ಮಂಗಳೂರು, ಜುಲೈ.24: ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯೊಳಗೆ ಮಾತ್ರ ಬಳಕೆಗಾಗಿ ಮರಳು ತೆಗೆಯಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅನುಮತಿ ನೀಡಿದೆ.
ಮಂಗಳವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ, ಮರಳು ತೆಗೆಯಲು ವಿರೋಧಿಸಿ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನು ಹಾಗೂ ಮರಳು ನಿಷೇಧದಿಂದ ಜಿಲ್ಲೆಯಲ್ಲಿ ಕಾಮಗಾರಿಗಳಿಗೆ, ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗಿರುವುದನ್ನು ಪರಿಗಣಿಸಿ, ಆ.31ರ ವರೆಗೆ ತೆಗೆಯಲಾಗುವ ಮರಳನ್ನು ಜಿಲ್ಲೆಯ ಆಂತರಿಕ ಬಳಕೆಗೆ ಬಳಸಲು ಹಾಗೂ ಅಂತರ್ ಜಿಲ್ಲಾ ಮರಳು ಸಾಗಟವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ.
ಮರಳು ತೆಗೆಯಲು ಅನುಮತಿ ನೀಡಲಾಗಿದ್ದರೂ, ಕೆಲವೊಂದು ನಿರ್ಬಂಧ ವಿಧಿಸಲಾಗಿದೆ. ಮಾನವ ಶ್ರಮದಿಂದ ಮಾತ್ರ ಮರಳುಗಾರಿಕೆ ಮಾಡಬೇಕು. ರಜಾದಿನಗಳಲ್ಲಿ ಮರಳು ಎತ್ತುವಂತಿಲ್ಲ. ಇತರೆ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಮರಳು ತೆಗೆಯಬಹುದು. ಪ್ರತೀ ಎಕರೆಗೆ ತಿಂಗಳಿಗೆ 10 ಪರವಾನಿಗೆ ಮಾತ್ರ ನೀಡಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.