ಉಳ್ಳಾಲ ,ಜುಲೈ.06: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ರವಿವಾರ ರಾತ್ರಿ ತಲಪಾಡಿ ಸಮೀಪದ ಕೊಲ್ಯ ಬಳಿ ರಾ.ಹೆ.66 ರಲ್ಲಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಕೊಲ್ಯ ನಿವಾಸಿ ಶಿವಪ್ರಸಾದ್ ನಾಯಕ್ (44) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಶಿವಪ್ರಸಾದ್ ತಮ್ಮ ಸ್ಕೂಟರ್ ನಲ್ಲಿ ಮಂಗಳೂರು ಕಡೆಗೆ ಹೋಗಲು ಹೆದ್ದಾರಿಗೆ ಬಂದಾಗ ಕೇರಳದತ್ತ ಹೋಗುವ ಬಸ್ ಡಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಸ್ಕೂಟರ್ ಸಮೇತ ಬಿದ್ದ ಶಿವ ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮಂಗಳೂರು ಮಹಾನಗರದ ಪಾಲಿಕೆಯಲ್ಲಿ ಉದ್ಯೋಗಿಯಾಗಿದ್ದರು. ತಾಯಿ,ಪತ್ನಿಯನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನೆಲೆಸಿತ್ತು. ಮಂಗಳೂರು -ಕೇರಳ ನಡುವೆ ಸಂಚರಿಸುವ ಬಸ್ಸ್ ಗಳು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಈಗಾಗಲೇ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿವೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.