ಮಂಗಳೂರು, ಜುಲೈ.29: ತಮ್ಮ ಸಾಧನೆ ಹಾಗೂ ಕೊಡುಗೆಗಳ ಮೂಲಕ ಜಗತ್ತಿನಲ್ಲೇ ವಿಶೇಷ ಛಾಪು ಮೂಡಿಸಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಜಾತ್ಯತೀತ ನಿಲುವಿನ ಅಪ್ರತಿಮ ಮಾನವತಾವಾದಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಿಧನದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಂತಾಪ ಸಭೆಯಲ್ಲಿ ಅವರು ಅಗಲಿದ ಡಾ. ಕಲಾಂಗೆ ನುಡಿ ನಮನ ಸಲ್ಲಿಸಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಾತನಾಡಿ, ತಂತ್ರಜ್ಞಾನ ವಿಜ್ಞಾನದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಾಜಿ ರಾಷ್ಟ್ರಪತಿ ಡಾ. ಕಲಾಂ, ಶ್ರಮ, ಜ್ಞಾನ, ಪ್ರಾಮಾಣಿಕತೆ ಮೂಲಕ ವಿಶ್ವದ ಪ್ರೀತಿ ಗಳಿಸಿದವರು ಎಂದರು. ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಜಗತ್ತು ಕೊಂಡಾಡುವ ಹಾಗೆ ವಿಜ್ಞಾನ ಕ್ಷೇತ್ರದಲ್ಲಿ ಡಾ. ಕಲಾಂ ಅವರು ಮಾಡಿರುವ ಸಾಧನೆ ಎಂದೆಂದಿಗೂ ಶಾಶ್ವತ. ಅವರ ಸೇವೆ, ಬದುಕು ಭಾರತದ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು.
ಶಾಸಕ ಜೆ.ಆರ್.ಲೋಬೋ, ವಿ.ಪರಿಷತ್ ಸದಸ್ಯ ಐವನ್ ಡಿಸೋಜ, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. ಸ್ಥಾಯಿ ಸಮಿತಿ ಪ್ರಮುಖರಾದ ಸಿ.ಕೆ. ಚಂದ್ರಕಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಜಿಪಂ ಸಿಇಓ ಶ್ರೀವಿದ್ಯಾ ಉಪಸ್ಥಿತರಿದ್ದರು.