ಮಂಗಳೂರು,ಜುಲೈ.22 : ಸಾರ್ವಜನಿಕ ಶಿಕ್ಷಣ ಸೇವೆಯಲ್ಲಿ ಹಿರಿಯರ ಅಂದಿನ ಆಪೇಕ್ಷೆ ನಿರಂತರವಾಗಿ ಇಂದಿಗೂ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಾ ಇರುವಂತಹ ಆಡಳಿತ ವರ್ಗ, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಮತ್ತು ಊರಿನ ಗಣ್ಯರ, ದಾನಿಗಳ, ಸೇವಾ ಕೈಂಕರ್ಯದ ಬದ್ಧತೆಯನ್ನು ಸ್ಪಷ್ಟೀಕರಿಸುವ ಸಲುವಾಗಿ ವಿದ್ಯಾಸಂಸ್ಥೆಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಶತಮಾನ ಕಂಡ (ಪ್ರಾಥಮಿಕ ಮತ್ತು ಪ್ರೌಢ) ವಿದ್ಯಾ ಸಂಸ್ಥೆಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಬುಧವಾರ ನಗರದ ಉರ್ವಸ್ಟೋರ್, ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಕನ್ನಡ ನಾಡು ನುಡಿಯ ಸೇವಾ ಕೈಂಕರ್ಯದ ವಿಶೇಷ ಸಾಧನೆಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂಭ್ರಮದಲ್ಲಿ ಶತಮಾನವನ್ನು ಕಂಡ ವಿದ್ಯಾಸಂಸ್ಥೆಗಳನ್ನು ಗುರುತಿಸಿ ಖಂಡಿತವಾಗಿಯೂ ಗೌರವಿಸಲೇ ಬೇಕಾದದು ನಮ್ಮ ಧರ್ಮ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ -86 ಪುತ್ತೂರಿನಲ್ಲಿ-9, ಸುಳ್ಯ- 9, ಬಂಟ್ವಾಳ-29 ಬೆಳ್ತಂಗಡಿ-9 ಹೀಗೆ ಒಟ್ಟು 142 ವಿದ್ಯಾಸಂಸ್ಥೆಗಳನ್ನು ಗೌರವಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಹಾಗೂ ಚಿಂತಕರಾದ ಡಾ. ಅಮೃತ ಸೋಮೇಶ್ವರ ಅವರು ವಿದ್ಯಾ ಸಂಸ್ಥೆಗಳನ್ನು ಗೌರವಿಸಿ ಸಂದೇಶವನ್ನು ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದು , ಅಭ್ಯಾಗತರಾಗಿ ದ.ಕ. ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪಿ.ಐ. ಶ್ರೀವಿದ್ಯಾ ಭಾ.ಆ.ಸೇ. ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ)ಯ ಉಪನಿರ್ದೇಶಕರಾದ ಶ್ರೀ ವಾಲ್ಟರ್ಡಿಮೆಲ್ಲೋ, ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳದಲ್ಲಿ14, ಬೆಳ್ತಂಗಡಿಯಲ್ಲಿ4, ಪುತ್ತೂರಿನಲ್ಲಿ 6 ಕನ್ನಡ ಮಾಧ್ಯಮ ಶಾಲೆಗಳು ಶೇ. 100 ಫಲಿತಾಂಶ ಪಡೆದಿರುವ(2014-15ನೇ ಸಾಲಿನಲ್ಲಿ) ಮಂಗಳೂರು ತಾಲೂಕಿನ 7 ಕನ್ನಡ ಮಾಧ್ಯಮ ಶಾಲೆಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.