ಬಂಟ್ವಾಳ, ಆ.31: ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದು, ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ರವಿವಾರ ಬಂಟ್ವಾಳ ತಾಲೂಕಿನ ಕನ್ಯಾನ ಎಂಬಲ್ಲಿ ಸಂಭವಿಸಿದೆ.
ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟವರನ್ನು ಕೇರಳದ ಪೈವಳಿಕೆ ಸಮೀಪದ ಬಾಯಿಕಟ್ಟೆ ನಿವಾಸಿ ಆಸಿಫ್ (24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಯಾಝ್ (24) ಎಂಬವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಯಾನದ ಮನೆಯೊಂದರಲ್ಲಿ ನಡೆಯುತ್ತಿದ್ದ ಮದುವೆಗೆ ಆಸಿಫ್ ಮತ್ತು ರಿಯಾಝ್ ಬೈಕ್ನಲ್ಲಿ ಆಗಮಿಸಿದ್ದು, ಹಿಂದಿರುಗುತ್ತಿದ್ದ ವೇಳೆ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಅವರು ಚಲಾಯಿಸುತ್ತಿದ್ದ ಬೈಕ್ಗೆ ಮುಗುಳಿ ಕಡೆಯಿಂದ ಅಲ್ಟೋ ಕಾರಿನಲ್ಲಿ ಬಂದ 5 ಮಂದಿಯ ತಂಡ ಅಡ್ಡಗಟ್ಟಲು ಪ್ರಯತ್ನಿಸಿ ಬೈಕ್ಗೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭ ಬೈಕ್ ಹಾಗೂ ಸವಾರರು ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು, ಕಾರಿನಲ್ಲಿದ್ದವರು ಲಾಂಗ್ ಹಾಗೂ ರಾಡ್ನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಿಯಾಝ್ರನ್ನು ಸುಮಾರು ನೂರು ಮೀಟರ್ ದೂರದಲ್ಲಿ ಅಡ್ಡಗಟ್ಟಿ ಕೊಲೆಯತ್ನ ನಡೆಸಲಾಗಿದೆ. ಸುಮಾರು 50 ಮೀಟರ್ ದೂರದಲ್ಲಿ ಆಸಿಫ್ರನ್ನು ಭೀಕರವಾಗಿ ಹಲ್ಲೆಗೈದಿದ್ದು, ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ಪೂರ್ವದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.