ಮಂಗಳೂರು, ಆ.31: ಕೆಪಿಎಲ್ನ 4ನೆ ಆವೃತ್ತಿಯ ಕಾರ್ಬನ್ ಸ್ಮಾರ್ಟ್ ಕೆಪಿಎಲ್ 2015 ಟ್ರೋಫಿಯನ್ನು ರಾಜ್ಯ ಕ್ರೀಡೆ, ಯುವಜನ ಸೇವೆ ಸಚಿವ ಅಭಯಚಂದ್ರ ಜೈನ್ ರವಿವಾರ ನಗರದ ಫೋರಂ ಫಿಝಾ ಮಾಲ್ನಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಸಹ ಕಾರ್ಯದರ್ಶಿ ಸಂತೋಷ್ ಮೆನನ್, ಮಂಗಳೂರು ಯುನೈಟೆಡ್ ತಂಡದ ಮಾಲಕರಾಗಿರುವ ಫಿಝಾ ಗ್ರೂಪ್ನ ಅಧ್ಯಕ್ಷ ಬಿ.ಎಂ.ಫಾರೂಕ್ ಹಾಗೂ ಶಾಸಕ ಮೊಯ್ದಿನ್ ಬಾವ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಪ್ರಕಟಿಸಿ, ಆಟಗಾರರ ಪೋಷಾಕನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜೇಶ್ ಪಟೇಲ್, ಗ್ರಾಮಾಂತರ ಭಾಗಗಳ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ಕೆಪಿಎಲ್ ಪಂದ್ಯಾವಳಿಯಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ಅಸೋಸಿ ಯೇಶನ್ ವತಿಯಿಂದ ನಡೆಸಲಾಗುತ್ತಿರುವ ಈ ಪಂದ್ಯಾವಳಿ ಯಲ್ಲಿ ಶೇ.50ಕ್ಕೂ ಹೆಚ್ಚು ಕ್ರೀಡಾಪಟುಗಳು ಗ್ರಾಮಾಂತರ ಭಾಗದವರೇ ಆಗಿದ್ದಾರೆ ಎಂದರು.
ಕೆಪಿಎಲ್ ಪಂದ್ಯಾವಳಿಗೆ ಅತಿ ಹೆಚ್ಚು ಟಿಆರ್ಪಿ ಇರುವ ಕಾರಣ ಸೋನಿ ಸಿಕ್ಸ್ ಚಾನೆಲ್ ನೇರ ಪ್ರಸಾರಕ್ಕೆ ಮುಂದೆ ಬಂದಿದೆ. ಇದು ಕೆಪಿಎಲ್ನ ಜನಪ್ರಿಯತೆಯನ್ನು ಸೂಚಿಸಿತ್ತದೆ ಎಂದ ಬ್ರಿಜೇಶ್, ಕೆಪಿಎಲ್ ಮೂಲಕ ನಾವು ಹೊಸ ಹೊಸ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಇದರಿಂದ ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟ್ರೋಫಿಯನ್ನು ಗೆದ್ದುಕೊಳ್ಳಲು ಸಹಕಾರಿಯಾಗಿದೆ ಎಂದರು.
ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಮಂಗಳೂರು ಅನೇಕ ಕ್ರೀಡಾಪಟುಗಳನ್ನು ನೀಡಿದ ನಗರ ವಾಗಿದೆ. ಇಲ್ಲಿ ಉತ್ತಮ ಹಾಗೂ ವ್ಯವಸ್ಥಿತ ಕ್ರಿಕೆಟ್ ಕ್ರೀಡಾಂ ಗಣವೊಂದನ್ನು ನಿರ್ಮಾಣ ಮಾಡಲು ಬಯಸಿದ್ದೇವೆ. ಇದಕ್ಕಾಗಿ 15 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ, ಈ ಬಗ್ಗೆ ಸೋಮವಾರ ಜಿಲ್ಲಾ ಧಿಕಾರಿಯೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಮಂಗಳೂರಿನಲ್ಲಿ ಕ್ರಿಕೆಟ್ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರು ವಿವಿ ಉಪಕುಲಪತಿಯವರೊಂದಿಗೆ ಚರ್ಚಿಸಿ ಕಾಲೇಜು ಮಟ್ಟದಲ್ಲೇ ಒಂದೊಂದು ತಂಡವನ್ನು ರಚಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಜೈನ್ ಹೇಳಿದರು. ಆನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಕ್ರಿಕೆಟ್ ಮೈದಾನಕ್ಕಾಗಿ ಜಾಗ ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಸಕಲ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದರೆ ಕರಾವಳಿ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಿದಂತಾಗುತ್ತದೆ. ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡ ಪ್ರಶಸ್ತಿ ಪಡೆಯಲು ಪ್ರಮುಖ ಕಾರಣಕರ್ತರಾದ ಹಾಗೂ ಇಂಡಿಯಾ ‘ಎ’ ತಂಡಕ್ಕೆ ಆಯ್ಕೆಯಾಗಿದ್ದ ಕರುಣ್ ನಾಯರ್ ಮಂಗಳೂರು ಯುನೈಟೆಡ್ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕೆ ಇಳಿಯಲಿದ್ದಾರೆ. ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮೆನ್ ಆಗಿ ಅವಿನಾಶ್ ಕೆ..ಸಿ., ಎಡಗೈ ದಾಂಡಿಗ ಶಿಶಿರ್ ಭವಾನೆ, ರೋನಿತ್ ಮೋರೆ ಹಾಗೂ ಉದಿತ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ ಎಂದು ಮಂಗಳೂರು ಉತ್ತರ ವಲಯ ಕ್ಷೇತ್ರದ ಶಾಸಕ ಬಿ.ಎ.ಮೊಯ್ದಿನ್ ಬಾವ ತಿಳಿಸಿದ್ದಾರೆ.
ಯುನೈಟೆಡ್ಗೆ ಈ ಬಾರಿ ಪ್ರತಿಭಾವಂತ ಯುವ ಕ್ರಿಕೆಟ್ ಆಟಗಾರರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದ್ದೇವೆ. ಈ ತಂಡ ಈ ಬಾರಿಯ ಟ್ರೋಫಿಯನ್ನು ಗೆದ್ದು ತರುತ್ತದೆ ಎಂಬ ವಿಶ್ವಾಸವಿದೆ. ಅದೇ ರೀತಿ ಕೆಲವು ಪಂದ್ಯಗಳು ಮಂಗಳೂರಿನಲ್ಲಿ ನಡೆಯಬಹುದು ಎಂಬ ವಿಶ್ವಾಸವನ್ನೂ ನಾವು ಹೊಂದಿದ್ದೇವೆ ಎಂದು ಮಂಗಳೂರು ಯುನೈಟೆಡ್ ತಂಡದ ಮಾಲಕ ಬಿ.ಎಂ.ಫಾರೂಕ್ ಹೇಳಿದರು.
ಮಂಗಳೂರು ಯುನೈಟೆಡ್ ತಂಡದ ಆಟಗಾರರ ವಿವರ :
ಕರುಣ್ ನಾಯರ್, ರೋನಿತ್ ಮೋರ್, ಶಿಶಿರ್ ಭವಾನೆ, ಉದಿತ್ ಪಟೇಲ್, ಅವಿನಾಶ್ ಕೆ.ಸಿ., ಸೈಯದ್ ಮುಈನುದ್ದೀನ್, ಪ್ರದೀಪ್ ಟಿ., ಭರತ್ ಬಿ.ಎನ್., ರೋಹಿತ್ ಸಭರ್ವಾಲ್, ರೋಹನ್ ಕದಮ್, ಮಿತ್ರಕಾಂತ್ ಯಾದವ್, ನಿಹಾಫ್ ಶಿಲಾರ್, ಅರ್ಶದೀಪ್ ಸಿಂಗ್ ಬ್ರಾರ್, ನಿಶ್ಕಿತ್ರಾಜ್ ಇವರು ಮಂಗಳೂರು ಯುನೈಟೆಡ್ ಟೀಮ್ನ ಆಟಗಾರರಾಗಿದ್ದಾರೆ.