ಕುಂದಾಪುರ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ಆರಂಭಿಸಿದ ಬಳಿಕ ಅವರ ಅತೀ ದೊಡ್ಡ ಕನಸಾಗಿದ್ದ ಸ್ವಚ್ಚಭಾರತ ಎಂಬ ಮಹದಾಸೆಯನ್ನೇ ಪ್ರೇರಣೆಯಾಗಿಸಿಕೊಂದ ಉತ್ತರಪ್ರದೇಶದ ಯುವಕನೋರ್ವ ಸೈಕಲ್ ಏರಿ ಈ ಸ್ವಚ್ಚಭಾರತ್ ಕನಸನ್ನು ದೇಶಕ್ಕೆ ಪ್ರಚಾರ ಮಾಡಲು ಹೊರಟಿದ್ದಾನೆ. ಸೈಕಲ್ ಏರಿ ದೇಶ ಪರ್ಯಟನೆಗೆ ಹೊರಟ ಈತ ಸ್ವಚ್ಚಭಾರತ ಪರಿಕಲ್ಪನೆಯನ್ನು ಸಮಾಜಕ್ಕೆ ತಿಳಿಸುತ್ತಿದ್ದಾನೆ.
ಈತನ ಹೆಸರು ಅಭಿಷೇಕ್ ಕುಮಾರ್ ಶರ್ಮಾ (28). ಉತ್ತರಪ್ರದೇಶದ ಪತ್ತೆಘರ್ ಮೂಲದವನಾಗಿರುವ ಈತ ಓದಿದ್ದು ಪರಿಸರ ವಿಜ್ಞಾನದಲ್ಲಿ ಎಂ.ಎಸ್ಸಿ, ಎಂ.ಫಿಲ್, ಪಿ.ಜಿ.ಸಿ.ಡಬ್ಲ್ಯೂ.ಎಂ. ವ್ಯಾಸಂಗ ಮಾಡಿದ್ದಾನೆ.
ಉತ್ತಮ ಕುಟುಂಬದಿಂದ ಬಂದ ಈತ ಉನ್ನತ ವ್ಯಾಸಂಗ ಮಾಡಿದರೂ ಕೂಡ ಪ್ರಕೃತಿ ಹಾಗೂ ಪರಿಸರ ಸ್ವಚ್ಚತೆ ಬಗ್ಗೆ ಈತನಿಗೆ ಎಲ್ಲಿಲ್ಲದ ಕಾಳಜಿ. ಮೋದಿಯವರ ಸ್ವಚ್ಚಭಾರತ ಪರಿಕಲ್ಪನೆಯ ಬಗ್ಗೆ ತಿಳಿದ ಈತ ಅದರಿಂದ ಪ್ರೇರಣೆಗೊಂಡು ಕಳೆದ ವರ್ಷ (2014) ನವೆಂಬರ್ 10 ರಂದು ತನ್ನ ಹುಟ್ಟೂರು ಪತ್ತೆಘರ್ನಿಂದ ಆರಂಭಿಸಿದ ಇವರ ಸೈಕಲ್ ಯಾತ್ರೆ ಈಗಗಾಲೇ 14 ರಾಜ್ಯ, 203 ಜಿಲ್ಲೆ ಸೇರಿದಂತೆ 16 ಸಾವಿರ ಗ್ರಾಮಗಳಲ್ಲಿ ಸಂಚರಿಸಿದೆ. ಉತ್ತರಖಾಂಡ್, ಛಂಡಿಗಡ್, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಜಮ್ಮುಖಾಶ್ಮೀರ್, ಮಹರಾಷ್ಟ್ರ, ಗೋವಾ ಮೊದಲಾದೆಡೆ ಸುತ್ತಿ ಈಗ ಕರ್ನಾಟಕಕ್ಕೆ ಈತನ ಸೈಕಲ್ ಯಾತ್ರೆ ಬಂದಿದೆ. ಈವರೆಗೂ ತನ್ನ ಸೈಕಲ್ ಯಾತ್ರೆಯಲ್ಲಿ ಮೂರು ಸೈಕಲ್ ಉಪಯೋಗಿಸಿದ್ದು ಹಿಮಾಚಲಪ್ರದೇಶ, ದೆಲ್ಲಿಯಲ್ಲಿ ಒಂದೊಂದು ಸೈಕಲ್ ಬಳಸಿದರೇ ಕರ್ನಾಟಕದಲ್ಲಿ ಮೂರನೇ ಸೈಕಲ್ ಓಡಿಸುತ್ತಿದ್ದಾನೆ.
ಸ್ಚಚ್ಚಭಾರತ್ ಬಗ್ಗೆ ಪ್ರಚಾರ: ತನ್ನ ಹುಟ್ಟೂರಿನಿಂದ ಸೈಕಲ್ ಏರಿ ಸ್ವಚ್ಚಭಾರತ ಪರಿಕಲ್ಪನೆ ಬಗ್ಗೆ ಪ್ರಚಾರ, ಪರಿಸರ ಉಳಿಸಿ-ಆರೋಗ್ಯ ಬೆಳೆಸಿ ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಪ್ರಚಾರಕ್ಕೆ ಹೊರಟ ಅಭಿಷೇಕ್ ತಾನೂ ಹೋದಲೆಲ್ಲಾ ಜನರ ಮನಸ್ಸನ್ನು ತನ್ನತ್ತ ಸೆಳೆದುಕೊಂಡು ತನ್ನ ಪರಿಕಲ್ಪನೆಯನ್ನು ಅವರಿಗೆ ತಲುಪಿಸುವಲ್ಲಿ ತನ್ನ ಅವಿರತ ಶ್ರಮ ವಹಿಸುತ್ತಿದ್ದಾನೆ. ಈಗಾಗಲೇ 2478 ಶಿಕ್ಷಕರು-ಪ್ರಾಧ್ಯಾಪಕರು ಹಾಗೂ 11 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ವಚ್ಚಭಾರತದ ಕನಸಿನ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಕರ್ನಾಟಕಕ್ಕೆ ಇತ್ತೀಚೆಗೆ ಆಗಮಿಸಿದ ಈತನ ಸೈಕಲ್ ಪ್ರಯಾಣ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬುಧವಾರ ಆಗಮಿಸಿತು. ಕುಂದಾಪುರದಲ್ಲಿ ವಿವಿಧ ಶಾಲೆಯ ಮಕ್ಕಳ ಜೊತೆ ಸಮಾಲೋಚನೆ ನಡೆಸಿದ ಅಭಿಶೇಕ್ ಅವರಿಗೆ ಸ್ವಚ್ಚಭಾರತ ಕಲ್ಪನೆ ಬಗ್ಗೆ ಮಾಹಿತಿ ನೀಡಿದರು.
ಮೋದಿ ಶ್ಲಾಘನೆ: ಅಭಿಷೇಕ್ ಕುಮಾರ್ ಅವರ ಈ ಸೈಕಲ್ ಯಾತ್ರೆ ಹಾಗೂ ಸ್ವಚ್ಚಭಾರತದ ಪ್ರಚಾರ ಕಾರ್ಯವನ್ನು ಮೆಚ್ಚಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾರ್ಚ್ನಲ್ಲಿ ಇವರನ್ನು ಕಛೇರಿಗೆ ಆಹ್ವಾನಿಸಿ ಅಭಿಷೇಕ್ ಅವರನ್ನು ಶ್ಲಾಘಿಸಿದ್ದಲ್ಲದೇ ಈತನ ಸೈಕಲ್ ಯಾತ್ರೆಗೆ ಒಂದು ಸೈಕಲನ್ನು ಕೂಡ ನೀಡಿದ್ದಾರೆ. ಕರ್ನಾಟಕದಲ್ಲಿ ಈತ ಪ್ರಯಾಣಿಸುತ್ತಿರುವ ಸೈಕಲ್ ಮೋದಿ ಅವರು ನೀಡಿದ ಸೈಕಲ್ ಆಗಿದೆ.
ತನ ಸ್ವಂತ ಖರ್ಚಿನಲ್ಲಿ ಸೈಕಲ್ ಏರಿ ದೇಶಪರ್ಯಟನೆ ಹೊರಟು ಜನರಿಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಕೆಲವೆಡೆ ಜನರು ನೀಡುವ ಆರ್ಥಿಕ ಸಹಾಕಾರವನ್ನು ಈತ ಪಡೆಯುತ್ತಿದ್ದಾನೆ. ಒಟ್ಟಿನಲ್ಲಿ ಈತನ ಈ ಕಾರ್ಯವೈಖರಿ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ.
ವರದಿ,ಚಿತ್ರ- ಯೋಗೀಶ್ ಕುಂಭಾಸಿ