ಕುಂದಾಪುರ: ಕಳೆದ ಮಂಗಳವಾರ ಶಂಕರನಾರಾಯಣ ಕಾಲೇಜಿನಿಂದ ತನ್ನ ಟಿ.ಸಿ. ಪಡೆದು ಯುವತಿಯೋರ್ವಳು ಮನೆಗೆ ತೆರಳುತ್ತಿರುವ ವೇಳೆ ಓಮ್ನಿ ಕಾರಿನಲ್ಲಿ ಬಂದ ಯಡಮೊಗೆ ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ಎಂಬಾತ ಆಕೆಯನ್ನು ಕಾರಿನಲ್ಲಿ ಕುಳ್ಳೀರಿಸಿಕೊಂಡು ಆಕೆಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು ಮೂರು ದಿನಗಳಾದರೂ ಆತನ ಬಂಧನವಾಗದ ಹಿನ್ನೆಲೆಯಲ್ಲಿ ಶೀಘ್ರ ಆತನ ಬಂಧನಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆ ಯಡಮೊಗೆ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
(ಆರೋಪಿ ಬಾಲಚಂದ್ರ)
ಕುಗ್ರಾಮವಾದ ಯಡಮೊಗೆಯ ರಸ್ತೆಗಳು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಗಮನವಹಿಸಿ ಅದರ ಸುವ್ಯವಸ್ಥೆಗೆ ಶ್ರಮಿಸಬೇಕಿದ್ದ ಜವನ್ದಾರಿಯುತ ಸ್ಥಾನದಲ್ಲಿರುವ ಗ್ರಾಮಪಂಚಾಯತ್ ಉಪಾಧ್ಯಕ್ಷ ಬಾಲಚಂದ್ರ ಈ ರೀತಿಯಾದ ಲೈಂಗಿಕ ದೌರ್ಜನ್ಯವೆಸಗಿರುವುದು ಹೇಯ ಕೃತ್ಯವಾಗಿದೆ. ಇಂತಹಾ ವ್ಯಕ್ತಿಯು ಈ ಪಂಚಾಯತಿಗೆ ಕಾಲಿಡಲು ಯೋಗ್ಯವಾದವನಲ್ಲ. ಯಾವುದೋ ಒತ್ತಡಕ್ಕಾಗಿಯೋ ಏನೋ ಎಂಬಂತೇ ಮೂರು ದಿನಗಳಾದರೂ ಆರೋಪಿ ಬಾಲಚಂದ್ರನ ಬಂಧನವಾಗಿಲ್ಲ, ಸಾಮಾನ್ಯ ಜನರೇನಾದರೂ ತಪ್ಪು ಮಾಡಿದರೇ ಇಲಾಖೆ ಸುಮ್ಮನಿರುತ್ತಿತ್ತೇ? ಎಂದು ಪ್ರಶ್ನಿಸಿದ ಅವರು ಇದೊಂದು ಮಲತಾಯಿ ಧೋರಣೆಯಾಗಿದೆ. ಹೀಗೆ ನಡೆದರೇ ಮನೆಯವರು ಹೆಣ್ಣುಮಕ್ಕಳನ್ನು ಹೊರಗೆ ಕಳಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಎರಡು ದಿನಗಳ ಗಡುವು ನೀಡುತ್ತಿದ್ದು ಆತನನ್ನು ಬಂಧಿಸದಿದ್ದಲ್ಲಿ ಗ್ರಾಮ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿಯೂ ಉಘ್ರ ಹೋರಾಟ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಕಛೇರಿ ಮತ್ತು ತಾಲೂಕು ಕಛೇರಿ ಮುತ್ತಿಗೆ ಹಾಕಿಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಈ ಸಂದರ್ಭ ಆಗ್ರಹಿಸಿದರು.
ಯುವತಿಯ ಮಾನಭಂಗಕ್ಕೆ ಯತ್ನಿಸಿದ ಗ್ರಾ.ಪಂ. ಉಪಾಧ್ಯಕ್ಷ ನಡೆದುಕೊಂಡಿರುವುದು ನಾಚಿಕೆಗೇಡಿನ ಕೃತ್ಯವಾಗಿದ್ದು ಇದು ಗ್ರಾಮಕ್ಕೆ ಕಳಂಕವಾಗಿದೆ. ಗ್ರಾಮೀಣ ಪ್ರದೇಶವಾದ ಯಡಮೊಗೆಯಲ್ಲಿ ಮಹಿಳೆಯರು ಮತ್ತು ಶಾಲಾಕಾಲೇಜು ವಿದ್ಯಾರ್ಥಿನಿಯರು ಏಕಾಂಗಿಯಾಗಿ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಕರಣದ ಬಳಿಕ ಜನರು ಭಯಭೀತರಾಗಿದ್ದೇವೆ. ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಗ್ರಾ.ಪಂ.ನಲ್ಲಿದ್ದರೇ ಸಾರ್ವಜನಿಕರು ಕಛೇರಿಗೆ ಬರುವುದೇ ದುಸ್ತರವಾಗಲಿದ್ದು ಈ ವ್ಯಕ್ತಿಯನ್ನು ಕೂಡಲೇ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಹಾಗೂ ಈತನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಊರಿನ ಗ್ರಾಮಸ್ಥರು ಆಗ್ರಹಿಸಿದರು.
ಇದೇ ಸಂದರ್ಭ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ ಮೆಂಡನ್, ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ತಾ.ಪಂ. ಸದಸ್ಯೆ ಹೇಮಲತಾ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ, ಮುಖಂಡ ದೀಪಕಕುಮಾರ್ ಶೆಟ್ಟಿ, ಊರಿನ ಗ್ರಾಮಸ್ಥರು ಮಾತನಾಡಿ ಆರೋಪಿ ಬಂಧನಕ್ಕೆ ಆಗ್ರಹಿಸಿದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಆರೋಪಿ ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರನ ಪ್ರತಿಕೃತಿ ಧಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕಿನ ಅತೀ ಕುಗ್ರಾಮವಾದ ಯಡಮೊಗೆ ಗ್ರಾಮಕ್ಕೆ ಈ ಬಾರೀ ನೂತನವಾಗಿ ಪಂಚಾಯತ್ ವ್ಯವಸ್ಥೆ ಬಂದಿದ್ದು ೬ ಜನ ಸದಸ್ಯರ ಪೈಕಿ ಈತನು ಕಾಂಗ್ರೆಸ್ ಬೆಂಬಲಿತ ಸದಸ್ಯನಾಗಿ ಬಳಿಕ ಉಪಾಧ್ಯಕ್ಷನಾಗಿದ್ದ.