ಟೊರಾಂಟೊ(ಕೆನಡ) : ರಾಷ್ಟ್ರ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅವರ ಧ್ಯೇಯ ಉದಾತ್ತವಾದುದು ಹಾಗೂ ಅವರ ಮಾನವೀಯ ಮೌಲ್ಯ ಅತ್ಯಂತ ಶ್ರೇಷ್ಠವಾದುದು ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷ ಡಾ.ಎಲ್. ಹನುಮಂತಯ್ಯ ಹೇಳಿದರು.
ಕೆನಡಾದ ಕನ್ನಡ ಕಸ್ತೂರಿ ರೇಡಿಯೊ ಹಾಗೂ ಮಂಗಳೂರಿನ ಹೃದಯವಾಹಿನಿ ಬಳಗ ಟೊರಾಂಟೊದ ಗ್ರ್ಯಾಂಡ್ ವಿಕ್ಟೋರಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು ಕನ್ನಡಿಗರು ಶಾಂತಿಪ್ರಿಯರು ಹಾಗೂ ಸಹಬಾಳ್ವೆಗೆ ಹೆಸರಾದವರು ಎಂದರು.
ಯಾವುದೇ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡದೇ ಹೋದರೆ ಅಂತಹ ಭಾಷೆ ಜನರಿಂದ ದೂರವಾಗುವ ಸಂಭವ ಇರುತ್ತದೆ ಎಂದು ಎಚ್ಚರಿಸಿದರು. ಭಾರತದ ಕೆಲವೇ ಪ್ರಾಚೀನ ಭಾಷೆಗಳಲ್ಲಿ ಕನ್ನಡವು ಒಂದು, ಅಮೂಲ್ಯವಾದ ಸಾಹಿತ್ಯದಿಂದ ಶ್ರೀಮಂತವಾಗಿರುವಂತಹದ್ದು, ಕನ್ನಡಿಗರು ವಿದೇಶಗಳಲ್ಲಿ ಸಹ ಅಲ್ಲಿನ ಸ್ಥಳೀಯ ಭಾಷೆ ಕಲಿತು ಜೊತೆಗೆ ಕನ್ನಡ ಪ್ರೇಮ ಮೆರೆಯುತ್ತಿರುವುದು ಶ್ಲಾಘನೀಯ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಭಾಷೆ, ಸಂಸ್ಕೃತಿ, ಪರಂಪರೆ ಬೆಳೆಸಲು ಕರ್ನಾಟಕ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಅನಿವಾಸಿ ಭಾರತೀಯರ ಭಾಷಾ ಪ್ರೇಮ ಮೆಚ್ಚುವಂತಹದ್ದು ಸಮ್ಮೇಳನದ ಯಶಸ್ಸಿಗಾಗಿ ಸಂಘಟಕರಾದ ಬಿ.ವಿ. ನಾಗರಾಜು ಹಾಗೂ ಕೆ.ಪಿ. ಮಂಜುನಾಥ್ ಸಾಗರ್ ಅವರನ್ನು ಅಭಿನಂದಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವೀಡಿಯೋ ಸಂದೇಶವನ್ನು ಸಮಾರಂಭದಲ್ಲಿ ತೆರೆಯ ಮೇಲೆ ಬಿತ್ತರಿಸಲಾಯಿತು. ಸಾಗರದಾಚೆಗಿನ ಕನ್ನಡ-ಉಳಿಸಿ ಬೆಳೆಸುವ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಸ್ಥಾಪಕ ಅಧ್ಯಕ್ಷ ಮತ್ತು ಹೃದಯವಾಹಿನಿ ಬಳಗದ ಕೆ.ಪಿ. ಮಂಜುನಾಥಸಾಗರ್ ಅವರು ಹೆಚ್ಚು ಖ್ಯಾತಿ ಪಡೆಯದೆ ಎಲೆ ಮರೆಯ ಕಾಯಿಯಂತೆ ಇರುವ ಕಲಾವಿದರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಇದುವರೆಗೆ ವಿವಿಧ ದೇಶಗಳಲ್ಲಿ ಹತ್ತು ಸಮ್ಮೇಳನಗಳನ್ನು ನಡೆಸಿದ್ದು ಇದು ಹನ್ನೊಂದನೆಯದು. ಸುಮಾರು 20 ಸಾವಿರ ಕಿ.ಮೀ. ದೂರದ ದೇಶದಲ್ಲಿ ಕರ್ನಾಟಕದಿಂದ 40 ಜನರ ಸಾಂಸ್ಕೃತಿಕ ನಿಯೋಗವನ್ನು ಕರೆತಂದು ಸಮ್ಮೇಳನವನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿತ್ತು. ಆದರೂ ಯಶಸ್ಸು ದೊರೆತಿರುವುದಕ್ಕೆ ಸಂತಸವಾಗಿದೆ ಎಂದರು.
ಕೆನಡಾದ ಸ್ಥಳೀಯ ಸರ್ಕಾರದ ರಾಜ್ಯ ಸಚಿವೆ ದೀಪಿಕಾ ದಾಮೆರ್ಲಾ, ಸೆನೆಟರ್ ಆಶಾ ಸೇಟ್, ಸಂಸದೀಯ ಕಾರ್ಯದರ್ಶಿ ಡಾ. ಪರಮ್ ಗಿಲ್, ಭಾರತದ ಕೌನ್ಸುಲ್ ಜನರಲ್ ಅಖಿಲೇಶ್ ಮಿಶ್ರ ಅವರು ಮಾತನಾಡಿದರು. ಕೆನಡಾದ ಸಂಸದ ಬಾಲಘೋಷಲ್ ಹಾಗೂ ಕನ್ನಡ ಚಿತ್ರ ನಟ ದರ್ಶನ್ ತೂಗುದೀಪ ಮಾತನಾಡಿದರು. ಸ್ವಾಗತ ಭಾಷಣ ಮಾಡಿದ ಬಿ.ವಿ. ನಾಗ್ ಸಂಸ್ಥೆಯ ಬಿ.ವಿ. ನಾಗರಾಜು ಅವರು ಕನ್ನಡ ಕಸ್ತೂರಿ ರೇಡಿಯೋದ ದಶಮಾನೋತ್ಸವದ ಸಂದರ್ಭದಲ್ಲಿ ಈ ವಿಶ್ವಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ತಂಡದವರು ಭಾವಗೀತೆಗಳನ್ನು ಹಾಡಿ ರಂಜಿಸಿದರು. ಮುಂಬೈನ ಅರುಣೋದಯ ಕಲಾನಿಕೇತನದ ಸದಸ್ಯರು ನೃತ್ಯ ಪ್ರದರ್ಶಿಸಿದರು. ದಿವಾಕರ್ ರುದ್ರ ಪಟ್ಣ ತಂಡದ ವೀರಗಾಸೆ ಸೇರಿದಂತೆ ಸ್ಥಳೀಯ ಕಲಾವಿದರು ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕೆನಡಾದ ಕನ್ನಡಿಗರ ಮಕ್ಕಳಿಂದ ಫ್ಯಾಷನ್ ಶೋ ನಡೆಯಿತು.
ಸ್ಥಳೀಯ ಕಲಾವಿದೆ ಕನ್ನಡತಿ ಶ್ರೀಮತಿ ಲತಾ ಪಾದ ಮತ್ತು 70 ವರ್ಷ ಮೇಲ್ಪಟ್ಟ, ಕೆನಡಾ ಕನ್ನಡ ಸಂಘ ಹಿಂದಿನ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಾರೋಪ; ಬಂಡವಾಳ ಹೂಡಿ : ಅನಿವಾಸಿ ಕನ್ನಡಿಗರಿಗೆ ಕರೆ
ಟೊರಾಂಟೊ(ಕೆನಡ) ಜೂನ್ 28 : ರಾಷ್ಟ್ರ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ. ಅನಿವಾಸಿ ಕನ್ನಡಿಗರು ಕರ್ನಾಟಕದಲ್ಲಿ ಬಂಡವಾಳ ತೊಡಗಿಸಿ ಅಲ್ಲಿನ ಯೋಜನೆಗಳ ಯಶಸ್ವಿ ಜಾರಿಗೆ ಅಗತ್ಯ ಸಹಕಾರ ನೀಡಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಇಲ್ಲಿ ಕರೆ ನೀಡಿದರು.
11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ ಎಂದರು.
ಕರ್ನಾಟಕದ ಸರ್ಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಅನಿವಾಸಿ ಕನ್ನಡಿಗರು ಒಂದು ಕಡೆ ಸೇರುವ ಬಗ್ಗೆ ಅನುಮಾನವಿತ್ತು ಆದರೆ ಇಲ್ಲಿ ನೋಡಿದರೆ ಸಮ್ಮೇಳನದ ಅದ್ಭುತ ಯಶಸ್ಸು ಕಂಡಿದೆ. ಇದಕ್ಕೆ ಸಂಘಟಕರಾದ ಬಿ.ವಿ.ನಾಗರಾಜು ಹಾಗೂ ಅವರ ಕುಟುಂಬದವರು ಮತ್ತು ಮಂಜುನಾಥ ಸಾಗರ್ ಅವರ ಪರಿಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಅವರು ಇಲ್ಲಿ ಸೇರಿದ ಸಮೂಹವನ್ನು ನೋಡಿದ ಮೇಲೆ ತಾಯ್ನಡಿನ ಮಮತೆ ಎಷ್ಟಿದೆ ಎಂಬುದರ ಅರಿವಾಯಿತು, ಕನ್ನಡ ಪ್ರೇಮ ಹೀಗೇ ಮುಂದುವರಿಯಲಿ ಎಂದು ಹಾರೈಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಘಟಕ ಮತ್ತು ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಈ ಸಮಾವೇಶಗಳು ಅನಿವಾಸಿ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಸಂಪರ್ಕ ವೇದಿಕೆಯಾದರೆ, ಅಂತರಾಷ್ಟ್ರೀಯವಾಗಿ ಶಾಂತಿ ಮತ್ತು ಸೌಹಾರ್ಧತೆಯನ್ನು ಸಾರುವ ಕಿರು ಪ್ರಯತ್ನವನ್ನು ಮಾಡುತ್ತಿವೆ ಎಂದರು.
ಕೆನಡಾದ ಕನ್ನಡ ಕಸ್ತೂರಿ ರೇಡಿಯೋ ನಿರ್ದೇಶಕ ಬಿ.ವಿ.ನಾಗರಾಜು ಅವರು ಕೆನಡಾದಲ್ಲಿ ಕನ್ನಡಿಗರಿಗೆ ಅರ್ದ ಶತಮಾನದಷ್ಟು ಇತಿಹಾಸವಿದೆ. ಈ ಅಭೂತಪೂರ್ವ ಸಮ್ಮೇಳನದ ಯಶಸ್ಸು ಕನ್ನಡಿಗರ ಇತಿಹಾಸಕ್ಕೆ ಹೊಸ ಭಾಷ್ಯವನ್ನು ಬರೆದಿದೆ ಎಂದರು.
ಯಾಕೂಬ್ ಖಾದರ್ ಗುಲ್ಪಾಡಿ ಅವರ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಪುಸ್ತಕವನ್ನು ಬಿಡುಗಡೆ ಮಾಡಿದ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಪುಸ್ತಕದ ಲೇಖಕ ಯಾಕೂಬ್ ಒಳ್ಳೆಯ ಸಂಘಟಕ ಎಂದರು. ವಲಸೆ ಹಕ್ಕಿಗಳ ಹಾಡು ಹಾಗೂ ಅವುಗಳ ಕಲರವ ಈ ಸಮಾವೇಶವಾಗಿದೆ ಎಂದರು.
ಸಮ್ಮೇಳನಕ್ಕೆ ಬಂದಿದ್ದ ಶಿವಗಂಗೆಯ ಮಲೆಯ ಶಾಂತ ಮುನಿ ದೇಶಿ ಕೇಂದ್ರ ಸ್ವಾಮೀಜಿ ಹಾಗೂ ಬೆಜ್ಜವಳ್ಳಿಯ ಸಂತೋಷ್ ಗುರೂಜಿ ಅವರು ಆಶೀರ್ವಚನ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜನೆಯಲ್ಲಿ ಜರುಗಿದ ಅನಿವಾಸಿ ಕನ್ನಡಿಗರು, ಕನ್ನಡ ಪಾಲನೆ ಮತ್ತು ಮಾಧ್ಯಮದ ಪಾತ್ರ ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪತ್ರಕರ್ತ ಇ.ವಿ. ಸತ್ಯನಾರಾಯಣ, ಕೆನಡಾ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಮೇಶ್ ಬೆಂಗಳೂರು ಸತೀಶ್ ವೆಂಕಟರಮಣ ದುಬೈ ವಿಷಯ ಮಂಡಿಸಿದರು.
ಕೆನಡಾದ ಕನ್ನಡಿಗ ದಂಪತಿಗಳ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು. ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೌನ್ಸುಲ್ ಜನರಲ್ ಅಖಿಲೇಶ್ ವಿಶ್ರ ವಹಿಸಿದ್ದರು. ಕವಿಗಳಾದ ಜಯಪ್ರಕಾಶ ರಾವ್, ಯಾಕೂಬ್ ಖಾದರ್ ಗುಲ್ಪಾಡಿ, ಕೆನಡಾದ ಬುಹಾರಿ, ಬಸವರಾಜ್ ಪಾಟೀಲ್ ಹಾಗೂ ಉಷಾ ರಾಜಶೇಖರ್ ತಮ್ಮ ಕವನ ವಾಚಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಮೇರಿಕದ ಡಾ. ಅಪ್ಪ ಸ್ವಾಮಿ ಗೌಡ, ಡಾ. ಹಳೇಕೋಟೆ ವಿಶ್ವಾಮಿತ್ರ, ಮುಂಬೈನ ಎನ್.ಪಿ. ಸುವರ್ಣ, ಶಿವರಾಮ ಭಂಡಾರಿ ಹಾಗೂ ಬೆಂಗಳೂರಿನ ಡಾ.ವಿ. ನಾಗರಾಜು . ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ವಿ. ಅವರನ್ನು ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಲನಚಿತ್ರ ನಟ ದರ್ಶನ್ ತೂಗುದೀಪ, ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಯಶಸ್ವಿಯಾಗಿ ಜರುಗಿತು.