ಮಂಗಳೂರು, ಜುಲೈ.29: ಸೋಮವಾರ ನಿಧನರಾದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ನಗರದ ವಿವಿಧ ಕಾಲೇಜುಗಳವತಿಯಿಂದ ಗೌರವ ನಮನಸಲ್ಲಿಸಲಾಯಿತು. ದೇಶಾದ್ಯಂತ ಒಂದು ವಾರ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವೇಳೆ ಶಿಕ್ಷಣ ಸಂಸ್ಥೆಗಳಲ್ಲಿ ಡಾ.ಅಬ್ದುಲ್ ಕಲಾಂರ ಕುರಿತ ಉಪನ್ಯಾಸ ಮಾಲೆಯನ್ನು ಏರ್ಪಡಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜೆ.ಆರ್.ಲೋಬೊ ಸಂಬಂಧಪಟ್ಟವರಲ್ಲಿ ವಿನಂತಿಸಿಕೊಂಡಿದ್ದಾರೆ.
ಅಬ್ದುಲ್ ಕಲಾಂ ದೇಶದ ಉನ್ನತ ಪಂಪರೆಯನ್ನು ಎತ್ತಿ ಹಿಡಿದ ಜಾತ್ಯತೀತವಾದಿ.ಅವರು ತೋರಿಸಿದ ದಾರಿಯಲ್ಲಿ ನಾವು ಮುಂದುವರಿಯಬೇಕಾಗಿದೆ. ಅಬ್ದುಲ್ ಕಲಾಂ ಈ ದೇಶದ ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಅವರ ಚಿಂತನೆ, ಸರಳ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಲೋಬೊ ಹೇಳಿದರು.
ನಗರದ ಬಲ್ಮಠ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸರಕಾರಿ ಪದವಿ ಕಾಲೇಜು ಬಲ್ಮಠ, ಸೈಂಟ್ ಆಗ್ನೇಸ್ ಕಾಲೇಜು,ಮಿಲಾಗ್ರಿಸ್ ಕಾಲೇಜು,ರಥಬೀದಿ ಸರಕಾರಿ ಕಾಲೇಜು, ಕಪಿತಾನಿಯೊ,ಬದ್ರಿಯಾ,ಬೊಕ್ಕಪಟ್ಣ ಕಾಲೇಜು,ಬಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಗಳು ಸಂಯುಕ್ತವಾಗಿ ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಜೆಸಿಂತ ವಿಜಯ ಆಲ್ಫ್ರೆಡ್, ಬಲ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೋಸೆಫ್, ಸ್ಥಳೀಯ ಮನಪಾ ಸದಸ್ಯರಾದ ಪ್ರಕಾಶ್ ಸಾಲ್ಯಾನ್, ಕೇಶವ ಮರೋಳಿ,ರತಿಕಲಾ,ಪ್ರಕಾಶ್ ಅಳಕೆ,ಕವಿತಾ ,ವಿನಯ ರಾಜ್, ಲ್ಯಾನ್ಸಿ ಲೋಟ್ ಪಿ,ವಿದ್ಯಾರ್ಥಿ ನಾಯಕ ನಾಗೇಂದ್ರ ಗೌಡ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.