ಕುಂದಾಪುರ: ಆಕೆಗೆ ಓದುವ ಹಂಬಲ ಓದಿ ಮನೆಯವರನ್ನು ಸಾಕಿ ಸಲಹುವ ಮಹದಾಸೆ. ಹಾಗಾಗಿಯೇ ಮನೆಯಿಂದ ನಾಲ್ಕೈದು ಕಿಲೋಮೀಟರ್ ದೂರದ ಕಾಲೇಜಿಗೆ ಓದುವ ಬಯಕೆಯಿಂದಲೇ ಕಾಲುದಾರಿಯಲ್ಲಿ ನಿತ್ಯ ಹೋಗಿ ಬರುತ್ತಿದ್ದವಳು ಅಂದೊಂದು ದಿನ ಕಾಡು ದಾರಿಯ ನಿರ್ಜನ ಪ್ರದೇಶದಲ್ಲಿ ಹೆಣವಾಗಿ ಬಿದ್ದಿದ್ದಳು. ಹೀಗೆ ಹೆಣವಾಗಿ ಬಿದ್ದವಳೇ ಬೈಂದೂರು ಸಮೀಪದ ಶಿರೂರಿನ ಆಲಂದೂರು ಕೋಣನಮಕ್ಕಿ ನಿವಾಸಿ ರತ್ನಾ ಕೊಠಾರಿ (17) ಅವರ ನಿಗೂಢ ಸಾವು ಸಂಬವಿಸಿ ಇಂದಿಗೆ (ಜುಲೈ9ಕ್ಕೆ) ವರ್ಷ ಕಳೆದಿದೆ. ಈ ಬಗ್ಗೆ ಒಂದು ವರದಿಯಿಲ್ಲಿದೆ.
(ರತ್ನಾ ಕೊಠಾರಿ)
(ರತ್ನಾ ಕೊಠಾರಿ ತಾಯಿ ಸಾಕು ಕೊಠಾರಿ)
(ರತ್ನಾ ಕೊಠಾರಿ ಮನೆ)
(ರತ್ನಾ ಕೊಠಾರಿ ಮನೆಗೆ ತೆರಳುವ ರಸ್ತೆ ಅವ್ಯವಸ್ಥೆ)
ಬೈಂದೂರು ಯಡ್ತರೆ ಗ್ರಾಮದ ಆಲಂದೂರು ಕೋಣಮಕ್ಕಿಯ ಶಂಕರ ಕೊಠಾರಿ ಸಾಕು ಕೊಠಾರಿ ದಂಪತಿಗಳ ಪುತ್ರಿಯಾಗಿರುವ ರತ್ನ ಕೊಠಾರಿ ಶಿರೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. ಓದುವ ಬಯಕೆಯಿಂಲೇ ಈಕೆ ತನ್ನ ಮನೆ ಆಲಂದೂರಿನ ಕೋಣನಮಕ್ಕಿಯಿಂದ ಸುಮಾರು 4 ಕಿ.ಮೀ. ದೂರದ ಕಾಲೇಜಿಗೆ ನಡೆದುಕೊಂಡೇ ದುರ್ಗಮ ಕಾಡಿನಲ್ಲಿ ಹೋಗುತ್ತಿದ್ದಳು. ಜುಲೈ 9 ರಂದು ಕಾಲೇಜಿಗೆ ಹೋಗಿ ತನ್ನ ಮೂವರು ಗೆಳತಿಯರೊಡನೆ ಸಾವಂತಗುಡ್ಡೆವರೆಗೂ ಬಂದ ಆಕೆ ಮನೆಗೆ ತೆರಳದೇ ನಿಗೂಢವಾಗಿ ನಾಪತ್ತೆಯಾಗಿದ್ದಳು. ಊರಿನವರು ಸತತವಾಗಿ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ, ಬಳಿಕ ಆಕೆ ಮನೆಯವರು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ಹಾಗೂ ಹೊಳೆಗೆ ಕಾಲು ಜಾರಿ ಬಿದ್ದಿರಬಹುದೆಂದು ಶಂಕೆ ವ್ಯಕ್ತಪಡಿಸಿ ದೂರು ದಾಖಲು ಮಾಡಿದ್ದು ಕಾಣೆಯಾದ ಮೂರು ದಿನಗಳ ಬಳಿಕ (ಜುಲೈ12) ಆಕೆಯ ಮೃತದೇಹ ಸಾವಂತಗುಡೆಯಲ್ಲಿ ಆಕೆ ಮನೆಗೆ ತೆರಳುವ ಕಾಲುದಾರಿಯ ಸಮೀಪವೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸರಕಾರದ ಪರಿಹಾರ ಸಿಕ್ಕಿಲ್ಲ- ಬಡಕುಟುಂಬ ಕಂಗಾಲು: ಗರ್ಭಕೋಶದ ಶಸ್ತ್ರಚಿಕಿತ್ಸೆಯಿಂದ ಬಳಲುತ್ತಿರುವ ತಾಯಿ, ಕೂಲಿನಾಲಿ ಮಾಡಿ ದಿನಕಳೆಯುವ ತಂದೆ, ಸ್ಥಳೀಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿ ಮನೆಯ ಜವಬ್ದಾರಿ ನಿರ್ವಹಿಸುವ ಅಣ್ಣ ಈ ಮೂವರು ಮಗಳು ಸಾವನ್ನಪ್ಪಿ ವರ್ಷ ಕಳೆದರೂ ಆ ನೋವಿನಿಂದ ಹೊರಬಂದಿಲ್ಲ. ತಮ್ಮ ಮಗಳ ಅಗಲುವಿಕೆಯಿಂದ ರೋಸಿಹೋಗಿದ್ದಾರೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ ಸಾಕು ಕೊಠಾರಿ ಮಗಳ ಸಾವಿನಿಂದ ಇನ್ನಷ್ಟು ಜರ್ಝರಿತರಾಗಿದ್ದು, ಯಾರ ಬಳಿಯೂ ಮಾತನಾಡುತ್ತಿಲ್ಲ. ಇನ್ನು ಸರಕಾರ ಮೂರು ಲಕ್ಷ ಪರಿಹಾರ ಘೋಷಿಸಿದೆಯಾದರೂ ಕೂಡ ವರ್ಷ ಕಳೆದರೂ ಈ ಪರಿಹಾರದ ಮೊತ್ತ ಈ ಬಡ ಕುಟುಂಬದ ಕೈ ಸೇರಿಲ್ಲ. ಇನ್ನೂ ಕೋಣನಮಕ್ಕಿ ರಸ್ತೆಯೂ ಅಭಿವೃದ್ದಿ ಕಂಡಿಲ್ಲ, ಈ ಬಗ್ಗೆ ಯಾರ ಬಳಿ ಹೇಳಿದರೂ ಉಪಯೋಗವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
(ಕಾಡು ದಾರಿಯಲ್ಲಿ ಹೆಣವಾಗಿ ಬಿದ್ದ ರತ್ನಾ- ಸಂಗ್ರಹ ಚಿತ್ರ)
( ಪೊಲೀಸರಿಂದ ಅಂದು ನಡೆದ ಪರಿಶೀಲನೆ- ಸಂಗ್ರಹ ಚಿತ್ರ)
(ರತ್ನಾ ಕೊಠಾರಿ ಫ್ಯಾಮಿಲಿ- ಸಂಗ್ರಹ ಚಿತ್ರ)
ಸಾವಿನ ಕಾರಣ ಇನ್ನೂ ನಿಗೂಢ; ಕಾಲುದಾರಿಯಿಂದ ಅನತಿ ದೂರದಲ್ಲಿ ಬಿದ್ದ ಶವವನ್ನು ಕಂಡ ಸಾರ್ವಜನಿಕರು ಇದಂದು ವ್ಯವಸ್ಥಿತ ಕೊಲೆ ಹಾಗೂ ಆಕೆಯ ಮೇಲೆ ಅತ್ಯಾಚಾರ ನಡೆದಿರಬಹುದೆಂಬ ಶಂಕೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು, ಆದರೆ ಸ್ಥಳಪರಿಶೀಲನೆ ನಡೆಸಿದ ಅಂದಿನ ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ಮೇಲ್ನೋಟಕ್ಕೆ ಅತ್ಯಾಚಾರ ನಡೆದ ಬಗ್ಗೆ ಕಾಣಿಸುತ್ತಿಲ್ಲ ಎಂದಿದ್ರು, ಬಳಿಕ ವೈದ್ಯರ ಪ್ರಾಥಮಿಕ ವರದಿಯಲ್ಲೂ ಅತ್ಯಾಚಾರ ನಡೆದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿರದ ಕಾರಣ ಉನ್ನತ ಮಟ್ಟದ ವಿಧಿವಿಜ್ಞಾನ ವರದಿಗೆ ಕಳಿಸಲಾಗಿತ್ತು. ಅಲ್ಲಿಯೂ ಕೂಡ ಯಾವುದೇ ಅತ್ಯಾಚಾರ ನಡೆದಿಲ್ಲ, ಮತ್ತು ಕೊಲೆಯೆಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. ವ್ಯದ್ಯರ ವರದಿಯ ಪ್ರಕಾರ ಮೃತದೇಹವು ಸಂಪೂರ್ಣ ಕೊಳೆತ ಕಾರಣ ಕೆಲವೊಂದು ಮಾಹಿತಿ ಅಸ್ಪಷ್ಟವಾಗಿ ಲಭಿಸಿದೆ, ನಿಗೂಢ ಸಾವಿನ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗದಿದ್ದರೂ ಕೂಡ ಇದೊಂದು ಸ್ವಾಭಾವಿಕ ಮರಣವೆನ್ನುವುದನ್ನು ತಳ್ಳುಹಾಕುವಂತಿಲ್ಲ ಎಂದು ವರದಿಯಲ್ಲಿದೆ ಎಂಬ ಬಗ್ಗೆ ಪೊಲೀಸ್ ಉನ್ನತ ಮೂಲಗಳು ತಿಳಿಸಿದೆ.
ಓದುವ ಆಸೆ ಸಾವಿಗೆ ದಾರಿ: ಶಿಕ್ಷಣದಲ್ಲಿ ಆಸಕ್ತಿಯಿದ್ದ ಈಕೆ ತನ್ನ ಮನೆಯಿಂದ ಒಬ್ಬಳೇ ದುರ್ಗi ಹಾಡಿಯಲ್ಲಿ ಸಾಗುತ್ತಿದ್ದಳು, ಅದೊಂದು ಕಾಲುದಾರಿಯಂತಹ ಪ್ರದೇಶವಾಗಿದ್ದು ಸುಮಾರು ಅರ್ಧ ಕಿ.ಮೀ. ಕಾಡು ಪ್ರದೇಶ ನಿರ್ಜನವಾಗಿತ್ತು, ಮನೆಯಿಂದ ಕಾಲೇಜಿಗೆ ಈ ದಾರಿ ಹತ್ತಿರವಾದ ಕಾರಣವಾದ್ದರಿಂದ ಹಾಗೂ ನಿತ್ಯ ತಿರುಗಾಡುತ್ತಿದ್ದ ಕಾರಣದಿಂದಾಗಿ ಸುಲಭವಾಗಿ ಆ ದಾರಿಯಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದಳು, ಈಕೆ ಮನೆಯಿಂದ ೨ ಕೀ.ಮೀ ದೂರದ ಈ ಕಾಡು ದಾಟಿ ಬಳಿಕ ರಸ್ತೆಗೆ ಬಂದ ಮೇಲೆ ಇತರೇ ಗೆಳತಿಯರೊಂದಿಗೆ ಕಾಲೇಜಿಗೆ ಹೋಗುವ ಪರಿಪಾಠವಿತ್ತು. ಅಂದು ಕೂಡ ಕಾಲೆಜಿಗೆ ಹೋಗಿ ಮನೆಗೆಂದು ಮರಳಿದ ಆಕೆ ವಾಪಾಸ್ಸು ಮನೆಗೆ ಸೇರಲೇ ಇಲ್ಲ. ಬದಲಾಗಿ ದಟ್ಟ ಕಾಡಿನ ಮದ್ಯೆ ಹೆಣವಾಗಿ ಮಲಗಿದ್ದಳು.
ಉತ್ತಮ ನಡತೆಯ ಹುಡುಗಿ: ರತ್ನಾ ಕೋಠಾರಿ ತಾನಾಯಿತು ತನ್ನ ಓದಾಯಿತು ಎಂದು ಇರುತ್ತಿದ್ದ ಹುಡುಗಿ. ಈಕೆ ಓದುವ ಆಸೆಯಿಂದಲೇ ತನ್ನ ಮನೆಯಿಂದ ಸುಮಾರು ೪ ಕಿ.ಮೀ. ದೂರದ ಶಿರೂರು ಕಾಲೇಜಿಗೆ ನಡೆದೇ ಹೋಗುತ್ತಿದ್ದಳು, ಬಸ್ಸಿನಲ್ಲಿ ಹೋಗುವುದಕ್ಕೆ ಹಣದ ಕೊರತೆಯಿಂದಲೇ ಈಕೆ ದುರ್ಗಮ ಕಾಡು ಹಾದಿಯನ್ನು ಅವಲಂಭಿಸಿದ್ದಳು. ಓದಿನಲ್ಲಿ ಉತ್ತಮವಾಗಿದ್ದ ಈಕೆ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ, ಯಾರೊಂದಿಗೂ ಹೆಚ್ಚಾಗಿ ಮಾತನಾಡದ ಇವಳು ಮೃದು ಸ್ವಭಾವದವಳಾಗಿದ್ದಳು.
ಇಂದು ಬೃಹತ್ ಪ್ರತಿಭಟನೆ: ರತ್ನಾ ಕೊಠಾರಿ ನಿಗೂಢ ಸಾವಿನ ತರುವಾಯ ವಿವಿಧ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಆಕೆಯ ಸಾವಿಗೆ ನ್ಯಾಯ ಕೋರಿ ಪ್ರತಿಭಟನೆಯನ್ನು ನಡೆಸಿದೆ. ಆದರೇ ಆಕೆಯ ಸಾವಿನ್ನು ನಿಗೂಢವಾಗಿಯೇ ಉಳಿದಿದೆ, ಸ್ಥಳೀಯ ಶಾಸಕರು ಘೋಷಿಸಿದ ಮೂರು ಲಕ್ಷ ಪರಿಹಾರವೂ ಕೂಡ ಈ ಬಡ ಕುಟುಂಬದ ಕೈ ಸೇರಿಲ್ಲ. ಈಕೆಯ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಡಿವೈಎಫ್ಐ, ಎಸ್.ಎಫ್.ಐ. ಮತ್ತು ಸಿ.ಐ.ಟಿ.ಯು. ಸಂಘಟನೆಗಳಿಂದ ಇಂದು ಕೂಡ ಬೈಂದುರಿನಲ್ಲಿ ಪ್ರತಿಭಟನೆ ನಡೆಸಿ ಶಾಸಕರ ಕಛೇರಿಯೆದುರು ಧರಣಿ ಕೂರಲಿದ್ದಾರೆ.
ಒಟ್ಟಿನಲ್ಲಿ ರತ್ನಾ ಕೊಠಾರಿ ನಿಗೂಢ ಸಾವು ನಡೆದು ಇಂದಿಗೆ ವರ್ಷವಾಗಿದೆ, ಇನ್ನಾದರೂ ಆಕೆಯ ಬಡಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಲಿ ಎಂಬುದು ನಮ್ಮ ಆಶಯ.
ವರದಿ-ಯೋಗೀಶ್ ಕುಂಭಾಸಿ