ಕುಂದಾಪುರ: ಇಲ್ಲಿನ ಕೃಷಿಕರು ಮಳೆಗಾಲ ಬಂತೆಂದರೇ ತುಂಬಾ ಭಯಪಡ್ತಾರೇ.. ಯಾಕೆ ಗೊತ್ತಾ..ಎಲ್ಲಿ ತಮ್ಮ ಗದ್ದೆಗೆ ಹಾಕಿದ ಬಿತ್ತನೆ ಬೀಜ ಹಾಳಾಗುತ್ತೋ, ನಾಟಿ ಮಾಡಿದ ಪಸಲು ನಾಶವಾಗುತ್ತೋ ಅನ್ನೋ ಭಯದ ನಡುವೆಯೇ ಬೇಸಾಯ ಆರಂಭಿಸುವ ಈ ರೈತರು ಮಳೆಗಾಲದಲ್ಲಿ ಅಂತರಗಂಗೆ ಕಾಟದಿಂದ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಅನಿವಾರ್ಯತೆ, ತಮ್ಮ ಕೃಷಿಭೂಮಿಯ ಫಸಲಿಗೆ ಮಾರಿಯಾದ ಅಂತರಗಂಗೆಯನ್ನು ಕೃಷಿಭೂಮಿಯಿಂದ ವಿಲೇವಾರಿ ಮಾಡುವುದರಲ್ಲಿ ಇವರು ದಿನನಿತ್ಯ ಹೈರಾಣಾಗುತ್ತಾರೆ. ಅಷ್ಟಕ್ಕೂ ಏನಿದು ಅಂತರಗಂಗೆ ಸಮಸ್ಯೆ ಅನ್ನೋದರ ಕುರಿತು ಒಂದು ವರದಿ ಇಲ್ಲಿದೆ.
ತಾಲೂಕಿನ ತೆಕ್ಕಟ್ಟೆ ಹಾಗೂ ಕೋಟ ಭಾಗದ ಹಲವು ಗ್ರಾಮಗಳಲ್ಲಿ ಅಂತರಗಂಗೆಯೆಂಬ ಪಾಚಿಯಂಥಹ ವಸ್ತುವಿನ ಸಮಸ್ಯೆ ಪ್ರತಿವರ್ಷವೂ ಬಿಗುಡಾಯಿಸುತ್ತಲೇ ಇದೆ. ವಕ್ವಾಡಿ, ಹಲ್ತೂರು, ಮಲ್ಯಾಡಿ, ಕೆದೂರು, ಗಿಳಿಯಾರು, ಕೊಯ್ಕೂರು ಹಾಗೂ ಬನ್ನಾಡಿ ಮೊದಲಾದ ಹಲವು ಪ್ರದೇಶಗಳು ಪ್ರತಿವರ್ಷವೂ ಕೃಷಿಕರನ್ನು ಅಂತರಗಂಗೆ ಸಮಸ್ಯೆಯಿಂದ ಹೈರಾಣಾಗಿಸುತ್ತದೆ. ತೆಕ್ಕಟ್ಟೆ ಸಮೀಪದ ಉಳ್ತೂರು, ಮಲ್ಯಾಡಿ ಹಾಗೂ ಕೋಟ ಸಮೀಪದ ಬನ್ನಾಡಿ ಭಾಗದ ಬೇಸಾಯಗಾರರಂತೂ ಅಂತರಗಂಗೆ ಕಾಟಕ್ಕೆ ಬೆಸ್ತುಬಿದ್ದಿದ್ದಾರೆ. ಅಷ್ಟಕ್ಕೂ ಮಳೆಗಾದಲ್ಲಿ ಮೇಲ್ಪ್ರದೇಶದಿಂದ ಹರಿದು ಬರುವ ನೀರಿನೊಂದಿಗೆ ಸೇರಿಕೊಂದು ಬರುವ ಹಸಿರು ಬಣ್ಣದ ಗಿಡದ ರೀತಿಯಿರುವ ಪಾಚಿಯಂತಹ ವಸ್ತುವೇ ಅಂತರಗಂಗೆ. ಮೇಲ್ಭಾಗದಲ್ಲಿ ಹಸಿರು ಎಲೆಗಳು ಹಾಗೂ ಕೆಳಭಾಗದಲ್ಲಿ ನಾರಿನಂತಹ ವಸ್ತುವನ್ನು ಹೊಂದಿರುವ ಈ ಅಂತರಗಂಗೆ ಎಲ್ಲಿ ಹುಟ್ಟುವುದೆಂಬುದಕ್ಕೂ ಯಾವುದೇ ಕುರುಹುವಿಲ್ಲ ಹಾಗೆಯೇ ಅದರ ನಿರ್ಮೂಲನೆ ಹೇಗೆ ಎಂಬುದಕ್ಕೆ ಸ್ಪಷ್ಟ ಪರಿಹಾರೋಪಾಯವೂ ಇಲ್ಲದೇ ಪ್ರತಿ ವರ್ಷ ರೈತರು ಭಯದಲ್ಲಿಯೇ ಬದುಕುವಂತಾಗಿದೆ.
ಮಳೆಗಾಲ ಬಂತೆಂದರೇ ಮೇಲ್ಪ್ರದೇಶದಿಂದ ಹರಿದು ಬರುವ ನೀರಿನೊಂದಿಗೆ ಸೇರಿ ಹರಿದು ಬರುವ ಈ ಹಸಿರು ಬಣ್ಣದ ಅಂತರಗಂಗೆ ಕೃಷಿಭೂಮಿಗೆ ನುಗ್ಗುವುದಲ್ಲದೇ ಅಲ್ಲಿಯೇ ಶೇಖರಗೊಂಡು ನಾಟಿ ಮಾಡಿದ ಫಸಲಿಗೆ ಮಾರಕವಾಗುತ್ತದೆ. ನೀರಿನಲ್ಲಿದ್ದರೇ ಅಂತರಗಂಗೆ ಬಲಿಷ್ಟವಾಗಿದ್ದು ನಾಟಿ ಮಾಡಿದ ಪಸಲನ್ನು ನಾಶಮಾಡುವಷ್ಟು ಶಕ್ತಿ ಹೊಂದಿರುತ್ತದೆ. ಅಲ್ಲದೇ ಬೇಸಿಗೆಯಲ್ಲಿ ಸುಟ್ಟು ಹೋದಂತೆ ಬೂದು ಬಣ್ಣದಲ್ಲಿರುವ ಈ ಅಂತರಗಂಗೆಗಳು ಮಳೆಗಾಲ ಬಂತೆಂದರೇ ಅದ್ಯೇಗೋ ರಕ್ತಬೀಜಾಸುರರಂತೆ ಚಿಗುರಿ ಕೃಷಿಗೆ ಮಾರಕವಾಗುತ್ತದೆ.
ಕಳೆದ ವಾರದಲ್ಲಿ ಬುಧವಾರ ಹಾಗೂ ಗುರುವಾರದಂದು ಸುರಿದ ಬಾರೀ ಮಳೆ ಪರಿಣಾಮ ಶುಕ್ರವಾರ ಬೆಳಿಗ್ಗೆನಿಂದ ಆರಂಭಗೊಂಡು ಇಂದಿನವರೆಗೂ ತೆಕ್ಕಟ್ಟೆ ಹಾಗೂ ಕೋಟ ಭಾಗದ ಹತ್ತಾರು ಗ್ರಾಮಗಳಲ್ಲಿ ಅಂತರಗಂಗೆ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಅದಕ್ಕಾಗಿಯೇ ಮಲ್ಯಾಡಿಯ ಕೃಷಿಕ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಬೆಳ್ಳಂಬೆಳಿಗ್ಗೆ ತಮ್ಮ ಗದ್ದೆಗಿಳಿದು ಅಂತರಗಂಗೆಯನ್ನು ವಿಲೇವಾರಿ ಮಾಡುತ್ತಿದ್ದು ಅವರದೇ ಅನುಭವದಲ್ಲಿ ಈ ಅಂತರಗಂಗೆ ಬಗ್ಗೆ ವಿವರಣೆ ನೀಡುವುದು ಹೀಗೆ….ಕೃಷಿಭೂಮಿಗಳಲ್ಲಿ ಬಂದು ಶೇಖರಗೊಂಡ ಅಂತರಗಂಗೆ ತೆರವು ಮಾಡಿ ಕೃಷಿಭೂಮಿ ಹಾಗೂ ನಾಟಿ ಮಾಡಿದ ಫಸಲು ಉಳಿಸಿಕೊಳ್ಳುವುದೇ ಕೃಷಿಕರಿಗೆ ದೊಡ್ಡ ಸವಾಲಾಗಿದೆ.
ಅಲ್ಲದೇ ಉಳ್ತೂರು ಮೊದಲಾದೆಡೆ ನೀರು ಹರಿಯುವ ಪ್ರದೇಶದಲ್ಲಿ ಅಂತರಗಂಗೆ ಲೋಡುಗಟ್ಟಲೇ ಶೇಖರಗೊಂಡಿದ್ದು ಕಾಲುವೆಯಲ್ಲಿ ನೀರು ಹರಿಯದೇ ಕೃಷಿಭೂಮಿಯಲ್ಲಿ ನೀರು ನಿಂತು ಹೊಳೆಯಂತಾಗಿದೆ. ಇದರಿಂದಾಗಿ ಸ್ಥಳಿಯರು ಒಗ್ಗೂಡಿ ಜೆಸಿಬಿ ಮೂಲಕ ಅಂತರಗಂಗೆಯನ್ನು ವಿಲೆವಾರಿ ಮಾಡಿ ನೀರು ಹರಿಯುವಂತೆ ಸುವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ರೈತರ ಈ ವರ್ಷಾನುವರ್ಷದ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.
ವರದಿ,ಚಿತ್ರ- ಯೋಗೀಶ್ ಕುಂಭಾಸಿ















