ಉಳ್ಳಾಲ, ಜುಲೈ. 30 : ಮರಳು ತುಂಬಿದ್ದ ದೋಣಿಯೊಂದು ನೇತ್ರಾವತಿ ನದಿಯಲ್ಲಿ ಮಗುಚಿ ಬಿದ್ದ ಪರಿಣಾಮ ಓರ್ವ ನೀರುಪಾಲಾಗಿದ್ದರೆ, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿಯು ವಳಚ್ಚಿಲ್ನಿಂದ ಹರೇಕಳಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಹರೇಕಳ ರಾಜಗುಡ್ಡೆ ನಿವಾಸಿ ಶರೀಫ್ ಎಂಬವರ ಪುತ್ರ ಲುಕ್ಮಾನ್ (20) ನೀರುಪಾಲಾದ ಯುವಕ. ಸಲೀಂ, ಬದ್ರುದ್ದೀನ್, ಅಝೀಝ್ ಮತ್ತು ಅಮೀರ್ ಎಂಬವರು ಪ್ರಾಣಾಪಾಯದಿಂದ ಪಾರಾದವರಾಗಿದ್ದಾರೆ. ಈ ಪೈಕಿ ಅಮೀರ್ ಎಂಬವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಹರೇಕಳದ ಪೊಡಿಯಬ್ಬ ಎಂಬವರ ಪುತ್ರರಾದ ಬದ್ರುದ್ದೀನ್, ಅಝೀಝ್, ಅಮೀರ್ ಹಾಗೂ ಅಳಿಯ ಸಲೀಂ ದೋಣಿಗೆ ಮರಳು ತುಂಬಿಸುವ ಕೆಲಸ ಮಾಡುತ್ತಿದ್ದರು. ಮಳೆಗಾಲದ ನಿಮಿತ್ತ ದೋಣಿಯಲ್ಲಿ ದುಡಿಯುವ ಉತ್ತರ ಪ್ರದೇಶ ಮೂಲದ ಮರಳು ಕಾರ್ಮಿಕರು ಊರಿಗೆ ತೆರಳಿರುವುದರಿಂದ ಮಂಗಳೂರಿನ ಆಸಿಫ್ ಎಂಬವರ ದೋಣಿಯಲ್ಲಿ ಈ ನಾಲ್ವರ ಜೊತೆ ಪೊಡಿಯಬ್ಬ ಅವರ ಮೊಮ್ಮಗ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಲುಕ್ಮಾನ್ ಅವರೂ ಸೋಮವಾರದಿಂದ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಐವರೂ ವಳಚ್ಚಿಲ್ ಬಳಿ ದೋಣಿಗೆ ಮರಳು ತುಂಬಿಸಿ ಹರೇಕಳದತ್ತ ಬರುತ್ತಿದ್ದರು. ನದಿಯ ಮಧ್ಯೆ ತಲುಪಿದಾಗ ಬೋಟು ಮಗುಚಿ ಬಿದ್ದಿದೆ, ಈ ಸಂದರ್ಭ ನಾಲ್ವರು ಈಜಿ ಪ್ರಾಣಾಪಾಯದಿಂದ ಪಾರಾದರೆ, ಲುಕ್ಮಾನ್ ನೀರುಪಾಲಾಗಿದ್ದಾರೆ. ಲುಕ್ಮಾನ್ ಪತ್ತೆಗಾಗಿ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದಾರೆ.
ಲುಕ್ಮಾನ್ಗೆ ಈಜು ಬರುತ್ತಿತ್ತ್ತು: ನೀರುಪಾಲಾಗಿರುವ ಲುಕ್ಮಾನ್ ಈಜು ಬಲ್ಲವನಾಗಿದ್ದಾನೆ ಎಂದು ತಿಳಿಸಿರುವ ಸ್ಥಳೀಯರು, ದೋಣಿ ಮಗುಚುವ ಸಂದರ್ಭದಲ್ಲಿ ದೋಣಿಯ ಏಟಿಗೆ ತೀವ್ರ ಗಾಯಗೊಂಡು ಈಜಲು ಸಾಧ್ಯವಾಗದೆ ನೀರುಪಾಲಾಗಿರಬೇಕೆಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.