ಮಂಗಳೂರು,ಜುಲೈ.10 : ವಿದ್ಯಾರ್ಥಿಗಳು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನೈತಿಕತೆಯನ್ನು ಅಳವಡಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಒರಾಕಲ್ ಕ್ಯಾಲಿಫೋರ್ನಿಯಾ ಕಂಪೆನಿಯ ವ್ಯವಹಾರ ಸಲಹಾ ನಿರ್ದೇಶಕ ಸಂಜಯ ಕಿಣಿ ಅವರು ನಗರದ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನ 2015–16ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಜೀವನದಲ್ಲಿ ದೊಡ್ಡ ದೊಡ್ಡ ಕೆಲಸಕ್ಕೆ ಕೈ ಹಾಕಿ ಅದರಲ್ಲಿ ಅನುಭವ ಮತ್ತು ಯಶಸ್ಸು ಸಿಗಲಿದೆ. ನಿಮ್ಮ ಸಾಧನೆಯೇ ನಿಮ್ಮ ಮಕ್ಕಳಿಗೆ ಆದರ್ಶವಾಗಬೇಕು. ಅಂತಹ ಸಾಧನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಕ್ಯಾಲಿಫೋರ್ನಿಯಾದ ಇಂಟ್ಯುಟ್ ಕಂಪೆನಿಯ ಹಿರಿಯ ಉತ್ಪನ್ನ ವ್ಯವಸ್ಥಾಪಕಿ, ಎಸ್ಡಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿ ಗಾಯತ್ರಿ ಕಿಣಿ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸವಾಲುಗಳಿಗಾಗಿ ಕಾದು ಕುಳಿತಿರಬೇಕೇ ಹೊರತು, ಕೆಲಸಕ್ಕಾಗಿ ಅಲ್ಲ. ಜೀವನದಲ್ಲಿ ಸಿಕ್ಕ ಕೆಲಸದಲ್ಲಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಆಗ ಯಶಸ್ಸು ನಿಮ್ಮ ಹಿಂದೆ ಬರಲಿದೆ. ವಿದ್ಯಾರ್ಥಿಗಳಲ್ಲಿ ಯೋಗ್ಯತೆ ಮತ್ತು ಸಾಧನೆ ಮಾಡಬೇಕು ಎಂಬ ಛಲವಿದ್ದರೆ ಯಾವುದೇ ಕೆಲಸವನ್ನು ಸಲೀಸಾಗಿ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯೆ ಅರುಣಾ ಪಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಉಪನ್ಯಾಸಕಿ ವೈ. ಶ್ವೇತಾ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅದಿತಿ, ರಜತ್, ಸಿಮೋನಾ ಡೆನಿಸ್ ಫರ್ನಾಂಡಿಸ್, ಕೃತಿ ನಹಾತಾ, ಎಂ. ಶ್ರಾವ್ಯಾ, ಅಮ್ರಾ ಅರಬಿ ಮತ್ತಿತರರು ಉಪಸ್ಥಿತರಿದ್ದರು.