್ರೊ ಪಿ.ಸಿ.ಮಹಾಲನೋಬಿಸ್ರವರಿಗೆ ಸಲ್ಲಬೇಕಾದ ಗೌರವ ಈ ಮೂಲಕ ಸಲ್ಲುವಂತಾಗುತ್ತದೆ ಹಾಗೂ ದೇಶ ಮತ್ತು ವಿದೇಶದಲ್ಲೂ ಸಂಖ್ಯಾ ಶಾಸ್ತ್ರಜ್ಞರು ವಿಫುಲ ಅವಕಾಶವನ್ನು ಕಲ್ಪಿಸಿಕೊಳ್ಳಬಹುದೆಂಬ ಹಿತನುಡಿಗಳನ್ನಾಡಿದರು.
ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಹುಲ್ ಜಿ.ದಾಸ್, ತೃತೀಯ ಬಿ.ಎಸ್ಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು, ಉಜಿರೆ, ಕುಮಾರಿ ದೀಪಿಕಾ, ತೃತೀಯ ಬಿ.ಎಸ್ಸಿ, ಬೆಸೆಂಟ್ ಮಹಿಳಾ ಪದವಿ ಕಾಲೇಜು, ಮಂಗಳೂರು ಇವರು ದ್ವಿತೀಯ ಸ್ಥಾನ ಮತ್ತು ಶ್ರೀ ರೋಹನ್ ಪೈ, ತೃತೀಯ ಬಿ.ಎಸ್ಸಿ, ಸಂತ ಅಲೋಶಿಯಸ್, ಪದವಿ ಕಾಲೇಜು, ಮಂಗಳೂರು ಇವರು ತೃತೀಯ ಸ್ಥಾನವನ್ನು ಪಡೆದರು. ದ.ಕ.ಜಿಲ್ಲಾ ಪಂಚಾಯತ್ನ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಯವರಾದ ಶ್ರೀಮತಿ ಸಂಧ್ಯಾ ಕೆ.ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.
ಸಹಾಯಕ ನಿರ್ದೇಶಕರಾದ ಶ್ರೀ ಮನಮೋಹನ ಇವರು ಅತಿಥಿಗಳನ್ನು ಸ್ವಾಗತಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು|ಪ್ರಿಯ ಸುಷ್ಮಾ ಡಿ”ಸೋಜ ಇವರು ಕಾರ್ಯಕ್ರಮ ನಿರೂಪಿಸಿದರು. ಅಧೀಕ್ಷಕರಾದಶ್ರೀ ಎ.ಚಂದ್ರಶೇಖರಪ್ಪ ಇವರ ವಂದನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.